Newsics.com
ಬೆಂಗಳೂರು: ಬೆಂಗಳೂರಿಗೆ ಮೊದಲ ಬಾರಿಗೆ ಬಂದಿದ್ದ ಇಬ್ಬರು ಯುವಕರಿಗೆ ಆಟೋ ಚಾಲಕನೊಬ್ಬ ಬೆದರಿಕೆ ಹಾಕಿ ₹2,400 ವಸೂಲಿ ಮಾಡಿದ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ನಗರದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಜಿನಿಯರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 16 ರಿಂದ 18 ವರ್ಷದೊಳಗಿನ ಇಬ್ಬರು ಯುವಕರು ಹೊಸೂರುಗೆ ತೆರಳಲು ಬಸ್ ನಿಲ್ದಾಣಕ್ಕೆ ಹೋಗುವ ಉದ್ದೇಶದಿಂದ ಆಟೋ ಹತ್ತಿದ್ದರು. ಆರಂಭದಲ್ಲಿ ಪ್ರತಿ ವ್ಯಕ್ತಿಗೆ ₹50 ದರದಲ್ಲಿ ಕರೆದೊಯ್ಯುವುದಾಗಿ ಆಟೋ ಚಾಲಕ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆದರೆ ಮಾರ್ಗ ಮಧ್ಯೆ ಯುವಕರು ಬೆಂಗಳೂರಿಗೆ ಹೊಸಬರು ಎಂಬುದನ್ನು ಅರಿತ ಚಾಲಕ, ಮತ್ತೊಬ್ಬ ವ್ಯಕ್ತಿಯನ್ನು ಆಟೋಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶದತ್ತ ಕರೆದೊಯ್ದಿದ್ದಾನೆ. ಬಳಿಕ ₹3,000 ನೀಡುವಂತೆ ಒತ್ತಾಯಿಸಿದ್ದು, ಬೆದರಿಕೆಯ ನಡುವೆ ಕೊನೆಗೆ ₹2,400 ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರವಾಸಿಗರು ಹಾಗೂ ಹೊಸದಾಗಿ ನಗರಕ್ಕೆ ಬರುವವರ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. “ಇಂತಹ ಘಟನೆಗಳು ಬೆಂಗಳೂರಿನ ಗೌರವಕ್ಕೆ ಕಳಂಕ” ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಕರಣ ವೈರಲ್ ಆದ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
ಜೈಪುರದಲ್ಲಿ ಯುವತಿಯ ಹೈಡ್ರಾಮಾ: ಕ್ಯಾಬ್ ಚಾಲಕನ ಮೇಲೆ ಹಲ್ಲೆ, ವೈರಲ್ ವಿಡಿಯೋ ಚರ್ಚೆಗೆ ಕಾರಣ
ಜೈಪುರದಲ್ಲಿ ಯುವತಿಯ ಹೈಡ್ರಾಮಾ: ಕ್ಯಾಬ್ ಚಾಲಕನ ಮೇಲೆ ಹಲ್ಲೆ, ವೈರಲ್ ವಿಡಿಯೋ ಚರ್ಚೆಗೆ ಕಾರಣ