newsics.com
ಕೌನ್ ಬನೇಗಾ ಕರೋಡ್ ಪತಿ ಇದೀಗ 17ನೇ ಸೀಸನ್ ನಡೆಯುತ್ತಿದೆ. ಇಷ್ಟೂ ವರ್ಷಗಳೂ ಇದನ್ನು ನಟ ಅಮಿತಾಭ್ ಬಚ್ಚನ್ ಅವರೇ ನಡೆಸಿಕೊಡ್ತಿರೋದು ವಿಶೇಷ. ಈ ಷೋನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ, ಸಾಮಾನ್ಯ ಜನರಿಂದು ಹಿಡಿದು ಸೆಲೆಬ್ರಿಟಿಗಳವರೆಗೆ, ಬೇರೆ ಬೇರೆ ಭಾಷೆಗಳ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಎಲ್ಲರೂ ಹಾಟ್ ಸೀಟ್ನಲ್ಲಿ ಕುಳಿತಿದ್ದಾರೆ. ಆರಂಭದಲ್ಲಿ ಒಂದು ಕೋಟಿ ರೂಪಾಯಿಗೆ ಸೀಮಿತವಾಗಿದ್ದ ಈ ಷೋ ಇದೀಗ ಏಳು ಕೋಟಿಗೆ ಬಂದು ತಲುಪಿದೆ. ಹಲವಾರು ಮಂದಿ ಕೋಟಿ ಕೋಟಿ ಗೆದ್ದು ಬೀಗಿದ್ದಾರೆ.
ಇದೀಗ ನಟ ಅಮಿತಾಭ್ ಬಚ್ಚನ್ ಅವರು ಸಸ್ಯಾಹಾರದ ಕುರಿತು ಸ್ಪರ್ಧಿಯೊಬ್ಬ ಹೇಳಿದ ಮಾತು ಕೇಳಿ ಶಾಕ್ ಆಗಿ ಹೋಗಿದ್ದಾರೆ. ನೀವು ನನ್ನ ಕಣ್ಣು ತೆರೆಸಿದ್ರಿ. ನಿಜಕ್ಕೂ ಇದು ನನಗೆ ಗೊತ್ತೇ ಇರಲಿಲ್ಲ. ಈಗಲೇ ಮನೆಗೆ ಹೋಗಿ ಎಲ್ಲರಿಗೂ ನಾನು ತೊಂದರೆ ಕೊಡುತ್ತೇನೆ ಎಂದಿದ್ದಾರೆ.
ಸಿದ್ಧಾರ್ಥ ಶರ್ಮ ಎನ್ನುವ ಸ್ಪರ್ಧಿಯ ಬಾಯಿಯಿಂದ ಸಸ್ಯಾಹಾರದ ಮಾತನ್ನು ಕೇಳಿದ್ದಾರೆ ಅಮಿತಾಭ್. ಸಿದ್ಧಾರ್ಥ್ ಅವರು ಕಳೆದ ಏಳು ವರ್ಷಗಳಿಂದ ನಾನು ಹಾಲು ಕುಡಿಯುತ್ತಿಲ್ಲ. ಏಕೆಂದರೆ, ಆ ಹಾಲು ಸೃಷ್ಟಿಯಾಗಿರುವುದು ಅದರ ಮಗುವಿಗೆ ಕೊಡುವುದಕ್ಕಾಗಿ. ಅದನ್ನು ನಾವು ಕುಡಿದರೆ ಪ್ರಾಣಿ ಹಿಂಸೆ ಮಾಡಿದಂತೆ. ಹಾಲಿನ ಪದಾರ್ಥಗಳನ್ನು ಯಾವುದೂ ಸೇವಿಸುವುದಿಲ್ಲ ಎಂದಿದ್ದಾರೆ.
ಅವರ ಪತ್ನಿಯನ್ನು ವಿಚಾರಿಸಿದಾಗ, ಅವರು, ತಮ್ಮ ಪತಿ ಚರ್ಮದ ಶೂಸ್ ಸೇರಿದಂತೆ ಯಾವುದನ್ನೂ ಉಪಯೋಗಿಸುವುದಿಲ್ಲ. ಅಷ್ಟೇ ಅಲ್ಲದೇ, ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಕಾಯಿ ಸಾಯಿಸಿ ಅದರಿಂದ ನೂಲು ತೆಗೆಯುವ ಕಾರಣದಿಂದ ರೇಷ್ಮೆ ಬಟ್ಟೆಗಳನ್ನೂ ಧರಿಸುವುದಿಲ್ಲ.
ಮದುವೆಯ ಸಂದರ್ಭದಲ್ಲಿಯೂ ಅವರಿಗೆ ಬೇಕಾದ ರೀತಿಯಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು ಎಂದಿದ್ದಾರೆ. ಇದನ್ನು ಕೇಳಿ ನಟ ಅಮಿತಾಭ್ ಶಾಕ್ ಆಗಿದ್ದು, ನಿಜಕ್ಕೂ ಆ ನಿಟ್ಟಿನಲ್ಲಿ ನಾನು ಯೋಚನೆಯೇ ಮಾಡಿರಲಿಲ್ಲ. ನೀವು ನನ್ನ ಕಣ್ಣು ತೆರೆಸಿದಿರಿ. ಇವತ್ತೇ ಮನೆಗೆ ಹೋಗಿ ಎಲ್ಲರಿಗೂ ವಿಷಯ ಹೇಳುತ್ತೇನೆ. ಅವರಿಗೆಲ್ಲಾ ತೊಂದರೆ ಕೊಡುತ್ತೇನೆ ಎಂದಿದ್ದಾರೆ.
https://www.newsics.com/2026/03/29/the-historic-vairamudi-festival-was-held-in-melukote/