newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಇದೀಗ ಗಂಭೀರ ಪ್ರಶ್ನೆಗಳ ಕೇಂದ್ರಬಿಂದುವಾಗಿದೆ.
ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಜಾರಿಗೊಂಡ ಈ ಯೋಜನೆಯಲ್ಲಿ ಹಣ ವಿತರಣೆಯ ವೇಳೆ ದೊಡ್ಡ ಮಟ್ಟದ ಅಕ್ರಮ, ತಾಂತ್ರಿಕ ದೋಷ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯ ನಡೆದಿದೆ ಎಂಬ ಅಂಶ ಅಕೌಂಟೆಂಟ್ ಜನರಲ್ (ಎಜಿ) ಆಡಿಟ್ ವರದಿಯಿಂದ ಬಹಿರಂಗವಾಗಿದೆ.
ಆಡಿಟ್ ಪರಿಶೀಲನೆಯಲ್ಲಿ ಅತ್ಯಂತ ಆಘಾತಕಾರಿ ಸಂಗತಿ ಎಂದರೆ ಸಾವಿರಾರು ಫಲಾನುಭವಿಗಳ ಹೆಸರಿನಲ್ಲಿ ಹಣ ಒಂದೇ ಬ್ಯಾಂಕ್ ಖಾತೆಗೆ ಜಮೆಯಾಗಿರುವುದು. ಒಟ್ಟು 19,020 ಫಲಾನುಭವಿಗಳು ಒಂದೇ ಖಾತೆ ಸಂಖ್ಯೆಯನ್ನು ಬಳಸಿರುವುದು ಪತ್ತೆಯಾಗಿದ್ದು, ಇದರ ಮೂಲಕ 3.03 ಲಕ್ಷಕ್ಕೂ ಅಧಿಕ ವಹಿವಾಟುಗಳು ನಡೆದಿವೆ.
ಈ ವಹಿವಾಟುಗಳ ಒಟ್ಟು ಮೊತ್ತ 60.69 ಕೋಟಿ ರೂ. ತಲುಪಿದೆ. ಒಂದೇ ತಿಂಗಳಲ್ಲಿ 8,995 ಅನುಮಾನಾಸ್ಪದ ವಹಿವಾಟುಗಳ ಮೂಲಕ 1.80 ಕೋಟಿ ರೂ. ಜಮೆಯಾಗಿರುವುದು ಗಂಭೀರ ಅನುಮಾನಕ್ಕೆ ಕಾರಣವಾಗಿದೆ.
ಇದಕ್ಕಿಂತಲೂ ಗಂಭೀರವಾದ ಸಂಗತಿ ಎಂದರೆ ಬ್ಯಾಂಕ್ ಖಾತೆ ವಿವರವೇ ಇಲ್ಲದ ದಾಖಲೆಗಳಿಗೂ ಹಣ ಬಿಡುಗಡೆ ಆಗಿರುವುದು. ಆಡಿಟ್ ವರದಿ ಪ್ರಕಾರ, ಖಾತೆ ಸಂಖ್ಯೆಯ ಮಾಹಿತಿ ನಮೂದಿಸದೇ ಇದ್ದರೂ 23,262 ವಹಿವಾಟುಗಳ ಮೂಲಕ 46.52 ಕೋಟಿ ರೂ. ವರ್ಗಾವಣೆ ನಡೆದಿದೆ. ಯಾವುದೇ ಖಾತೆ ವಿವರಗಳಿಲ್ಲದೆ ಇಷ್ಟೊಂದು ದೊಡ್ಡ ಮೊತ್ತದ ಹಣ ಯಾರಿಗೆ ತಲುಪಿತು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದೇ ಉಳಿದಿದೆ.
ಯೋಜನೆಯ ದತ್ತಾಂಶ ನಿರ್ವಹಣೆಯಲ್ಲೂ ಭಾರೀ ಗೊಂದಲ ಬೆಳಕಿಗೆ ಬಂದಿದೆ. 10,06,308 ಫಲಾನುಭವಿಗಳ ಬ್ಯಾಂಕ್ ಖಾತೆ ವಿವರಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಬದಲಾಯಿಸಿರುವುದು ದಾಖಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಬದಲಾವಣೆಗಳು ಯೋಜನೆಯ ಮೇಲ್ವಿಚಾರಣೆಯಲ್ಲಿನ ಲೋಪವನ್ನು ಎತ್ತಿ ತೋರಿಸುತ್ತವೆ. ಜೊತೆಗೆ, ಯೋಜನೆಯಿಂದ ಕೈಬಿಡಲಾದ ಫಲಾನುಭವಿಗಳ ವಿವರಗಳು, ಅವರ ಗುರುತು ಸಂಖ್ಯೆ ಮತ್ತು ಕೈಬಿಡಲು ಕಾರಣಗಳ ಮಾಹಿತಿ ನೀಡುವಲ್ಲಿಯೂ ಇಲಾಖೆ ವಿಫಲವಾಗಿದೆ.
ಈ ಅಕ್ರಮಗಳ ಬಗ್ಗೆ ಆಡಿಟ್ ವಿಭಾಗವು ಈ ವರ್ಷದ ಆರಂಭದಲ್ಲಿಯೇ ಸರ್ಕಾರದ ಗಮನ ಸೆಳೆದಿತ್ತು. ಜನವರಿ 2026ರಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಬಳಿಕ ಸಮರ್ಪಕ ತನಿಖೆ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ಈ ಗಂಭೀರ ಲೋಪಗಳು ಸರ್ಕಾರದ ಆಡಳಿತಾತ್ಮಕ ಕಾರ್ಯವೈಖರಿಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಅರ್ಹ ಫಲಾನುಭವಿಗಳಿಗೆ ತಲುಪಬೇಕಿದ್ದ ತೆರಿಗೆದಾರರ ಕೋಟ್ಯಂತರ ರೂಪಾಯಿ ದುರುಪಯೋಗವಾಗಿದೆಯೇ ಎಂಬ ಅನುಮಾನ ಈಗ ಮತ್ತಷ್ಟು ಗಟ್ಟಿಯಾಗಿದೆ.
ರಸ್ತೆಯಲ್ಲೇ ಬೆತ್ತಲಾದ ಯುವತಿ: ಕ್ಯಾಬ್ ಚಾಲಕನ ಮೇಲೆ ಹಲ್ಲೆ, ವೈರಲ್ ವಿಡಿಯೋ ನೋಡಿ
50 ಮೊಟ್ಟೆ ತಿನ್ನುವ ಚಾಲೆಂಜ್ ಸ್ವೀಕರಿಸಿದ್ದ ವ್ಯಕ್ತಿ ಸಾವು! 42ನೇ ಮೊಟ್ಟೆ ತಿಂದ ಬಳಿಕ ಕುಸಿದು ಬಿದ್ದು ದುರಂತ