newsics.com | ನ್ಯೂಸಿಕ್ಸ್
ದೇಶಾದ್ಯಂತ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಪೂರೈಕೆಯಾಗುತ್ತಿರುವುದರ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಆತಂಕಗಳನ್ನು ತಳ್ಳಿಹಾಲಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಮುಂದಿನ ದಿನಗಳಲ್ಲಿ ಶೇಕಡಾ 85 ರಷ್ಟು ಎಥನಾಲ್ ಹೊಂದಿರುವ ‘ಇ85’ (E85) ಇಂಧನವನ್ನು ಪರಿಚಯಿಸುವುದಾಗಿ ತಿಳಿಸಿದ್ದಾರೆ.
ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಇಂಜಿನ್ ಕೆಟ್ಟುಹೋಗುತ್ತಿದೆ ಮತ್ತು ಗ್ರಾಹಕರು ಇದನ್ನು ವಿರೋಧಿಸುತ್ತಿದ್ದಾರೆ ಎಂಬ ವರದಿಗಳು ಕೇವಲ ಅಪಪ್ರಚಾರ ಎಂದು ಸ್ಪಷ್ಟಪಡಿಸಿರುವ ಅವರು, ಸರ್ಕಾರದ ಈ ಹಸಿರು ಇಂಧನ ನೀತಿಯು ಪರಿಸರ ಸಂರಕ್ಷಣೆ ಮತ್ತು ದೇಶದ ಆರ್ಥಿಕ ಸ್ವಾವಲಂಬನೆಗೆ ಅತ್ಯಂತ ಅನಿವಾರ್ಯವಾದ ಹೆಜ್ಜೆಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ವಾಹನ ತಯಾರಕರು ಮತ್ತು ಮೆಕ್ಯಾನಿಕ್ಗಳಿಂದ ಬಂದಿರುವ ವ್ಯಾಪಕ ತಾಂತ್ರಿಕ ಡೇಟಾವನ್ನು ಉಲ್ಲೇಖಿಸಿ, ಎಥನಾಲ್ನಿಂದ ಇಂಜಿನ್ಗಳಿಗೆ ಯಾವುದೇ ಹಾನಿಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉದಾಹರಣೆಗೆ ಸುಜುಕಿ ಕಂಪನಿಯು ಇತ್ತೀಚೆಗೆ 1.5 ಕೋಟಿ ವಾಹನಗಳ ಸರ್ವಿಸ್ ಮಾಡಿದ್ದು, ಎಲ್ಲಿಯೂ ಇಂಧನದಿಂದ ಇಂಜಿನ್ ಹಾನಿಯಾದ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಆರಂಭದಲ್ಲಿ ವಾರಂಟಿ ಮತ್ತು ಇನ್ಶೂರೆನ್ಸ್ ಕಂಪನಿಗಳು ಕ್ಲೈಮ್ ನೀಡುವುದಿಲ್ಲ ಎಂಬ ವದಂತಿಗಳು ಹರಡಿದ್ದವು, ಆದರೆ ಈಗ ಆ ಎಲ್ಲಾ ಗೊಂದಲಗಳನ್ನು ಬಗೆಹರಿಸಲಾಗಿದ್ದು ಗ್ರಾಹಕರಿಗೆ ಸಂಪೂರ್ಣ ರಕ್ಷಣೆ ಇದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಸಾಮಾನ್ಯ ಪೆಟ್ರೋಲ್ಗೆ ಹೋಲಿಸಿದರೆ ಎಥೆನಾಲ್ನ ಕ್ಯಾಲೋರಿಫಿಕ್ ಮೌಲ್ಯ ಕಡಿಮೆಯಿರುವುದರಿಂದ ಮೈಲೇಜ್ನಲ್ಲಿ ಅತ್ಯಲ್ಪ ಪ್ರಮಾಣದ ಇಳಿಕೆಯಾಗುವುದನ್ನು ಒಪ್ಪಿಕೊಂಡಿರುವ ಸಚಿವರು, ಕೇವಲ ಮೈಲೇಜ್ ಒಂದನ್ನೇ ನೋಡುವುದು ತಪ್ಪು ಎಂದಿದ್ದಾರೆ. ಇಂಜಿನಿಯರಿಂಗ್ ದೃಷ್ಟಿಕೋನದಿಂದ ಎಥನಾಲ್ ಇಂಧನವು ವಾಹನದ ಟಾರ್ಕ್ ಮತ್ತು ಆಕ್ಸಿಲರೇಷನ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರ ಹೆಚ್ಚಿನ ಆಕ್ಟೇನ್ ಸಂಖ್ಯೆಯು ಇಂಜಿನ್ ನಾಕಿಂಗ್ (ಶಬ್ದ ಬರುವುದು) ತಡೆಯುವುದಲ್ಲದೆ, ಇಂಜಿನ್ ಒಳಗಿನ ಬಿಡಿಭಾಗಗಳ ಸುರಕ್ಷತೆಯನ್ನು ಕಾಪಾಡುತ್ತದೆ. ಇದೇ ವೇಳೆ ಗ್ರಾಹಕರಿಗೆ ಭಾರೀ ಆರ್ಥಿಕ ಪರಿಹಾರ ನೀಡುವ ಮಹತ್ವದ ಯೋಜನೆಯನ್ನು ಪ್ರಕಟಿಸಿರುವ ಹರ್ದೀಪ್ ಸಿಂಗ್ ಪುರಿ, ಮುಂದಿನ ದಿನಗಳಲ್ಲಿ ಶೇಕಡಾ 85 ರಷ್ಟು ಎಥನಾಲ್ ಹೊಂದಿರುವ ‘ಇ85’ (E85) ಇಂಧನವನ್ನು ಪರಿಚಯಿಸುವುದಾಗಿ ತಿಳಿಸಿದ್ದಾರೆ.
ಈ ಇಂಧನವು ಸಾಮಾನ್ಯ ಇ20 ಪೆಟ್ರೋಲ್ಗಿಂತ ಲೀಟರ್ಗೆ ಬರೋಬ್ಬರಿ 20 ರೂಪಾಯಿ ಅಗ್ಗವಾಗಿ ಸಿಗಲಿದೆ. ಆದರೆ, ಈ ಇಂಧನವನ್ನು ಕೇವಲ ಪ್ರತ್ಯೇಕವಾಗಿ ತಯಾರಿಸಲಾಗುವ ಫ್ಲೆಕ್ಸ್-ಫ್ಯುಯೆಲ್ ವಾಹನಗಳಲ್ಲಿ (FFVs) ಮಾತ್ರ ಬಳಸಲು ಸಾಧ್ಯವಾಗುತ್ತದೆ.
ಎಥೆನಾಲ್ ಮಿಶ್ರಣ ಯೋಜನೆಯು ಭಾರತದ ಆರ್ಥಿಕತೆಯ ಮೇಲೆ ಬೀರುತ್ತಿರುವ ಸಕಾರಾತ್ಮಕ ಪ್ರಭಾವವನ್ನು ಬಲವಾಗಿ ಪ್ರತಿಪಾದಿಸಿದ ಸಚಿವರು, ಒಂದು ವೇಳೆ ಈ ಯೋಜನೆ ಇಲ್ಲದಿದ್ದರೆ ಭಾರತವು ವಿದೇಶಗಳಿಂದ ಇನ್ನಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬೇಕಾಗುತ್ತಿತ್ತು ಮತ್ತು ದೇಶದಲ್ಲಿ ಇಂಧನ ಬೆಲೆಗಳು ಈಗಿರುವುದಕ್ಕಿಂತ ಅತ್ಯಂತ ಹೆಚ್ಚಾಗಿರುತ್ತಿದ್ದವು ಎಂದಿದ್ದಾರೆ.
ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವ ಮೂಲಕ ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದ ಭಾರತೀಯ ಗ್ರಾಹಕರನ್ನು ರಕ್ಷಿಸಬಹುದಾಗಿದೆ. ಅಲ್ಲದೆ, ಇಂಧನಕ್ಕಾಗಿ ವಿದೇಶಗಳಿಗೆ ಹರಿಯುವ ಕೋಟ್ಯಂತರ ರೂಪಾಯಿ ಹಣವು ನೇರವಾಗಿ ದೇಶದ ಕೃಷಿ ವಲಯಕ್ಕೆ ಮತ್ತು ರೈತರ ಕೈಗೆ ಸೇರುತ್ತಿರುವುದರಿಂದ ಇದು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ’ದ ಕನಸನ್ನು ಸಾಕಾರಗೊಳಿಸುತ್ತಿದೆ.
ಮುಂದಿನ ನೀತಿಗಳ ಕುರಿತು ಎದ್ದಿರುವ ಗೊಂದಲಗಳಿಗೆ ತೆರೆ ಎಳೆದಿರುವ ಸಚಿವರು, ಸದ್ಯಕ್ಕೆ ಶೇಕಡಾ 25 ರಷ್ಟು ಎಥನಾಲ್ ಮಿಶ್ರಣ ಮಾಡುವ ಇ25 (E25) ಪೆಟ್ರೋಲ್ ಕೇವಲ ಪ್ರಾಯೋಗಿಕ ಹಂತದಲ್ಲಿದೆ, ಆದ್ದರಿಂದ ಸಾರ್ವಜನಿಕರು ಗೊಂದಲಕ್ಕೊಳಗಾಗಬೇಕಿಲ್ಲ ಎಂದಿದ್ದಾರೆ.
ಈ ಜೈವಿಕ ಇಂಧನ ಯೋಜನೆಯು ದೇಶದ ಎಲೆಕ್ಟ್ರಿಕ್ ವಾಹನ (EV) ಕ್ರಾಂತಿಗೆ ಯಾವುದೇ ಅಡ್ಡಿಯಾಗುವುದಿಲ್ಲ, ಎಐ ಮತ್ತು ಇವಿ ಎರಡೂ ತಂತ್ರಜ್ಞಾನಗಳು ಒಟ್ಟಿಗೆ ಸಾಗಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.