newsics.com/ನ್ಯೂಸಿಕ್ಸ್
ಉತ್ತರ ಕನ್ನಡ: ಮಸೀದಿಯಲ್ಲಿ ಆಝಾನ್ (ಬಾಂಗ್) ನೀಡುತ್ತಿದ್ದ ಸಂದರ್ಭದಲ್ಲೇ ಬಂಟ್ವಾಳ ಮೂಲದ ಧರ್ಮಗುರುಗಳೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಸೀದಿಯೊಂದರಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ನಿವಾಸಿ, ನೂಜಿ ಉಸ್ಮಾನ್ ಅವರ ಪುತ್ರ ಅಬ್ದುಲ್ ಲತೀಫ್ ಮದನಿ (50) ಮೃತರು ಎಂದು ತಿಳಿದುಬಂದಿದೆ.
ಸಂಜೆ ಸುಮಾರು 4 ಗಂಟೆಯ ನಮಾಜ್ ಸಮಯಕ್ಕೆ ಸರಿಯಾಗಿ ಹೊನ್ನಾವರದ ಮಸೀದಿಯಲ್ಲಿ ಅಬ್ದುಲ್ ಲತೀಫ್ ಮದನಿ ಆಝಾನ್ ನೀಡುತ್ತಿದ್ದರು. ಈ ವೇಳೆ ಅವರಿಗೆ ದಿಢೀರನೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿದೆ. ಪರಿಣಾಮವಾಗಿ ಅವರು ಮೈಕ್ ಮುಂದೆಯೇ ಸ್ಥಳದಲ್ಲೇ ಕುಸಿದು ಕೊನೆಯುಸಿರೆಳೆದಿದ್ದಾರೆ. ಮೃತ ಅಬ್ದುಲ್ ಲತೀಫ್ ಮದನಿ ಕಳೆದ ಒಂದು ವರ್ಷದಿಂದ ಈ ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಈ ಎಲ್ಲಾ ದೃಶ್ಯಗಳು ಮಸೀದಿಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಬ್ದುಲ್ ಲತೀಫ್ ಮದನಿ ಅವರ ನಿಧನಕ್ಕೆ ಮುಹಿದ್ದೀನ್ ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.
https://www.newsics.com/2026/06/10/hardik-and-his-girlfriends-fight-in-bengaluru-why-did-they-come-to-the-diagnostics-center/