newsics.com
ಗಡ್ಚಿರೋಲಿ: ಸೆಲ್ಫಿ ಹುಚ್ಚಿಗೆ ಮತ್ತೊಂದು ಬಲಿಯಾಗಿದ್ದು ಕಾಡಾನೆ ಜೊತೆ ಫೋಟೋ ತೆಗೆದುಕೊಳ್ಳಲು ಹೋಗಿದ್ದ ಕಾರ್ಮಿಕನ ಮೇಲೆ ಆನೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿಯ ಅಬಾಪುರ ಅರಣ್ಯದಲ್ಲಿ ನಡದಿದೆ.
ಶ್ರೀಕಾಂತ್ ರಾಮಚಂದ್ರ ಸಾತ್ರೆ ಮೃತ ಕಾರ್ಮಿಕ ಎಂದು ತಿಳಿದು ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ನವೆಗಾಂವ್ ನಿವಾಸಿಗಳಾದ ಶ್ರೀಕಾಂತ್ ರಾಮಚಂದ್ರ ಸಾತ್ರೆ ಮತ್ತು ಅವರ ಇಬ್ಬರು ಸ್ನೇಹಿತರು ಮಹಾರಾಷ್ಟ್ರದ ಗಡ್ಚಿರೋಲಿಯ ಅಬಾಪುರ ಅರಣ್ಯಕ್ಕೆ ಕಾಡಾನೆಯನ್ನು ನೋಡಲು ಹೋಗಿದ್ದರು. ಈ ವೇಳೆ ಶ್ರೀಕಾಂತ್ ರಾಮಚಂದ್ರ ಸಾತ್ರೆ ದೂರದಲ್ಲಿದ್ದ ಆನೆಯನ್ನು ನೋಡಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಆನೆ ಆತನ ಮೇಲೆ ದಾಳಿ ಮಾಡಿದೆ. ಆನೆ ಬರುತ್ತಿರವುದನ್ನು ನೋಡಿದ ಮೂವರೂ ಸ್ನೇಹಿತರು ಓಡಿದ್ದಾರೆಯಾದರೂ ಶ್ರೀಕಾಂತ್ ಮಾತ್ರ ಆನೆಗೆ ಸಿಕ್ಕಿಬಿದ್ದಿದ್ದಾನೆ.
ಈ ವೇಳೆ ಆತನನ್ನು ಹಿಡಿದ ಆನೆ ಸೊಂಡಿಲಿನಿಂದ ಎತ್ತಿ ನೆಲಕ್ಕೆ ಬಡಿದು ಆತನನ್ನು ತುಳಿದು ಕೊಂದು ಹಾಕಿದೆ. ಅಂದಹಾಗೆ ಶ್ರೀಕಾಂತ್ ಕೇಬಲ್ ಅಳವಡಿಕೆ ಕೆಲಸಕ್ಕಾಗಿ ನವೆಗಾಂವ್ನಿಂದ ತನ್ನ ಕೆಲವು ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದರು. ಇದೇ ವೇಳೆ ಎರಡು ದಿನಗಳ ಹಿಂದೆ ಮಂಗಳವಾರ ಚಿತ್ತಗಾಂಗ್ ಮತ್ತು ಗಡ್ಚಿರೋಲಿ ಅರಣ್ಯ ಪ್ರದೇಶದಿಂದ ಕಾಡಾನೆಗಳು ಹೊರಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮುಟ್ನೂರು ಅರಣ್ಯ ಪ್ರದೇಶದ ಅಬಾಪುರ ಅರಣ್ಯದಲ್ಲಿ ಆನೆ ಸಂಚರಿಸುತ್ತಿತ್ತು ಎನ್ನಲಾಗಿದೆ.