newsics. com| ನ್ಯೂಸಿಕ್ಸ್
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯುವ ಸಲುವಾಗಿ ಇಂದಿನ ಜನತೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಮಾಡುವ ಸಾಹಸ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ, ತುಮಕೂರಿನ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ದೇವರಾಯನದುರ್ಗ ಬೆಟ್ಟದಲ್ಲಿ ರೀಲ್ಸ್ ಮಾಡಲು ಹೋಗಿ ಕಾಲೇಜು ಉಪನ್ಯಾಸಕರೊಬ್ಬರು ಕಾಲು ಜಾರಿ ಬೆಟ್ಟದಿಂದ ಆಳವಾದ ಪ್ರಪಾತಕ್ಕೆ ಬಿದ್ದಿರುವ ಘಟನೆ ಇಂದು ನಡೆದಿದೆ.
ಗಾಯಗೊಂಡ ಉಪನ್ಯಾಸಕನನ್ನು ಶಿವಪ್ರಸಾದ್ ಎಂದು ಗುರುತಿಸಲಾಗಿದ್ದು, ಮೂಲತಃ ತುಮಕೂರು ತಾಲೂಕಿನ ಬಳ್ಳಾಪುರದವರಾದ ಇವರು, ಪ್ರಸ್ತುತ ಹಾಸನ ಜಿಲ್ಲೆಯ ಅರಸೀಕೆರೆಯ ಪಿಯು ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಜೆಯ ಮಜಾ ಕಳೆಯಲು ದೇವರಾಯನದುರ್ಗ ಬೆಟ್ಟಕ್ಕೆ ಬಂದಿದ್ದ ಶಿವಪ್ರಸಾದ್, ಇಲ್ಲಿನ ಸುಂದರ ವಾತಾವರಣದಲ್ಲಿ ಸಾಮಾಜಿಕ ಮಾಧ್ಯಮಗಳಿಗಾಗಿ ‘ರೀಲ್ಸ್’ ವೀಡಿಯೊ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಅವರು ದೇವರಾಯನದುರ್ಗ ದೇವಾಲಯದ ಹಿಂಭಾಗದಲ್ಲಿರುವ ಅಪಾಯಕಾರಿ ಹಾಗೂ ಕಡಿದಾದ ಬಂಡೆಯೊಂದನ್ನು ಹತ್ತಿದ್ದಾರೆ. ಆದರೆ, ವೀಡಿಯೊ ಚಿತ್ರೀಕರಣದ ಭರದಲ್ಲಿ ಮೈಮರೆತಾಗ ಆಕಸ್ಮಿಕವಾಗಿ ಕಾಲು ಜಾರಿ, ಬೆಟ್ಟದ ಮೇಲಿಂದ ನೂರಾರು ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು:
ಶಿವಪ್ರಸಾದ್ ಅವರು ಬೆಟ್ಟದಿಂದ ಕೆಳಗೆ ಬೀಳುತ್ತಿದ್ದಂತೆ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಘಟನೆಯನ್ನು ಕಂಡ ಸ್ಥಳೀಯ ನಿವಾಸಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಅತ್ಯಂತ ಶ್ರಮವಹಿಸಿ ಪ್ರಪಾತಕ್ಕೆ ಇಳಿದ ಸ್ಥಳೀಯರು, ತೀವ್ರವಾಗಿ ಗಾಯಗೊಂಡಿದ್ದ ಶಿವಪ್ರಸಾದ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.