newsics.com
ಬೆಳಗಾವಿ: ಖಾಸಗಿ ಫೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬನ ಸಾವು ಅನುಮಾನಕ್ಕೆ ಕಾರಣವಾಗಿದೆ.
ಹೌದು, ಆರು ದಿನಗಳ ಹಿಂದೆ ಬೆಳಗಾವಿಯ ಆಂಜನೇಯ ನಗರದ ನಿವಾಸಿ, ಆಗರ್ಭ ಶ್ರಿಮಂತ, ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮನ್ನವರ ಸಾವು ಸಂಭವಿಸಿತ್ತು. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಅವರ ಪತ್ನಿ ಉಮಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ತನಿಖೆಯಿಲ್ಲದೆ ಅಂತ್ಯಕ್ರಿಯೆ ನಡೆದಿತ್ತು.
ತಂದೆಯ ಸಾವಿನ ಸುದ್ದಿ ತಿಳಿದು ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಸಂತೋಷರ ಪುತ್ರಿ ಸಂಜನಾ, ಅಂತ್ಯಕ್ರಿಯೆಯ ಬಳಿಕ ಮನೆಯೊಳಗಿನ ಸಿಸಿ ಕ್ಯಾಮರಾ ಪುಟೇಜ್ ತೋರಿಸುವಂತೆ ತಾಯಿಗೆ ಕೇಳಿದ್ದಾರೆ. ಆಗ ಉಮಾ, ಈಗಷ್ಟೆ ಅಂತ್ಯಕ್ರಿಯೆ ಮುಗಿದಿದೆ, ಸ್ನಾನ ಮಾಡಿ ಬಾ ಹೋಗು ಎಂದು ಪುತ್ರಿ ಸಂಜನಾಗೆ ಹೇಳಿದ್ದಾಳೆ. ಬಳಿಕ ಬಂದು ಸಿಸಿಟಿವಿ ಫೂಟೇಜ್ ಪಡೆದ ಮಗಳಿಗೆ, ಸಾವು ಸಂಭವಿಸಿದ ಒಂದು ಗಂಟೆಯ ಅವಧಿ ಫೂಟೇಜ್ ದೊರೆತಿಲ್ಲ. ಅದು ಡಿಲೀಟ್ ಆಗಿದೆ ಎಂಬ ಉತ್ತರ ಬಂದಿದೆ
ಸಂಜನಾ ನೇರವಾಗಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಂದೆಯ ಸಾವಿನ ಬಗ್ಗೆ ಅನುಮಾನ ಇದೆ, ತನಿಖೆ ಮಾಡುವಂತೆ ಮನವಿ ಮಾಡಿದ್ದಳು. ಸಂತೋಷ ಅವರ ಕೊಲೆ ಅಕ್ಟೋಬರ್ 9ರಂದೇ ನಡೆದಿದೆ ಎನ್ನಲಾಗಿದೆ. ಬುಧವಾರ ಸ್ಮಶಾನದಲ್ಲಿ ಹೂಳಲಾಗಿದ್ದ ಸಂತೋಷ ಮೃತದೇಹ ಹೊರತೆಗೆಯಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ಸಾಬೀತಾದರೆ ಆರೋಪಿಗಳನ್ನು ವಶಕ್ಕೆ ಪಡೆಯಲಿದ್ದಾರೆ. ಜೊತೆಗೆ ಉಮಾ ಅವರ ಫೇಸ್ಬುಕ್ ಗೆಳೆಯ ಮಂಗಳೂರು ಮೂಲದವ ಎಂದು ಹೇಳಲಾಗಿದ್ದು, ಅವನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.