newsics.com | ನ್ಯೂಸಿಕ್ಸ್
‘ಕನ್ನಡ ನಟ ದರ್ಶನ್ ಪುತ್ರ ವಿನೀಶ್ ಕಾರು ಆಕ್ಸಿಡೆಂಟ್ ಮಾಡಿದ್ದಾರೆ. ದ್ವಿಚಕ್ರ ವಾಹನಕ್ಕೆ ವಿನೀಶ್ ಕಾರು ಗುದ್ದಿಸಿದ್ದಾರೆ. ಘಟನಾ ಸ್ಥಳದಲ್ಲಿ ವಿನೀಶ್ ಹಾಗೂ ಸ್ಥಳೀಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ವಿನೀಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಗುರುವಾರ ರಾತ್ರಿ ಹೊರಬಿದ್ದ ಸುದ್ದಿಗೆ ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
ಅದೊಂದು ಸುಳ್ಳು ಸುದ್ದಿ ಎಂಬುದು ವಿಜಯಲಕ್ಷ್ಮಿ ದರ್ಶನ್ ಅವರ ಸ್ಪಷ್ಟನೆಯಿಂದ ಸಾಬೀತಾಗಿದೆ. ಅಲ್ಲಿ ನಡೆದಿರೋದೇ ಬೇರೆ.! ಸುಳ್ಳು ಸುದ್ದಿ ಹಬ್ಬಿದ ಬಳಿಕ ವಿನೀಶ್ ಬಗ್ಗೆ ತಾಯಿ ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
‘ವಿನೀಶ್ ಸಂಪೂರ್ಣ ಸುರಕ್ಷಿತವಾಗಿದ್ದು, ಪ್ರಸಾರವಾಗುತ್ತಿರುವ ಅಪಘಾತದ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ’ ಎಂದು ವಿಜಯಲಕ್ಷ್ಮೀ ದರ್ಶನ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ವಿಜಯಲಕ್ಷ್ಮಿ ದರ್ಶನ್, “ವಿನೀಶ್ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣವಾಗಿ ತಪ್ಪು. ಅವರು ಆರೋಗ್ಯವಾಗಿದ್ದು, ಸುರಕ್ಷಿತರಾಗಿದ್ದಾರೆ” ಎಂದು ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟಪಡಿಸಿದ್ದಾರೆ.
ಏನಾಗಿತ್ತು?
ವಿಜಯಲಕ್ಷ್ಮೀ ದರ್ಶನ್ ನೀಡಿರುವ ಸ್ಪಷ್ಟನೆಯ ಪ್ರಕಾರ, ಘಟನೆ ನಡೆದ ವೇಳೆ ವಾಹನವನ್ನು ವಿನೀಶ್ ಚಾಲನೆ ಮಾಡುತ್ತಿರಲಿಲ್ಲ. ಎಂದಿನಂತೆ ಅವರ ಚಾಲಕರೇ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಬೆಂಗಳೂರಿನ ಸಂಚಾರ ದಟ್ಟಣೆಯ ನಡುವೆ ಸಣ್ಣ ಮಟ್ಟಿನ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೊಂದು ವಾಹನದ ವ್ಯಕ್ತಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನೂ ಕೇಳಿದ್ದಾರೆ ಎಂದು ವಿಜಯಲಕ್ಷ್ಮೀ ದರ್ಶನ್ ತಿಳಿಸಿದ್ದಾರೆ.
ಸಹಾಯ ಮಾಡಲು ಇಳಿದಿದ್ದ ವಿನೀಶ್
ಘಟನೆಯ ನಂತರ ಬೈಕ್ನಲ್ಲಿ ಇದ್ದವರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದರು. ಆದರೆ ಅವರು ಕೆಲವು ಕ್ಷಣಗಳ ಕಾಲ ಘಟನಾ ಸ್ಥಳದಲ್ಲಿದ್ದ ದೃಶ್ಯಗಳನ್ನು ತಪ್ಪಾಗಿ ಅರ್ಥೈಸಿ, ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ರೀತಿಯಲ್ಲಿ ಕೆಲವು ಕಡೆ ವರದಿ ಮಾಡಲಾಗಿದೆ ಎಂದು ವಿಜಯಲಕ್ಷ್ಮೀ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಕುಟುಂಬ ಈಗಾಗಲೇ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಪರಿಶೀಲಿಸದ ಮತ್ತು ಸಂಚಲನ ಸೃಷ್ಟಿಸುವ ಸುದ್ದಿಗಳು ನಮ್ಮ ಆತಂಕ ಮತ್ತು ನೋವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ವಿಜಯಲಕ್ಷ್ಮಿ ದರ್ಶನ್ ಹೇಳಿದ್ದಾರೆ.
ಸುಳ್ಳು ಸುದ್ದಿಗಳನ್ನು ಹಂಚದಂತೆ ವಿನಂತಿ
”ವಿನೀಶ್ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು” ಎಂದು ವಿಜಯಲಕ್ಷ್ಮಿ ದರ್ಶನ್ ಮನವಿ ಮಾಡಿದ್ದಾರೆ.
Torture of a child ಮಗುವನ್ನು ಒದ್ದು ಉರುಳಿಸಿದ ಅಂಗನವಾಡಿ ಸಹಾಯಕಿ! ಆಘಾತಕಾರಿ ವಿಡಿಯೋ ನೋಡಿ
LPG ಸಿಲಿಂಡರ್ ಮೇಲಿನ ಎಲ್ಲ ನಿರ್ಬಂಧ ತಕ್ಷಣದಿಂದಲೇ ತೆರವು: ಕೇಂದ್ರ ಸರ್ಕಾರ ಘೋಷಣೆ