newsics.com| ನ್ಯೂಸಿಕ್ಸ್
ಮದುವೆಯಾಗುವುದಾಗಿ ನಂಬಿಸಿ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಖಾಸಗಿ ಕಾಲೇಜಿನ ಉಪನ್ಯಾಸಕನನ್ನು ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನು ಬಳ್ಳಾರಿ ನಗರದ ಖಾಸಗಿ ಕಾಲೇಜೊಂದರಲ್ಲಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ರವಿಕಿರಣ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಸಂತ್ರಸ್ತೆ ಹಾಗೂ ಆಕೆಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಈತ ಅದೇ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನೇ ತನ್ನ ವಿಕೃತ ಆಸೆಗೆ ಟಾರ್ಗೆಟ್ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.
2025ರಲ್ಲಿ ಕಾಲೇಜಿನಲ್ಲಿ ಉಪನ್ಯಾಸಕ ರವಿಕಿರಣ್ ಹಾಗೂ ವಿದ್ಯಾರ್ಥಿನಿ ನಡುವೆ ಪರಿಚಯವಾಗಿ ಸ್ನೇಹ ಬೆಳೆದಿದೆ. ಇಬ್ಬರ ನಡುವೆ ಸಲುಗೆ ಹೆಚ್ಚಾಗುತ್ತಿದ್ದಂತೆ, ಆರೋಪಿಯು ವಿದ್ಯಾರ್ಥಿನಿಗೆ “ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ನಂಬಿಸಿದ್ದಾನೆ. ಹೆತ್ತವರ ಮತ್ತು ಸಮಾಜದ ವಿರೋಧದ ನಡುವೆಯೂ ಬಾಲಕಿಯನ್ನು ಪುಸಲಾಯಿಸಿ, ಪದೇಪದೇ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ದಿನಗಳು ಉರುಳುತ್ತಿದ್ದಂತೆ ಉಪನ್ಯಾಸಕ ರವಿಕಿರಣ್ನ ಅಸಲಿ ಮುಖ ಮತ್ತು ಆತನ ಹಿನ್ನೆಲೆ ಹೊರಬಿದ್ದಿದೆ. ಆತನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವ ಸತ್ಯ ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ತಿಳಿದ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಂಬಿದ ವ್ಯಕ್ತಿಯೇ ಇಷ್ಟೊಂದು ದೊಡ್ಡ ದ್ರೋಹ ಎಸಗಿದ್ದಾನೆ ಎಂಬುದನ್ನು ಅರಿತ ಪೋಷಕರು ತಕ್ಷಣವೇ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಬಾಲಕಿಯ ಪೋಷಕರು ತಡಮಾಡದೇ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಉಪನ್ಯಾಸಕನ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಪೋಷಕರು ನೀಡಿದ ದೂರಿನ ಅನ್ವಯ ಅತ್ಯಂತ ಗಂಭೀರವಾದ ಪೋಕ್ಸೋ ಕಾಯ್ದೆ ಹಾಗೂ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಕಾಮುಕ ಉಪನ್ಯಾಸಕ ರವಿಕಿರಣ್ನನ್ನು ಬಳ್ಳಾರಿ ಮಹಿಳಾ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.