newsics.com|ನ್ಯೂಸಿಕ್ಸ್
ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳು ರನ್ವೇನಲ್ಲಿ ಮುಖಾಮುಖಿಯಾದ ಗಂಭೀರ ಘಟನೆ ನಡೆದಿದೆ.
ಏರ್ ಟ್ರಾಫಿಕ್ ಕಂಟ್ರೋಲ್ (ATC) ಸಿಬ್ಬಂದಿ ಮತ್ತು ಪೈಲಟ್ಗಳ ಸಮಯ ಪ್ರಜ್ಞೆಯಿಂದಾಗಿ ಭಾರಿ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಮುಂಬೈನಿಂದ ಅಹಮದಾಬಾದ್ಗೆ ಬಂದಿಳಿದ ಏರ್ ಇಂಡಿಯಾ ವಿಮಾನವು, ರನ್ವೇನಿಂದ ಪಾರ್ಕಿಂಗ್ ಕಡೆಗೆ ಚಲಿಸುವಾಗ ನಿಯೋಜಿತ ಮಾರ್ಗವನ್ನು ಬಿಟ್ಟು ಅಚಾತುರ್ಯದಿಂದ ತಪ್ಪು ತಿರುವು ಪಡೆದುಕೊಂಡಿದೆ. ಇದೇ ಸಮಯದಲ್ಲಿ, ಅಹಮದಾಬಾದ್ನಿಂದ ಮುಂಬೈಗೆ ಹೊರಡಲು ಸಿದ್ಧವಾಗುತ್ತಿದ್ದ ಇಂಡಿಗೋ ವಿಮಾನವು ಅದೇ ಮಾರ್ಗದಲ್ಲಿ ಬರುತ್ತಿತ್ತು. ಏರ್ ಇಂಡಿಯಾ ವಿಮಾನದ ತಪ್ಪು ತಿರುವಿನಿಂದಾಗಿ ಎರಡು ವಿಮಾನಗಳು ಒಂದೇ ಟ್ಯಾಕ್ಸಿವೇನಲ್ಲಿ ಎದುರುಬದುರಾಗಿ ಬಂದಿವೆ.
ವಿಮಾನಗಳು ಮುಖಾಮುಖಿ ಆಗುತ್ತಿರುವುದನ್ನು ಗಮನಿಸಿದ ಎಟಿಸಿ ಸಿಬ್ಬಂದಿ ತಕ್ಷಣವೇ ಇಬ್ಬರೂ ಪೈಲಟ್ಗಳಿಗೆ ವಿಮಾನವನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಎರಡು ವಿಮಾನಗಳು ಪರಸ್ಪರ ಸುಮಾರು 200 ಮೀಟರ್ಗಳಷ್ಟು ದೂರ ಇರುವಾಗಲೇ ಸ್ಥಗಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಮತ್ತು ವಿಮಾನಗಳಿಗೂ ಹಾನಿಯಾಗಿಲ್ಲ. ನಂತರ ಏರ್ ಇಂಡಿಯಾ ವಿಮಾನವನ್ನು ಟೋಯಿಂಗ್ ಮಾಡಿ ಪಾರ್ಕಿಂಗ್ ಜಾಗಕ್ಕೆ ಕೊಂಡೊಯ್ಯಲಾಯಿತು. ಆ ಬಳಿಕ ಇಂಡಿಗೋ ವಿಮಾನವು ಮುಂಬೈಗೆ ಹಾರಾಟ ನಡೆಸಿತು. ಈ ಗಂಭೀರ ಲೋಪದ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸಮಗ್ರ ತನಿಖೆಗೆ ಆದೇಶಿಸಿದೆ.
Indian Passport ಪಾಸ್ಪೋರ್ಟ್ ಇದ್ದಾಕ್ಷಣ ಭಾರತೀಯ ಪೌರತ್ವ ಸಾಬೀತಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
Natural disaster ವೆನೆಜುವೆಲಾದಲ್ಲಿ ಭೀಕರ ಭೂಕಂಪ: ಕಾರಕಾಸ್ ಧ್ವಂಸ, 10 ಸಾವಿರಕ್ಕೂ ಹೆಚ್ಚು ಜನ ಸಾವು
Info News ರಾಜ್ಯದಲ್ಲಿ ಇವತ್ತು, ನಾಳೆ ಪಡಿತರ ವಿತರಣೆ ಸೇರಿ ಯಾವ್ಯಾವ ಸೇವೆ ಇರಲ್ಲ?