newsics.com/ನ್ಯೂಸಿಕ್ಸ್
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ತೀವ್ರ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 25, 26 ಮತ್ತು 29 ರಂದು ಉತ್ತರ ಒಳನಾಡಿನ (NIK) ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗಲಿದೆ. ಆದರೆ, ಮೇ 27 ಮತ್ತು 28 ರಂದು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಂತ ಭೀಕರ ಪರಿಸ್ಥಿತಿ ಇರಲಿದ್ದು, ಗಂಟೆಗೆ ಭರೋಬ್ಬರಿ 50 ರಿಂದ 60 ಕಿ.ಮೀ ವೇಗದಲ್ಲಿ ಭೀಕರ ಬಿರುಗಾಳಿ (Gusty Wind) ಬೀಸುವ ಸಾಧ್ಯತೆ ಇದೆ. ಸಾರ್ವಜನಿಕರು ಹಳೆಯ ಕಟ್ಟಡ ಹಾಗೂ ಮರಗಳ ಬಳಿ ನಿಲ್ಲದಂತೆ ಸೂಚಿಸಲಾಗಿದೆ.
ಇತ್ತ ದಕ್ಷಿಣ ಒಳನಾಡಿನ (SIK) ಜಿಲ್ಲೆಗಳಲ್ಲಿಯೂ ಸಹ ಮೇ 25 ರಿಂದ ಮೇ 29 ರವರೆಗೆ ಕಠಿಣ ಹವಾಮಾನ ಇರಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಇದರೊಂದಿಗೆ ಕರಾವಳಿ ಕರ್ನಾಟಕದ (Coastal Karnataka) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 26 ರಿಂದ ಮೇ 29 ರವರೆಗೆ ಸತತ ನಾಲ್ಕು ದಿನಗಳ ಕಾಲ ಭಾರಿ ಗುಡುಗು ಮತ್ತು ಸಿಡಿಲಿನ ಆರ್ಭಟ ಇರಲಿದೆ ಎಂದು ಇಲಾಖೆ ಎಚ್ಚರಿಸಿದೆ.
ಬೆಂಗಳೂರಿನಲ್ಲಿ ಮೇ 29 ರವರೆಗೆ ಗುಡುಗು ಸಹಿತ ಮಳೆ:
ತೀವ್ರ ಉಷ್ಣಾಂಶ ಹಾಗೂ ಸುಡುವ ಬಿಸಿಲಿನಿಂದ ಕಂಗಾಲಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಅತ್ಯಂತ ತಂಪಾದ ಮುನ್ಸೂಚನೆಯೊಂದನ್ನು ನೀಡಿದೆ. ನಗರದಲ್ಲಿ ಮುಂದಿನ ಇಡೀ ವಾರ ಅಂದರೆ ಮೇ 29 ರವರೆಗೆ ವ್ಯಾಪಕ ಮಳೆಯಾಗುವ (Widespread Rains) ಬಲವಾದ ಸಾಧ್ಯತೆ ಇದ್ದು, ವರುಣನ ಆಗಮನದಿಂದ ತಾಪಮಾನ ಗಣನೀಯವಾಗಿ ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.