newsics.com/ನ್ಯೂಸಿಕ್ಸ್
ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಬಳ್ಳಾರಿಯಲ್ಲೂ ಅದೇ ಮಾದರಿಯ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ವಿವಾಹಿತ ಮಹಿಳೆಗೆ ಅಶ್ಲೀಲ ಸಂದೇಶ (ಮೆಸೇಜ್) ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನನ್ನು ಮಹಿಳೆ, ಆಕೆಯ ಪತಿ ಹಾಗೂ ಸಹೋದರ ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಮೃತ ಹೆಸರು ಬಸನಗೌಡ ಅಂತಾ ಬಳ್ಳಾರಿ ನಿವಾಸಿ, ಖಾಸಗಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದವ ದುರಂತ ಅಂತ್ಯ ಕಂಡಿದ್ದಾನೆ. ಕೆಲ ವರ್ಷಗಳ ಹಿಂದೆ ಈತನ ಅಣ್ಣನಿಗೆ ಈ ಶ್ವೇತಾಳ ತಂಗಿಯನ್ನ ಕೊಟ್ಟು ಮದುವೆ ಮಾಡಿದ್ದರು. ಹೀಗಾಗಿ ಎರಡೂ ಮನೆಯ ನಡುವೆ ಒಂದೊಳ್ಳೆ ಸಂಬಂಧ ಬೆಸೆದುಕೊಂಡಿತ್ತು. ಸಂಬಂಧಿಕರು ಅನ್ನೋ ಕಾರಣಕ್ಕೆ ಆಗಾಗ ಬಂದು ಹೋಗುತ್ತಿದ್ದರು. ಈ ವೇಳೆ ಶ್ವೇತಾಳನ್ನ ನೋಡುತ್ತಿದ್ದಂತೆ ಬಸನಗೌಡನ ಎದೆಯಲ್ಲಿ ಚಿಟ್ಟೆ ಬಿಟ್ಟಂಗಾಗಿದೆ. ಹೇಗೋ ನಂಬರ್ ಗಿಟ್ಟಿಸಿದವ ಹಾಯ್ ಬಾಯ್ ಅಂತಾ ಮೆಸೇಜ್ ಶುರು ಮಾಡಿದ್ದಾನೆ. ಇದಕ್ಕೆ ರಿಪ್ಲೇ ಬರದೇ ಇದ್ದಾಗ ಅಸಲಿ ಆಟ ಶುರು ಮಾಡಿದ್ದಾನೆ. ಅಶ್ಲೀಲ ಸಂದೇಶ ಕಳಿಸುವುದರ ಜೊತೆಗೆ ಅಸಭ್ಯ ಫೋಟೋಗಳನ್ನ ಫಾರ್ವರ್ಡ್ ಮಾಡಿದ್ದಾನೆ.
ಪಟ್ಟಣಗೆರೆ ಶೆಡ್ ಮಾದರಿಯ ಕಹಾನಿ
ಸುಮಾರು ಒಂದು ವರ್ಷದಿಂದ ಕಿರುಕುಳ ಕೊಡುತ್ತಿದ್ದ ಬಸನಗೌಡ, ಎಷ್ಟೇ ಹೇಳಿದರೂ ಬದಲಾಗಿರಲಿಲ್ಲ. ಯಾವಾಗ ಇವನ ಕಾಟ ಜಾಸ್ತಿ ಆಯ್ತೋ ಗಂಡ ಹಾಗೂ ಸಹೋದರನ ಬಳಿ ಹೇಳ್ಕೊಂಡಿದ್ದಾಳೆ. ವಿಷಯ ಗೊತ್ತಾಗುತ್ತಿದ್ದಂತೆ ಇಬ್ಬರೂ ರೊಚ್ಚಿಗೆದ್ದಿದ್ದಾರೆ. ಇವನಿಗೆ ಸರಿಯಾಗಿ ಪಾಠ ಕಲಿಸಬೇಕು ಅಂತಾ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದಾರೆ. ಆಗ ಹೊಸೆದುಕೊಂಡಿದ್ದೇ ಪಟ್ಟಣಗೆರೆ ಶೆಡ್ ಮಾದರಿಯ ಕಹಾನಿ.
ಬಸನಗೌಡಗೆ ಕಾಲ್ ಮಾಡಿದ್ದ ಶ್ವೇತಾ, ನಿರ್ಜನ ಪ್ರದೇಶಕ್ಕೆ ಬರೋದಕ್ಕೆ ಹೇಳಿದಳು. ಆಹ್ವಾನ ಸಿಗುತ್ತಿದ್ದಂತೆ ಬಸನಗೌಡನಿಗೆ ಸ್ವರ್ಗವೇ ಕಣ್ಮುಂದೆ ಬಂದಂತಾಗಿತ್ತು. ಈ ಕ್ಷಣಕ್ಕಾಗಿಯೇ ಇಷ್ಟು ದಿನ ಕಾದಿದ್ದು ಅಂತಾ ಜಿಗಿ ಜಿಗಿದು ಹೋಗಿದ್ದ. ಯಾವಾಗ ಯಾರೂ ಇಲ್ಲದ ಜಾಗಕ್ಕೆ ಬಂದನೋ ಮೂವರು ಎಂಟ್ರಿಕೊಟ್ಟಿದ್ದಾರೆ. ಕುತ್ತಿಗೆಗೆ ಹಗ್ಗ ಬಿಗಿದು ಅಲ್ಲೇ ಉಸಿರು ನಿಲ್ಲಿಸಿದರು. ನಂತರ 10 ಕಿಲೋಮೀಟರ್ ದೂರದ ಕಾಲುವೆ ಪಕ್ಕದ ಜಾಗಕ್ಕೆ ತಗೊಂಡು ಹೋಗಿ, ಮೃತದೇಹಕ್ಕೆ ಬೆಂಕಿ ಹಚ್ಚಿದರು. ಆದರೆ, ಅರ್ಧಂಬರ್ಧ ಬೆಂದಿದ್ದ ದೇಹ ಅನಾಥವಾಗಿ ಬಿದ್ದಿತ್ತು.
ಇತ್ತ ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿದ್ದ ಅಪರಿಚಿತ ಶವ ಪತ್ತೆಯಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೋಕಾ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಮೃತದೇಹ ಬಸವನಗೌಡನದು ಎಂದು ಪತ್ತೆಯಾಗಿದ್ದು, ಆತನ ಮೊಬೈಲ್ ಕರೆಗಳ ವಿವರ (CDR) ಹಾಗೂ ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ ಶ್ವೇತಾ ಮತ್ತು ಆಕೆಯ ಕುಟುಂಬದವರ ಮೇಲೆ ಪೊಲೀಸರಿಗೆ ಸಂಶಯ ಮೂಡಿದೆ. ತೀವ್ರ ವಿಚಾರಣೆ ನಡೆಸಿದಾಗ ಮೂವರೂ ಸೇರಿ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಸದ್ಯ ಮೋಕಾ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ