newsics.com | ನ್ಯೂಸಿಕ್ಸ್
ಗಂಗಾವತಿ: ಗಾಂಜಾ ಸೇವಿಸಿದ ಪ್ರಕರಣದಲ್ಲಿ ಪೊಲೀಸರ ವಶಕ್ಕೆ ಸಿಕ್ಕ ಯುವಕನೊಬ್ಬನಿಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಮಾಡಿದ್ದಾರೆ.
ಜತೆಗೆ ಸರ್ಕಾರಿ ಶಾಲೆ-ಕಾಲೇಜುಗಳಿಗೆ ಹೋಗಿ ಅಲ್ಲಿನ ಮಕ್ಕಳಿಗೆ ಗಾಂಜಾ ಸೇವನೆಯ ದುಷ್ಪಪರಿಣಾಮ, ಆರೋಗ್ಯ, ಮೆದುಳಿನ ಮೇಲಾಗುವ ಪರಿಣಾಮ ವಿವರಿಸಿ ಜಾಗೃತಿ ಮೂಡಿಸುವಂತೆ ಆದೇಶ ನೀಡುವ ಮೂಲಕ ನ್ಯಾಯಾಲಯ ಗಮನ ಸೆಳೆದಿದೆ.
ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳಿಗೆ ದಂಡ ಹಾಕುವ ಅಥವಾ ಜೈಲು ಶಿಕ್ಷೆ ಪ್ರಕಟಿಸುತ್ತಿದ್ದ ನ್ಯಾಯಾಲಯಗಳು, ಅಪರೂಪದ ಪ್ರಕರಣದಲ್ಲಿ ಗಾಂಜಾ ಸೇವಿಸಿದ ವ್ಯಕ್ತಿಯಿಂದಲೇ ಅದರ ಪರಿಣಾಮ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವಂತೆ ನ್ಯಾಯಾಧೀಶ ನಾಗೇಶ್ ಪಾಟೀಲ್ ಆದೇಶ ಮಾಡಿ ಗಮನ ಸೆಳೆದಿದ್ದಾರೆ.
ಘಟನೆ ಹಿನ್ನೆಲೆ:
ಗಂಗಾವತಿಯ ಸಾಯಿನಗರದ ಅಮರೇಶ ಶೇಖರಪ್ಪ ರಾಮಸಾಗರ ಎಂಬ ಯುವಕ ಕಳೆದ 2024ರ ನವಂಬರ್ 26ರಂದು ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯ ಕಡೇಬಾಗಿಲು ಗ್ರಾಮದಲ್ಲಿ ರಾತ್ರಿ ಹತ್ತು ಗಂಟೆಗೆ ಗಾಂಜಾ ಸೇವಿಸುತ್ತಿರುವುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ಪ್ರಕರಣ ದಾಖಲಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ಯುವಕ ಗಾಂಜಾ ಸೇವಿಸಿದ್ದು, ದೃಢಪಟ್ಟ ಹಿನ್ನೆಲೆ ಹತ್ತು ಸಾವಿರ ದಂಡ ವಿಧಿಸಿದ್ದಾರೆ.
ಅಲ್ಲದೇ ಸಾಮಾಜಿಕ ಜವಾಬ್ದಾರಿ ಹಿನ್ನೆಲೆ ಜು.9ರಂದು ನಗರದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ತೆರಳಿ ಗಾಂಜಾ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಇದು ಸಾಮಾಜಿಕ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ಯಾವುದೇ ಸಂಭಾವನೆ ಪಡೆಯುವಂತಿಲ್ಲ ಎಂದು ನ್ಯಾಯಾಧೀಶ ಆದೇಶ ಮಾಡಿದ್ದಾರೆ.
ನ್ಯಾಯಾಧೀಶರ ಆದೇಶದ ಮೆರೆಗೆ ಯುವಕ, ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು, ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜು ಸೇರಿದಂತೆ ಪೊಲೀಸ್, ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ನಾನಾ ಶಾಲಾ-ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಿದ್ದಾನೆ.
Snakes escaped ಹಾವು ಸಾಕಾಣಿಕಾ ಕೇಂದ್ರಕ್ಕೆ ನುಗ್ಗಿದ ಮಳೆ ನೀರು, 900 ಹಾವುಗಳು ಎಸ್ಕೇಪ್! ವೈರಲ್ ವಿಡಿಯೋ ನೋಡಿ