newsics.com|ನ್ಯೂಸಿಕ್ಸ್
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೆ ಪ್ರಮಾಣವಚನ ಸ್ವೀಕರಿಸಬೇಕೇ? ಹೈಕೋರ್ಟ್ ಆದೇಶ ಇಲ್ಲೂ ಅನ್ವಯವಾಗುತ್ತಾ ಎನ್ನುವ ಚರ್ಚೆ ಈಗ ಜೋರಾಗಿಯೇ ನಡೆಯುತ್ತಿದೆ.
ಜೂನ್ ಮೂರರಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಇವರ ಜತೆಗೆ ಹದಿಮೂರು ಶಾಸಕರೂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಒಬ್ಬೊಬ್ಬರು ಒಂದೊಂದು ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅದರಂತೆಯೇ, ಡಿಕೆ ಶಿವಕುಮಾರ್ ಕೂಡ ತಾವು ಬಹುವಾಗಿ ನಂಬುವ ಸಂಸ್ಥಾನ ಪೀಠದ ಹೆಸರಿನಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈಗ, ಆ ಪ್ರಮಾಣವಚನ ಕಾರ್ಯಕ್ರಮ ಸಂವಿಧಾನಾತ್ಮಕವಾಗಿ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗುವಂತಾಗಿದೆ. ಇದಕ್ಕೆ ಕೇರಳ ಹೈಕೋರ್ಟ್ ಆದೇಶ ಕಾರಣ.
ತಿರುವನಂತಪುರಂ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದು ಅಸಿಂಧು, ಮತ್ತೆ ಸರಿಯಾಗಿ ಪ್ರಮಾಣವಚನ ಸ್ವೀಕರಿಸಿ ಎನ್ನುವ ಆದೇಶವನ್ನು ಕೇರಳ ಹೈಕೋರ್ಟ್ ನೀಡಿದೆ.
ಅಜ್ಜಯ್ಯನ ಹೆಸರಿನಲ್ಲಿ ಡಿಕೆ ಶಿವಕುಮಾರ್ ಪ್ರಮಾಣವಚನ
ಕರ್ನಾಟಕ ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್, ವೀರ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
ಕೇರಳ ಹೈಕೋರ್ಟ್, ಬುಧವಾರ (ಜೂನ್ 24) ನೀಡಿದ ಆದೇಶದ ಪ್ರಕಾರ, ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬಹುದಾದರೂ, ತಮ್ಮಿಷ್ಟದ ನಿರ್ದಿಷ್ಟ ದೇವರು/ಗುರುಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವಂತಿಲ್ಲ. ಹೈಕೋರ್ಟಿನ ಈ ಆದೇಶ ಕೇರಳದ ವ್ಯಾಪ್ತಿಗೆ ಸೀಮಿತವೋ ಅಥವಾ ಇಡೀ ದೇಶಕ್ಕೆ ಅನ್ವಯವಾಗುತ್ತದೋ ಎನ್ನುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ.
ಏನಿದು ಕೇರಳ ಹೈಕೋರ್ಟ್ ಆದೇಶ?
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೇರಿದ್ದ ಬಿಜೆಪಿಯ ಇಪ್ಪತ್ತು ಕಾರ್ಪೋರೇಟರ್’ಗಳು ವಿವಿಧ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅನಂತ ಪದ್ಮನಾಭಸ್ವಾಮಿ, ಅಟ್ಟುಕಲ್ ಅಮ್ಮ, ಉದಯನ್ನೂರ್ ದೇವಿ ಸೇರಿದಂತೆ ತಾವು ಬಹುವಾಗಿ ನಂಬುವ ನಿರ್ದಿಷ್ಟ ದೇವರುಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಕೇರಳ ಹೈಕೋರ್ಟ್ ಪ್ರಕಾರ ಇದು, ತಪ್ಪು. ಹಾಗಾಗಿ, ಮತ್ತೊಮ್ಮೆ ಸರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಆದೇಶ ನೀಡಿದೆ.
ಡಿಕೆ ಶಿವಕುಮಾರ್ ಅವರ ನೂತನ ಸರ್ಕಾರದಲ್ಲಿ ಹದಿಮೂರು ಸಚಿವರು ದೇವರು, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಕೇರಳದ ಹೈಕೋರ್ಟ್ ಪ್ರಕಾರ, ವೈಯಕ್ತಿಕವಾಗಿ ಒಬ್ಬ ವ್ಯಕ್ತಿ ಅಥವಾ ನಿರ್ದಿಷ್ಟ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವುದಿಲ್ಲ ಎನ್ನುವುದು ಕೇರಳ ಹೈಕೋರ್ಟ್ ಅಭಿಪ್ರಾಯವಾಗಿದೆ.
ಡಿಕೆ ಶಿವಕುಮಾರ್ ಅವರು ಒಂದು ಕೈಯಲ್ಲಿ ಸಂವಿಧಾನದ ಪುಸ್ತಕವನ್ನು ಇಟ್ಟುಕೊಂಡು ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಈಗ, ಕೇರಳ ಹೈಕೋರ್ಟ್ ತೀರ್ಪು ಹೊಸ ಚರ್ಚೆಗೆ ನಾಂದಿ ಹಾಡಿದೆ.
ನ್ಯಾ.ಪಿವಿ ಕುನ್ನಿಕೃಷ್ಣನ್ ಆದೇಶ ಚರ್ಚೆಗೆ ಗ್ರಾಸ
ಕೇರಳ ಮುನ್ಸಿಪಾಲಿಟಿ ಕಾಯ್ದೆ, 1994ರ ಸೆಕ್ಷನ್ 143 ಮತ್ತು ಅದರ ಮೂರನೇ ಶೆಡ್ಯೂಲ್ ಪ್ರಕಾರ, ತಿರುವನಂತಪುರಂ ಪಾಲಿಕೆಯ ಕಾರ್ಪೋರೇಟರ್’ಗಳು, ನಿರ್ದಿಷ್ಟ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ತಪ್ಪು. ಮುಂದಿನ ನಾಲ್ಕು ವಾರದೊಳಗೆ ಮತ್ತೆ ಪ್ರಮಾಣವಚನ ಸ್ವೀಕರಿಸಿ ಎಂದು ನ್ಯಾ.ಪಿವಿ ಕುನ್ನಿಕೃಷ್ಣನ್ ಆದೇಶ ನೀಡಿದ್ದರು. ಕೇರಳ ಹೈಕೋರ್ಟ್ ನೀಡಿರುವ ಈ ತೀರ್ಪು, ಬರೀ ಕೇರಳಕ್ಕೆ ಮಾತ್ರ ಸೀಮಿತವೇ ಅಥವಾ ಇಡೀ ದೇಶಕ್ಕೆ ಅನ್ವಯವಾಗುತ್ತದೆಯೇ, ಹಾಗಾದರೆ, ಇದುವರೆಗೆ ಅವರವರ ಇಷ್ಟದಂತೆ ತೆಗೆದುಕೊಂಡಿರುವ ಪ್ರಮಾಣವಚನ ಅಸಿಂಧು ಆಗುತ್ತದೆಯೇ ಎನ್ನುವುದು ಪ್ರಶ್ನೆಯಾಗಿದೆ.
Krishi Thapanda ನಟಿ ಕೃಷಿ ತಾಪಂಡ ಫ್ಲಾಟ್ನಲ್ಲೇ ಜೀವ ಕಳೆದುಕೊಂಡ ಆಪ್ತ ಗೆಳೆಯ!
TB Dam Spillways ಟಿಬಿ ಡ್ಯಾಂ ಸ್ಪಿಲ್ ವೇಗಳಿಗೆ ಮೂರೂ ರಾಜ್ಯಗಳ ಸಿಎಂಗಳಿಂದ ಚಾಲನೆ
NCERT- EMERGENCY ಇದೇ ಮೊದಲ ಬಾರಿ NCERT ಪಠ್ಯದಲ್ಲಿ ತುರ್ತುಪರಿಸ್ಥಿತಿ ಪಾಠ