newsics.com/ನ್ಯೂಸಿಕ್ಸ್
ನಂದಿ (Nandi) ವಿಗ್ರಹದ ಬಾಯಿಂದ ಉಕ್ಕಿ ಹರಿಯುವ ನೀರಿನ ಧಾರೆಗೆ ನೂರಾರು ವರ್ಷಗಳಿಂದ ವಿರಾಮವೇ ಇಲ್ಲ. ಮಳೆಗಾಲ, ಬೇಸಿಗೆ, ಬರಗಾಲ ಎನ್ನದೇ 24×7 ಅವಿರತವಾಗಿ ನೀರು ಹರಿಯುತ್ತಿರುವ ಘಟನೆ
ಆಂಧ್ರಪ್ರದೇಶದ ರಾಮಗಿರಿ ಶ್ರೀ ಭೈರವೇಶ್ವರ ದೇವಾಲಯದಲ್ಲಿ ನಡೆದಿದೆ.
ಇನ್ನು ಈ ನೀರು ಎಲ್ಲಿಂದ ಬರುತ್ತದೆ ಎಂಬುದು ಇಂದಿಗೂ ನಿಗೂಢ. ಯಾವುದೇ ಪೈಪ್ ಸಂಪರ್ಕವಿಲ್ಲ, ಜಲಮೂಲದ ಕುರುಹಿಲ್ಲ. ಆದರೂ ತೀರ್ಥದಂತೆ ಹರಿಯುವ ಈ ಜಲಧಾರೆ ವಿಜ್ಞಾನಿಗಳ ತಲೆಗೆ ಹುಳ ಬಿಟ್ಟಿದೆ. ಭಕ್ತರು ಇದನ್ನು ಶಿವನ ಪವಾಡ (The miracle of Shiva) ಎಂದೇ ನಂಬಿದ್ದಾರೆ. ಈ ನೀರಿನ ಮೂಲ ಹುಡುಕಲು ಹೋದವರು ಇನ್ನೂ ಉತ್ತರ ಸಿಗದೆ ಹಿಂದಿರುಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ಐತಿಹಾಸಿಕ ರಾಮಗಿರಿ ಶಿವ ದೇವಾಲಯ:
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಿಚ್ಚಾತೂರು ಮಂಡಲದ ರಾಮಗಿರಿ ಎಂಬ ಸುಂದರ ಹಳ್ಳಿಯಲ್ಲಿ ಈ ಐತಿಹಾಸಿಕ ಶಿವ ದೇವಾಲಯವಿದೆ. ಇದು ಸುಮಾರು 9ನೇ ಶತಮಾನದಲ್ಲಿ ಅಂದರೆ ಪಲ್ಲವರ ಆಡಳಿತದ ಕಾಲದಲ್ಲಿ ನಿರ್ಮಾಣವಾದ ಸುಂದರ ದೇವಾಲಯವಾಗಿದ್ದು, ಬರೋಬ್ಬರಿ 1200 ವರ್ಷಗಳಿಗೂ ಹೆಚ್ಚಿನ ಅದ್ಭುತ ಇತಿಹಾಸವನ್ನು ಹೊಂದಿದೆ. ಈ ಪ್ರಾಚೀನ ದೇವಾಲಯದಲ್ಲಿ ವಳೇಶ್ವರ ಎಂದು ಕರೆಯಲ್ಪಡುವ ಶಿವನನ್ನು ಪ್ರಧಾನ ದೇವತೆಯಾಗಿ ಆರಾಧಿಸಲಾಗುತ್ತದೆ. ಈ ಐತಿಹಾಸಿಕ ದೇವಾಲಯವು ತನ್ನ ಕಲಾತ್ಮಕ ವಾಸ್ತುಶಿಲ್ಪದ ಜೊತೆಗೆ ಅಲ್ಲಿನ ವಿಶಿಷ್ಟವಾದ ನೈಸರ್ಗಿಕ ನೀರಿನ ಹರಿವಿನಿಂದಾಗಿ ಭಕ್ತರ ಮತ್ತು ಪ್ರವಾಸಿಗರ ಗಮನ ಸೆಳೆಯುತ್ತಿದೆ.
ನಂದಿಯ ಬಾಯಿಂದ ಹರಿಯುವ ನಂದಿ ತೀರ್ಥ:
ವರದಿಗಳ ಪ್ರಕಾರ, ಈ ದೇವಾಲಯದ ಆವರಣದ ಮುಂಭಾಗದಲ್ಲಿ ಒಂದು ಸುಂದರವಾದ ಕಲ್ಯಾಣಿ ಇದೆ. ಅದರ ಬಳಿ ಪ್ರತಿಷ್ಠಾಪಿಸಲಾಗಿರುವ ಕಲ್ಲಿನ ನಂದಿಯ ವಿಗ್ರಹದ ಬಾಯಿಂದ ಯಾವುದೇ ಮೋಟಾರ್ ಅಥವಾ ಪೈಪ್ ಸಹಾಯವಿಲ್ಲದೆ ನಿರಂತರವಾಗಿ ನೀರು ಹರಿದು ಆ ಕೊಳವನ್ನು ಸೇರುತ್ತಲೇ ಇರುತ್ತದೆ. ಎಲ್ಲಿಂದ ಈ ನೀರು ನಿರಂತರವಾಗಿ ಬರುತ್ತಿದೆ ಎಂಬುದು ನೋಡುಗರಿಗೆ ದೊಡ್ಡ ಅಚ್ಚರಿ ಮೂಡಿಸುತ್ತದೆ. ಸುತ್ತಮುತ್ತಲಿನ ಹಳ್ಳಿಯ ಜನರು ಈ ಜಲವನ್ನು ಅತ್ಯಂತ ಭಕ್ತಿಯಿಂದ ನಂದಿ ತೀರ್ಥ ಎಂದು ಕರೆಯುತ್ತಾರೆ. ಇದೊಂದು ಪರಮ ಪವಿತ್ರ ಜಲವಾಗಿದ್ದು, ಇದರಲ್ಲಿ ಅನೇಕ ಬಗೆಯ ಔಷಧೀಯ ಗುಣಗಳಿವೆ ಎಂಬುದು ಜನರ ಅಚಲ ನಂಬಿಕೆಯಾಗಿದೆ.
ಸುತ್ತಮುತ್ತಲಿನ ಹಳ್ಳಿಗಳಿಗೆ ಇದೇ ಜೀವಜಲ:
ಕೇವಲ ಪೂಜೆ ಪುನಸ್ಕಾರಗಳಿಗೆ ಮಾತ್ರವಲ್ಲದೆ, ದೇವಾಲಯದ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಹಳ್ಳಿಗಳ ಜನರು ತಮ್ಮ ಕುಡಿಯುವ ನೀರಿಗೆ ಮತ್ತು ದೈನಂದಿನ ಅಡುಗೆಗೆ ಇದೇ ನಂದಿ ತೀರ್ಥವನ್ನು ಅವಲಂಬಿಸಿದ್ದಾರೆ. ಈ ನೀರು ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಖನಿಜಯುಕ್ತ ನೀರಿಗಿಂತಲೂ ಹೆಚ್ಚು ರುಚಿಕರ ಹಾಗೂ ಸಿಹಿಯಾಗಿದೆ ಎಂದು ಸ್ಥಳೀಯರು ಹೆಮ್ಮೆಯಿಂದ ಹೇಳುತ್ತಾರೆ. ಇಲ್ಲಿ ಮೊದಲು ಕಾಲಭೈರವನ ದರ್ಶನ ಪಡೆದು, ಆ ನಂತರ ಇಲ್ಲಿನ ಆರಾಧ್ಯ ದೈವ ವಳೇಶ್ವರನ ದರ್ಶನ ಮಾಡಿದರೆ ಮನುಷ್ಯನ ಸಕಲ ಪಾಪಗಳು ನಿವಾರಣೆಯಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಭೂವಿಜ್ಞಾನಿಗಳು ಬಿಚ್ಚಿಟ್ಟ ರಹಸ್ಯವೇನು?
ನಂದಿಯ ಬಾಯಿಂದ ಹೀಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ನಿರಂತರವಾಗಿ ನೀರು ಬರುವುದರ ಹಿಂದೆ ಕೃತಕ ಪೈಪ್ಗಳ ಸಂಪರ್ಕ ಇರಬಹುದು ಎಂದು ಅನೇಕರು ಶಂಕಿಸಿದ್ದರು. ಆದರೆ ಕೂಲಂಕಷವಾಗಿ ಪರಿಶೀಲಿಸಿದಾಗ ಎಲ್ಲಿಯೂ ಅಂತಹ ಯಾವುದೇ ಪೈಪ್ ಅಥವಾ ಕೃತಕ ವ್ಯವಸ್ಥೆಯ ಕುರುಹುಗಳು ಕಂಡುಬಂದಿಲ್ಲ. ಭೂವಿಜ್ಞಾನಿಗಳು ಅಧ್ಯಯನ ನಡೆಸಿ ನೀಡಿದ ಮಾಹಿತಿಯ ಪ್ರಕಾರ, ಬೆಟ್ಟಗಳ ಒಳಗೆ ಇರುವ ನೈಸರ್ಗಿಕ ನೀರಿನ ಚಿಲುಮೆಗಳು ಮತ್ತು ಸುಣ್ಣದ ಕಲ್ಲಿನ ಗುಹೆಗಳೇ ಈ ವಿಸ್ಮಯಕ್ಕೆ ಮುಖ್ಯ ಕಾರಣ.
ಆ ಗುಹೆಗಳಲ್ಲಿನ ನೀರು ಭೂಮಿಯ ಒಳಗಿನ ಒತ್ತಡದಿಂದ ಮೇಲಕ್ಕೆ ಹರಿಯುತ್ತದೆ. ನೂರಾರು ವರ್ಷಗಳ ಹಿಂದಿನ ವಾಸ್ತುಶಿಲ್ಪಿಗಳು ಈ ನೈಸರ್ಗಿಕ ನೀರಿನ ಹರಿವು ನಂದಿಯ ಬಾಯಿಂದಲೇ ಹೊರಬರುವಂತೆ ಅತ್ಯಂತ ತಾಂತ್ರಿಕವಾಗಿ ಮತ್ತು ಅದ್ಭುತವಾಗಿ ವಿನ್ಯಾಸಗೊಳಿಸಿದ್ದಾರೆ. ಪ್ರಕೃತಿ ಮತ್ತು ಪ್ರಾಚೀನ ಎಂಜಿನಿಯರಿಂಗ್ ಕೌಶಲ್ಯದ ಈ ಅದ್ಭುತವು ಇಂದಿಗೂ ಎಲ್ಲರನ್ನೂ ಬೆರಗುಗೊಳಿಸುತ್ತಿದೆ.