newsics.com
ನವದೆಹಲಿ: ದೆಹಲಿಯ ಏಮ್ಸ್ನಲ್ಲಿ ದಯಾಮರಣಕ್ಕೆ ಅನುಮತಿ ಪಡೆದುಕೊಂಡಿದ್ದ ಹರೀಶ್ ರಾಣಾ ಇಂದು ನಿಧನರಾಗಿದ್ದಾರೆ. ಮಾರ್ಚ್ 14 ರಂದು ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 11ನೇ ದಿನದಂದು ಅವರು ಕೊನೆಯುಸಿರೆಳೆದಿದ್ದಾರೆ.
13 ವರ್ಷಗಳಿಂದ ಕೋಮಾದಲ್ಲಿದ್ದ ಗಾಜಿಯಾಬಾದ್ನ ಯುವಕ ಹರೀಶ್ ರಾಣಾ ಅವರನ್ನು ಏಮ್ಸ್ನ ಐಆರ್ಸಿಹೆಚ್ (ಇನ್ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆ)ನ ಉಪಶಾಮಕ ಆರೈಕೆ ವಾರ್ಡ್ಗೆ ದಾಖಲಿಸಲಾಗಿತ್ತು. ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕಾಗಿ ಅನುಮತಿ ನೀಡಿತ್ತು ಮತ್ತು ಉಪಶಾಮಕ ಆರೈಕೆಗಾಗಿ ಏಮ್ಸ್ಗೆ ದಾಖಲಾಗುವಂತೆ ನಿರ್ದೇಶಿಸಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಏಮ್ಸ್ ವೈದ್ಯರ ಸಮಿತಿಯನ್ನು ರಚಿಸಿತ್ತು ಮತ್ತು ಮಾರ್ಚ್ 14 ರಂದು ಹರೀಶ್ ರಾಣಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ವೈದ್ಯರು ಮಾತನಾಡಿದ್ದು, ‘ಹರೀಶ್ ರಾಣಾಗೆ ಪೌಷ್ಠಿಕಾಂಶ ಪೂರೈಸುವ ಟ್ಯೂಬ್ ಅನ್ನು ತೆಗೆದುಹಾಕಲಾಗಿಲ್ಲ. ಬದಲಿಗೆ ಮುಚ್ಚಲಾಗಿದೆ. ಅದೇ ರೀತಿ, ನೀರು ಪೂರೈಸುವ ಟ್ಯೂಬ್ ಅನ್ನು ಸಹ ಮುಚ್ಚಲಾಯಿತು. ನಂತರ ಹರೀಶ್ ರಾಣಾ ಅವರನ್ನು ದಯಾಮರಣಗೊಳಿಸುವ ಪ್ರಕ್ರಿಯೆ ಪ್ರಾರಂಭವಾಯಿತು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ವೈದ್ಯರು ಪರೀಕ್ಷೆ ನಡೆಸಿದರು : ಇದಕ್ಕೂ ಮೊದಲು ಹರೀಶ್ ರಾಣಾ ಅವರ ಪೋಷಕರು ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಆ ಬಳಿಕ ವೈದ್ಯರು ಅವರನ್ನು ಪರೀಕ್ಷಿಸಿದರು. ಕಳೆದ 13 ವರ್ಷಗಳಿಂದ ಹರೀಶ್ ರಾಣಾ ಹಾಸಿಗೆ ಹಿಡಿದಿದ್ದರು. ಅಲ್ಲದೇ, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.
ಏಮ್ಸ್ ವೈದ್ಯರು ಇಡೀ ಪ್ರಕ್ರಿಯೆಯನ್ನು ನೋವು ರಹಿತ ಮತ್ತು ಸಾಮಾನ್ಯವಾಗಿಸಲು ಕೆಲಸ ಮಾಡುತ್ತಿದ್ದರು. ದಯಾಮರಣದ ಎರಡನೇ ಹಂತ ಪ್ರಾರಂಭವಾದ ನಂತರ, ಹರೀಶ್ ರಾಣಾ ಅವರನ್ನು ಭೇಟಿ ಮಾಡಲು ಪೋಷಕರಿಗೆ ಅನುಮತಿಯನ್ನು ರದ್ದುಗೊಳಿಸಲಾಯಿತು.
ಪ್ರಕರಣದ ಹಿನ್ನೆಲೆ : 2013ರಲ್ಲಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಹರೀಶ್ ರಾಣಾ ಅವರು ಅಂದಿನಿಂದ ಕೋಮಾದಲ್ಲಿದ್ದರು. ಮಗನನ್ನು ಅಂದಿನಿಂದಲೂ ಪೋಷಕರು ಕಾಪಾಡುತ್ತಾ ಬಂದಿದ್ದರು. ಆದರೆ, ಯಾವುದೇ ಚೇತರಿಕೆ ಇಲ್ಲದ ಕಾರಣ, ಆತನಿಗೆ ದಯಾಮರಣ ನೀಡಬೇಕು ಎಂದು ಕೋರಿ ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಸುಪ್ರೀಂ ಕೂಡಾ ಅನುಮತಿ ನೀಡಿತ್ತು.