ಅಜ್ಜಿಯೊಬ್ಬರು ತನ್ನ ಐದು ವರ್ಷದ ಮೊಮ್ಮಗಳ ಕೈ-ಕಾಲು ಕಟ್ಟಿಹಾಕಿ ರಣ ಬಿಸಿಲಿನಲ್ಲಿ ಮನೆಯಹೊರಗೆ ಮಲಗಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಮಗುವಿನ ಅಜ್ಜಿ ಮಕ್ಕಳ ರಕ್ಷಣೆಗಾಗಿ ಪೊಲೀಸ್ ಇಲಾಖೆಯಲ್ಲಿ ಇರುವ ‘ಮಹಿಳಾ ಮಿತ್ರ’ (ಮಹಿಳಾ ಹೆಲ್ಪ್ಡೆಸ್ಕ್) ಆಗಿ ಕೆಲಸ ಮಾಡುವ ಅಧಿಕಾರಿಯಾಗಿದ್ದು, ಈಕೆಯೇ ಮ್ಮೊಮ್ಮಗಳ ಮೇಲೆ ಕ್ರೌರ್ಯ ಮೆರೆದಿದ್ದಾಳೆ.
ಪಂಜಾಬ್ ನ ಫರೀದ್ ಕೋಟ್ ನಲ್ಲಿ ಈ ಘಟನೆ ನಡೆದಿದೆ. ಅಜ್ಜಿ ಫರೀದ್ಕೋಟ್ನ ದೋಗರ್ ಬಸ್ತಿ ನಿವಾಸಿ ಎಎಸ್ಐ ಸರಬ್ಜಿತ್ ಕೌರ್ ಎಂದು ತಿಳಿದುಬಂದಿದೆ. ತನ್ನ 5 ವರ್ಷದ ಮೊಮ್ಮಗಳ ಕೈ ಮತ್ತು ಕಾಲುಗಳನ್ನು ಬಟ್ಟೆಯಿಂದ ಮನೆಯ ಗೇಟ್ಗೆ ಕಟ್ಟಿಹಾಕಿದ್ದರು. ರಣ ಬಿಸಿಲಿನಲ್ಲಿ ಮಗು ಅಳುತ್ತಾ ಮಲಗಿದ್ದರೂ ಅಜ್ಜಿಗೆ ಕಿಂಚಿತ್ತೂ ಕರುಣೆ ಬಂದಿಲ್ಲ. ಮಗುವನ್ನು ಸುಡುಬಿಸಿಲಿನಲ್ಲಿ ಹಾಗೆಯೇ ಬಿಟ್ಟು ಹೋಗಿದ್ದಾಳೆ.
ಮಗುವಿನ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಮಗುವಿನ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಮಗು ಬಿಸಿಲಿನಲ್ಲಿ ನರಳುತ್ತಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ ಮತ್ತು ಮಗುವಿನ ಕಟ್ಟುಗಳನ್ನು ಬಿಚ್ಚಿ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪಂಜಾಬ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಬಾಲಕಿಯ ತಂದೆ-ತಾಯಿ ಕೆಲಸದ ನಿಮಿತ್ತ ಪೋರ್ಚುಗಲ್ನಲ್ಲಿ ವಾಸಿಸುತ್ತಿದ್ದಾರೆ. ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ಭರವಸೆಯ ಮೇಲೆ ಅಜ್ಜಿಯ ಬಳಿ ಬಿಟ್ಟು ಹೋಗಿದ್ದರು. ಆದರೆ ಅಜ್ಜಿಯೇ ಮಗುವಿನ ಮೇಲೆ ಈ ರೀತಿ ಕ್ರೌರ್ಯ ಮೆರಿದ್ದಾಳೆ.
ಘಟನೆ ಬೆಳಕಿಗೆ ಬಂದ ತಕ್ಷಣ ಫರೀದ್ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಜ್ಞಾ ಜೈನ್ ಅವರು ಕೌರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಪೊಲೀಸ್ ಪಡೆಯಲ್ಲಿ ಶಿಸ್ತು ಮತ್ತು ಮಾನವೀಯತೆ ಮುಖ್ಯ. ಅಧಿಕಾರಿಯೊಬ್ಬರು ಮಗುವಿನ ಮೇಲೆ ಇಂತಹ ಕ್ರೌರ್ಯ ತೋರುವುದು ಸ್ವೀಕಾರಾರ್ಹವಲ್ಲ ಎಂದು ಡಿಎಸ್ಪಿ ತರ್ಲೋಚನ್ ಸಿಂಗ್ ತಿಳಿಸಿದ್ದಾರೆ.
ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಅಜ್ಜಿಯ ವಿಕೃತ ವರ್ತನೆಯ ಹಿಂದೆ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.