newsics.com
ಹಾಸನ: ಕಳೆದ ಎರಡು ದಶಕಗಳಿಂದ ಜಿಲ್ಲೆಯ ಸಕಲೇಶಪುರ, ಆಲೂರು ಭಾಗದಲ್ಲಿ ಕಾಡಾನೆಗಳ ದಾಂಧಲೆ ಹೆಚ್ಚಾಗಿತ್ತು. ಆದರೆ, ಕಳೆದ ಒಂದು ತಿಂಗಳಿನಿಂದ ಬೇಲೂರು ತಾಲೂಕಿಗೆ ಎಂಟ್ರಿ ಕೊಟ್ಟಿದ್ದು ಮಲೆನಾಡಿಗರ ಬದುಕನ್ನು ಮೂರಾಬಟ್ಟೆಯಾಗಿಸಿವೆ.
ಕಳೆದ ನಾಲ್ಕು ವರ್ಷಗಳಿಂದ ಕಾಡಾನೆಗಳ ಹಾವಳಿ ದಿನೇದಿನೆ ಹೆಚ್ಚುತ್ತಲೇ ಇದೆ. ಬಿಕ್ಕೋಡು, ಚಿಕ್ಕಬಿಕ್ಕೋಡು, ತಾವರೆಕೆರೆ, ನಿಡುಮನಹಳ್ಳಿ, ಬೆಳ್ಳಾವರ, ಇಂಟಿತೊಳಲು, ಚೌಡನಹಳ್ಳಿ ಬಕ್ರವಳ್ಳಿ ಇತರೆ ಸುತ್ತಮುತ್ತಲ ಗ್ರಾಮದಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿವೆ. ರೈತರು ಹಾಗೂ ಕಾಫಿ ಬೆಳೆಗಾರರ ನಿದ್ದೆಗೆಡಿಸಿವೆ.
ಸುಮಾರು ಐವತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಈ ಭಾಗದಲ್ಲಿ ನೆಲೆಯೂರಿದ್ದು ಅಡಕೆ, ಕಾಫಿ, ಬಾಳೆ, ತೆಂಗು, ಭತ್ತ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ.
ಮಲೆನಾಡು ಭಾಗದ ರೈತರು ಹಾಗೂ ಕಾಫಿ ಬೆಳೆಗಾರರಿಗೆ ಹಿಂದೆಂದೂ ಕಾಣದ ಸಂಕಷ್ಟ ಎದುರಾಗಿದೆ. ಕಾಡಾನೆಗಳ ಕಾಟಕ್ಕೆ ಬೇಸತ್ತ ರೈತರು ಹಾಗೂ ಕಾಫಿ ಬೆಳೆಗಾರರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದೆ ಪಾಳು ಬಿಟ್ಟಿದ್ದಾರೆ.
ಸಕಲೇಶಪುರ, ಆಲೂರು, ಬೇಲೂರು ಭಾಗದ ರೈತರು ಜೀವನೋಪಾಯಕ್ಕಾಗಿ ಭತ್ತ, ರಾಗಿ, ಮೆಕ್ಕೆಜೋಳ ಬೆಳೆಯುತ್ತಿದ್ದರು. ಆದರೆ, ಆನೆಗಳ ಹಾವಳಿಯಿಂದಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದು, ಜಮೀನನ್ನು ಉಳುಮೆ ಮಾಡದೆ ಪಾಳು ಬಿಟ್ಟು ಕುಟುಂಬ ನಿರ್ವಹಣೆಗಾಗಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇನ್ನೂ ಕೆಲವು ರೈತರು ತಮ್ಮ ಜಮೀನಿನಲ್ಲಿ ಭತ್ತ, ಮೆಕ್ಕೆಜೋಳ, ಶುಂಠಿ ಬೆಳೆದಿದ್ದು ಹಗಲು ರಾತ್ರಿ ಎನ್ನದೆ ತಮ್ಮ ಜೀವನನ್ನು ಪಣಕ್ಕಿಟ್ಟು ಬೆಳೆ ಕಾಯುತ್ತಿದ್ದಾರೆ. ತಮ್ಮ ಜಮೀನು ಬಳಿ ಬೆಂಕಿ ಹಾಕಿಕೊಂಡು ಮೈಕ್ ಮೂಲಕ ಸದ್ದು ಮಾಡಿ ಕಾಡಾನೆಗಳು ಬರುತ್ತಿದ್ದಂತೆ ಪಟಾಕಿ ಸಿಡಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.
ಕಾಡಾನೆ ದಾಳಿಯಿಂದ ನಾಶವಾದ ಬೆಳೆಗೆ ಅರಣ್ಯ ಇಲಾಖೆ ಸರಿಯಾದ ಪರಿಹಾರ ಕೂಡ ನೀಡುತ್ತಿಲ್ಲ. ಭತ್ತ, ಮೆಕ್ಕೆಜೋಳ, ಶುಂಠಿ ಬೆಳೆಯುವುದನ್ನು ನಿಲ್ಲಿಸುವಂತೆ ಹೇಳುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಪ್ರತಿನಿತ್ಯ ವಿದ್ಯಾರ್ಥಿಗಳು ಜೀವ ಭಯದಲ್ಲೇ ಶಾಲಾ ಕಾಲೇಜುಗಳಿಗೆ ತೆರಳಬೇಕಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್, ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ವಯಾಗ್ರ ಸೇವಿಸಿ ಬಾಲಕಿ ಜತೆ ಲೈಂಗಿಕ ಸಂಪರ್ಕ: ಸೂರತ್ ಡೈಮಂಡ್ ಮ್ಯಾನೇಜರ್ ಸಾವು