newsics.com / ನ್ಯೂಸಿಕ್ಸ್
ಪ್ಯಾರಿಸ್/ಏವಿಯನ್: ಫ್ರಾನ್ಸ್ನ ಏವಿಯನ್-ಲೆ-ಬೈನ್ಸ್ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿ, ಪರಸ್ಪರ ಕುಶಲೋಪರಿ ವಿಚಾರಿಸಿದರು. 16 ತಿಂಗಳ ವಿರಾಮದ ಬಳಿಕ ಉಭಯ ನಾಯಕರ ನೇರ ಮುಖಾಮುಖಿ ಇದಾಗಿದೆ.
ಶೃಂಗಸಭೆಯ ಪ್ರಮುಖ ಅಧಿವೇಶನದಲ್ಲಿ ಟ್ರಂಪ್ ಅವರ ಪಕ್ಕದಲ್ಲೇ ಆಸೀನರಾಗಿದ್ದ ಪ್ರಧಾನಿ ಮೋದಿ ಅವರು, ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳ ಕುರಿತು ಅತ್ಯಂತ ಮಾರ್ಮಿಕ ಸಂದೇಶ ನೀಡಿದ್ದು ವಿಶೇಷವಾಗಿತ್ತು.
ಸುದೀರ್ಘ 16 ತಿಂಗಳ ವಿರಾಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇರವಾಗಿ ಮುಖಾಮುಖಿಯಾಗಿದ್ದಾರೆ. ಜಿ7 ಶೃಂಗಸಭೆಯ ಅಧಿವೇಶನ ಆರಂಭವಾಗುವ ಮುನ್ನವೇ ಉಭಯ ನಾಯಕರ ಈ ಮಹತ್ವದ ಭೇಟಿ ನಡೆಯಿತು.
ಮೋದಿ- ಟ್ರಂಪ್ ಆತ್ಮೀಯ ಮಾತುಕತೆ
ಜಾಗತಿಕ ನಾಯಕರು ವೇದಿಕೆಯ ಸುತ್ತಲೂ ಜಮಾಯಿಸುತ್ತಿದ್ದಂತೆ, ಬಿಳಿ ಕುರ್ತಾ-ಪೈಜಾಮ ಮತ್ತು ಕಡು ಬಣ್ಣದ ಸ್ಲೀವ್ಲೆಸ್ ಜಾಕೆಟ್ ಧರಿಸಿದ್ದ ಪ್ರಧಾನಿ ಮೋದಿ ಅವರು ತಮಗೆ ನಿಗದಿಪಡಿಸಿದ ಆಸನದ ಕಡೆಗೆ ಹೆಜ್ಜೆ ಹಾಕಿದರು. ಈ ವೇಳೆ ಗಾಢ ನೀಲಿ ಬಣ್ಣದ ಸೂಟ್ ಧರಿಸಿದ್ದ ಟ್ರಂಪ್ ಅವರು ಮೋದಿ ಬರುವುದನ್ನು ಕಂಡು, ಅವರತ್ತ ತಿರುಗಿ ಹಸನ್ಮುಖಿಯಾಗಿ ಅತ್ಯಂತ ಆತ್ಮೀಯವಾಗಿ ಹಸ್ತಲಾಘವ ಮಾಡಿಕೊಂಡರು. ಉಭಯ ನಾಯಕರು ಕೆಲಕಾಲ ಸಂಕ್ಷಿಪ್ತವಾಗಿ ಕುಶಲೋಪರಿ ವಿಚಾರಿಸಿದರು. ಮೋದಿ ಅವರು ಟ್ರಂಪ್ ಪಕ್ಕದ ಆಸನದಲ್ಲಿ ಕುಳಿತುಕೊಳ್ಳುವಾಗ, ಟ್ರಂಪ್ ಅವರೇ ಮೋದಿಯವರ ಭುಜ ತಟ್ಟಿ ಆತ್ಮೀಯತೆ ಪ್ರದರ್ಶಿಸಿದರು.
ಭಾರತದ ರಫ್ತಿನ ಮೇಲೆ ಸುಂಕ ಹೇರಿಕೆ ವಿಚಾರವಾಗಿ ಉಭಯ ದೇಶಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ, ಬಹುನಿರೀಕ್ಷಿತ ವಾಣಿಜ್ಯ ಒಪ್ಪಂದ ಅಂತಿಮಗೊಳ್ಳುವ ಹಂತದಲ್ಲಿ ಈ ಭೇಟಿ ನಡೆದಿರುವುದು ಜಾಗತಿಕವಾಗಿ ಭಾರಿ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ಒಮನ್ ಕರಾವಳಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಯಿಂದ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆ ಹಾಗೂ ಇರಾನ್- ಅಮೆರಿಕ ಸಂಘರ್ಷದ ಬಿಕ್ಕಟ್ಟು ಉಭಯ ದೇಶಗಳ ಬಾಂಧವ್ಯದ ಮೇಲೆ ಸಣ್ಣ ಮಟ್ಟದ ಪರಿಣಾಮ ಬೀರಿದ್ದವು. ಹೀಗಾಗಿ, ಈ ಪ್ರಸ್ತುತ ಭೇಟಿಯು ಭಾರತ-ಅಮೆರಿಕ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧವನ್ನು ಮತ್ತಷ್ಟು ವೃದ್ಧಿಸುವಲ್ಲಿ ನಿರ್ಣಾಯಕ ಎನಿಸಿದೆ.
ಶೃಂಗಸಭೆಯ “ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟನ್ನು ಮರುನಿರ್ಮಾಣ ಮಾಡುವುದು” (Forging New Partnerships and Rebuilding International Solidarity) ಎಂಬ ವಿಷಯದ ಮೇಲಿನ ಔಟ್ರೀಚ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿನ ವಿಶ್ವಾಸದ ಕೊರತೆಯ (Trust Deficit) ಬಗ್ಗೆ ತೀಕ್ಷ್ಣವಾಗಿ ಉಲ್ಲೇಖಿಸಿದರು.
“ಇಂದು ಜಗತ್ತು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿಲ್ಲ; ಬದಲಿಗೆ ದೇಶಗಳ ನಡುವಿನ ವಿಶ್ವಾಸದ ಕೊರತೆಯಿಂದ ತತ್ತರಿಸುತ್ತಿದೆ. ನಮ್ಮ ಭವಿಷ್ಯದ ಪಾಲುದಾರಿಕೆಗಳ ಯಶಸ್ಸು ಈ ವಿಶ್ವಾಸವನ್ನು ಮರುನಿರ್ಮಾಣ ಮಾಡುವುದರ ಮೇಲೆಯೇ ಆಧಾರಿತವಾಗಿದೆ,” ಎಂದು ಪ್ರತಿಪಾದಿಸಿದರು. ಇಂಧನ, ಆಹಾರ ಭದ್ರತೆ, ತಂತ್ರಜ್ಞಾನ ಮತ್ತು ಆರ್ಥಿಕ ಸ್ಥಿರತೆಯಂತಹ ಪರಸ್ಪರ ಸಂಬಂಧಿತ ಸವಾಲುಗಳನ್ನು ಜಗತ್ತು ಎದುರಿಸುತ್ತಿದ್ದರೂ ಸಂಕುಚಿತ ರಾಷ್ಟ್ರೀಯ ಹಿತಾಸಕ್ತಿಗಳಿಂದಾಗಿ ಜಾಗತಿಕ ಸಹಕಾರಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ವಿಶ್ವಾಸ’ವೇ ಜಗತ್ತಿನ ಪ್ರಮುಖ ಆಸ್ತಿ
ಪ್ರಸ್ತುತ ಜಾಗತಿಕ ವ್ಯವಸ್ಥೆಯಲ್ಲಿ ‘ವಿಶ್ವಾಸ’ವನ್ನು ಅತ್ಯಂತ ಪ್ರಮುಖ ಕಾರ್ಯತಂತ್ರದ ಆಸ್ತಿ ಎಂದು ಬಣ್ಣಿಸಿದ ಪ್ರಧಾನಿ, ಯಾವುದೇ ದೇಶದ ಇಂಧನ ಭದ್ರತೆ, ಆಹಾರ ಭದ್ರತೆ, ಆರೋಗ್ಯ ಭದ್ರತೆ, ಸೈಬರ್ ಭದ್ರತೆ ಮತ್ತು ಆರ್ಥಿಕ ಏಳಿಗೆಗಳು ಕೇವಲ ಅದರ ಗಡಿಯೊಳಗೆ ನಿರ್ಧಾರವಾಗುವುದಿಲ್ಲ. ಇಂದಿನ ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರ ಅವಲಂಬಿತವಾಗಿದೆ ಎಂದು ನೆನಪಿಸಿದರು. ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿಗಳನ್ನು (Supply Chains) ಇತರ ದೇಶಗಳ ಮೇಲೆ ಒತ್ತಡ ಹೇರಲು ಅಥವಾ ಇತರರನ್ನು ಹೊರಗಿಡಲು ಅಸ್ತ್ರವಾಗಿ ಬಳಸಬಾರದು. ಬದಲಿಗೆ ಅವು ಜಾಗತಿಕ ಕಲ್ಯಾಣಕ್ಕೆ ಬಳಕೆಯಾಗುತ್ತವೆ ಎಂಬ ವಿಶ್ವಾಸ ಮೂಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿಯ ಅವಕಾಶಗಳು ಕೇವಲ ಕೆಲವು ಶ್ರೀಮಂತ ದೇಶಗಳಿಗೆ ಮಾತ್ರ ಸೀಮಿತವಾಗದೆ, ಜಾಗತಿಕ ಸಂಸ್ಥೆಗಳು ಎಲ್ಲಾ ರಾಷ್ಟ್ರಗಳ ಆಕಾಂಕ್ಷೆಗಳನ್ನು ಈಡೇರಿಸಬಲ್ಲವು ಎಂಬ ನಂಬಿಕೆಯನ್ನು ಹುಟ್ಟುಹಾಕಬೇಕಿದೆ. ಕೋವಿಡ್- 19 ಸಾಂಕ್ರಾಮಿಕದ ಕಹಿ ನೆನಪನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ದಶಕಗಳ ಕಾಲ ಹಲವು ತಲೆಮಾರುಗಳು ಶ್ರಮಿಸಿ ಕಟ್ಟಿದ್ದ ವಿಶ್ವಾಸ ಈಗ ಹದಗೆಡುತ್ತಿದೆ. ಕೋವಿಡ್ ಸಾಂಕ್ರಾಮಿಕವು ನಮಗೆ ಕನ್ನಡಿ ಹಿಡಿದು ತೋರಿಸಿದ್ದು, ಅಂತಾರಾಷ್ಟ್ರೀಯ ಒಗ್ಗಟ್ಟು ಮತ್ತು ಪರಸ್ಪರ ವಿಶ್ವಾಸದ ಜಾಗತಿಕ ಹಕ್ಕುಗಳು ತುರ್ತು ಪರಿಸ್ಥಿತಿಯ ಸಮಯದಲ್ಲಿ ಎಷ್ಟು ಟೊಳ್ಳಾಗಿದ್ದವು ಎಂಬುದನ್ನು ಬಹಿರಂಗಪಡಿಸಿದೆ,” ಎಂದು ಜಾಗತಿಕ ನಾಯಕರ ಸಮ್ಮುಖದಲ್ಲೇ ಮುಚ್ಚುಮರೆಯಿಲ್ಲದೆ ಅಸಮಾಧಾನ ಹೊರಹಾಕಿದರು.
ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.
Elephant in garbage dump ಎಂಎಂ ಹಿಲ್ಸ್ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ
ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್ನ ರಹಸ್ಯವೇನು?