ಸಮಾಜದ ಹಂಗು, ಕುಟುಂಬದ ವಿರೋಧ ಹಾಗೂ ಪ್ರಾಣಭಯವನ್ನೂ ಲೆಕ್ಕಿಸದೆ, ಶಾರೀರಿಕವಾಗಿ ಕುಳ್ಳಗಿರುವ (Dwarf) ಯುವಕನನ್ನೇ ತನ್ನ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡ ಯುವತಿಯ ಧೈರ್ಯಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕೃಷ್ಣಾ ಜಿಲ್ಲೆಯ ಮಚಿಲಿಪಟ್ಟಣದ ರಾಜುಪೇಟೆಯ ನಿವಾಸಿ ವೇಮುಲ ಶಶಿ ಮತ್ತು ಅದೇ ಭಾಗದ ಮುಸ್ಲಿಂ ಸಮುದಾಯದ ಯುವತಿ ಲವ್ ಮಾಡಿ ಮದುವೆಯಾಗಿದ್ದಾರೆ.
ಇವರಿಬ್ಬರ ಪರಿಚಯ ಆರಂಭವಾಗಿದ್ದು ಶಾಲಾ ದಿನಗಳಲ್ಲಿ. ಒಂಬತ್ತನೇ ತರಗತಿಯಲ್ಲಿದ್ದಾಗ ಮೊದಲಿಬ್ಬರು ಸ್ನೇಹಿತರಾದರು. ಕಾಲಕ್ರಮೇಣ ಈ ಸ್ನೇಹ ಗಾಢವಾದ ಪ್ರೇಮವಾಗಿ ಬದಲಾಯಿತು. ಶಶಿ ಶಾರೀರಿಕವಾಗಿ ಕುಳ್ಳಗಿದ್ದರೂ, ಆತ ನಡೆಸಿಕೊಳ್ಳುವ ರೀತಿ ಮತ್ತು ಆತನ ವ್ಯಕ್ತಿತ್ವಕ್ಕೆ ಆ ಯುವತಿ ಮಾರುಹೋಗಿದ್ದರು. ರೂಪಕ್ಕಿಂತ ಗುಣವೇ ಮಿಗಿಲು ಎಂಬ ನಿರ್ಧಾರಕ್ಕೆ ಬಂದ ಯುವತಿ, ಜೀವನವಿಡೀ ಶಶಿಯ ಜೊತೆಗೇ ಇರಲು ಸಂಕಲ್ಪ ತೊಟ್ಟರು.
ಯಾವಾಗ ಇವರ ಪ್ರೀತಿಯ ವಿಷಯ ಮನೆಯವರಿಗೆ ತಿಳಿಯಿತೋ, ಆಗ ಸಂಕಷ್ಟಗಳು ಆರಂಭವಾದವು. ಈ ವಿವಾಹಕ್ಕೆ ಮುಖ್ಯವಾಗಿ ಎರಡು ಅಡೆತಡೆಗಳಿದ್ದವು. ಮೊದಲನೆಯದು ಧರ್ಮದ ಭಿನ್ನತೆ; ಎರಡನೆಯದು ಶಶಿಯ ಶಾರೀರಿಕ ಸ್ಥಿತಿ. ಶಶಿ ಕುಳ್ಳಗಿದ್ದಾನೆ ಎಂಬ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಮತ್ತು ಸಂಬಂಧಿಕರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ನೋಡಲು ಸುಂದರವಾಗಿರುವ ನೀನು, ಕುಳ್ಳಗಿರುವವನನ್ನು ಮದುವೆಯಾದರೆ ಸಮಾಜ ಏನೆಂದುಕೊಂಡೀತು?’ ಎಂಬ ಹಿಯಾಳಿಕೆಗಳು ಕೇಳಿಬಂದವು. ಆದರೆ ಆ ಯುವತಿ ಯಾವುದಕ್ಕೂ ಜಗ್ಗಲಿಲ್ಲ.
ಪ್ರಾಣಭಯ ಮತ್ತು ಪೊಲೀಸ್ ರಕ್ಷಣೆ:
ದಿನಕಳೆದಂತೆ ಮನೆಯವರಿಂದ ಒತ್ತಡ ಮತ್ತು ಪ್ರಾಣಭಯ ಎದುರಾಯಿತು. ಈ ಹಿನ್ನೆಲೆಯಲ್ಲಿ, ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಈ ಜೋಡಿ ಗುಟ್ಟಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದರು. ಅಂತೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನವಜೋಡಿ, ರಕ್ಷಣೆ ಕೋರಿ ಮಚಿಲಿಪಟ್ಟಣದ ಇನುಕುದುರುಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ತಮ್ಮ ಕುಟುಂಬದವರಿಂದ ತಮಗೆ ಅಪಾಯವಿರುವುದಾಗಿ ಪೊಲೀಸರಿಗೆ ತಿಳಿಸಿ, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ವೃತ್ತಿ ಜೀವನ:
ಪ್ರಸ್ತುತ ವೇಮುಲ ಶಶಿ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಮಾಡುತ್ತಿದ್ದಾರೆ. ಇನ್ನು ಮದುವೆಯಾದ ಯುವತಿ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಬಡತನ ಅಥವಾ ಶಾರೀರಿಕ ನ್ಯೂನತೆ ಪ್ರೀತಿಗೆ ಅಡ್ಡಿಯಾಗಬಾರದು ಎಂಬುದು ಈ ಜೋಡಿಯ ನಿಲುವು.
ಸಮಾಜಕ್ಕೆ ಮಾದರಿಯಾದ ನಿರ್ಧಾರ:
ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಫೋಟೋಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವತಿಯ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
10,000ರೂ.ಕಳಿಸಿದ್ರೆ ನಿಮ್ಮ ಖಾತೆ ಗಂಟೆ ಲಾಕ್; ಆರ್ಬಿಐ ಹೊಸ ಕ್ರಮಕ್ಕೆ ಯೋಜನೆ