Subscribe ನ್ಯೂಸಿಕ್ಸ್ ಕನ್ನಡ
newsics.com
ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಸಂಸತ್ ಪ್ರವೇಶ ಮಾಡಿರುವ, ‘ಹಿಂದೂ ಫೈರ್ ಬ್ರಾಂಡ್’ ಖ್ಯಾತಿಯ ಸಂಸದ ಅನಂತಕುಮಾರ್ ಹೆಗಡೆ ರಾಜ್ಯ ರಾಜಕಾರಣಕ್ಕೆ ಬರುತ್ತಿದ್ದಾರೆ ಎಂಬುದೇ ಈ ಚರ್ಚೆಯ ಗುಟ್ಟು.
2024ರ ಲೋಕಸಭೆ ಚುನಾವಣೆ ನಂತರ ಮತ್ತೆ ರಾಜಕೀಯದ ಯಾವ ಕಿಂಡಿಯಲ್ಲೂ ಕಂಡಿಲ್ಲ. ತಮ್ಮ ಕದಂಬ ಸಂಸ್ಥೆಗೆ ಸಂಬಂಧಿಸಿದ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈಗಲೂ ಅವರು ಎಲ್ಲಿಯೂ ತಾನು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಹೇಳಿಲ್ಲ. ಆದರೆ, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಈ ಚರ್ಚೆ ಈಗ ಪಕ್ಷದ ಕಚೇರಿಯವರೆಗೂ ಬಂದು ನಿಂತಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಸ್ವರೂಪ ಸಿಕ್ಕಿಲ್ಲ. ರಾಜ್ಯ ನಾಯಕರೂ ಈ ಬಗ್ಗೆ ಸ್ಪಷ್ಟಿಕರಣ ಕೊಡಲು ಸಿದ್ದರಿಲ್ಲ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅನಂತಕುಮಾ ಹೆಗಡೆಯವರನ್ನು ಮರಳಿ ರಾಜಕಾರಣಕ್ಕೆ ಕರೆ ತರಬೇಕೆಂಬ ಪ್ರಸ್ತಾಪ ಸಂಘದ ಪ್ರಮುಖರ ಸಭೆಯಲ್ಲಿ ಆಗಾಗ ನಡೆದಿದೆ. ಹೆಗಡೆ ಸಂಘವೇ ಬೆಳೆಸಿದ ರಾಜಕೀಯ ಕೂಸಾಗಿರುವುದರಿಂದ ಅವರನ್ನು ಪಕ್ಷಕ್ಕೆ ಬಳಕೆ ಮಾಡಿಕೊಳ್ಳದೇ ಇರುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ. ಆದರೆ ಹೆಗಡೆಯವರ ಈ ಹಿಂದಿನ ಕೆಲ ಹೇಳಿಕೆ ಹಾಗೂ ಅದು ಪಕ್ಷದ ಮೇಲೆ ಬೀರಿದ ಪರಿಣಾಮಗಳ ವಿಚಾರದಲ್ಲಿ ರಾಷ್ಟ್ರೀಯ ನಾಯಕರಿಗೆ ಸದಭಿಪ್ರಾಯ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಈಗ ಹರಿದಾಡುತ್ತಿರುವ ಸುದ್ದಿಯನ್ನು ದೃಢೀಕರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಆದರೆ, ಇದಕ್ಕೆ ಯಾವುದೇ ಆಧಾರಗಳು ಇಲ್ಲ. ಬಿಜೆಪಿ ಉನ್ನತ ಮೂಲಗಳು ಕೂಡ ಆ ರೀತಿಯ ಬೆಳವಣಿಗೆ ನಡೆದಿಲ್ಲ. ಅಸಲಿಗೆ 2024ರ ಚುನಾವಣೆ ವೇಳೆ ಅನಂತ ಕುಮಾರ ಅವರ ಹೇಳಿಕೆಯಿಂದಲೇ ಪಕ್ಷಕ್ಕೆ ಹಾನಿಯಾಗಿತ್ತು. ಹಾಗಾಗಿ ಅವರನ್ನು ಚುನಾವಣೆಯಿಂದ ದೂರ ಇಟ್ಟಿದ್ದರು. ಹೀಗಿರುವಾಗ ಅವರನ್ನು ಮತ್ತೆ ಕರೆದು ಮಾತನಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆ ರೀತಿಯ ಚರ್ಚೆಯೂ ಪಕ್ಷದ ವಲಯದಲ್ಲಿ ನಡೆದಿಲ್ಲ ಎಂದು ಬಿಜೆಪಿಯ ದಿಲ್ಲಿ ಮೂಲದ ನಾಯಕರೊಬ್ಬರು ತಿಳಿಸಿದ್ದಾರೆ.
ಹಾಗಿದ್ದರೆ, ಈ ರೀತಿಯ ಸುದ್ದಿ ಹರಡಲು ಕಾರಣ ಏನಿರಬಹುದು ಎನ್ನುವುದು ಕುತೂಹಲದ ಪ್ರಶ್ನೆ. ಅನಂತ ಕುಮಾರ ಹೆಗಡೆ ಅವರು ರಾಜ್ಯ ರಾಜಕಾರಣಕ್ಕೆ ಬಂದರೆ ಹೇಗಿರಬಹುದು, ಸಾರ್ವಜನಿಕ ವಲಯದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ದೊರೆಯಬಹುದು ಎನ್ನುವ ತಾಲೀಮು ಆಗಿದ್ದರೂ ಇರಬಹುದು. ನಿಜವಾಗಿಯೂ ಹೈಕಮಾಂಡ್ ಅನಂತ ಕುಮಾರ ಹೆಗಡೆ ಅವರನ್ನು ಅಸ್ತ್ರವಾಗಿ ಪ್ರಯೋಗಿಸುವ ಯೋಚನೆಯಲ್ಲಿ ಇರಬಹುದು. ಅಥವಾ ಇಂಥದ್ದೊಂದು ಸುದ್ದಿ ಮೂಲಕ ಹಲವರಿಗೆ ಸಂದೇಶ ಮುಟ್ಟಿಸುವ ಉಪಾಯ ಇರಬಹುದು ಎನ್ನುವುದು ಜನರ ರಾಜಕೀಯ ವಿಶ್ಲೇಷಣೆ.
ಅದೇನೇ ಇದ್ದರೂ, ಅನಂತ ಕುಮಾರ ಹೆಗಡೆ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದವರಿಗೆ ಮತ್ತು ಅವರ ಪ್ರಖರ ಭಾಷಣದ ರುಚಿ ಉಂಡವರಿಗೆ ಈ ಸುದ್ದಿ ಕುತೂಹಲ ಕೆರಳಿಸಿದೆ. ಜತೆಗೆ ಮುಂದೇನಾಗಬಹುದು ಎನ್ನುವ ಆಸಕ್ತಿಯೂ ಹುಟ್ಟಿಸಿದೆ. ಹರಿದಾಡುತ್ತಿರುವ ಸುದ್ದಿಯಂತೆ ಅನಂತ ಕುಮಾರ ಹೆಗಡೆ ರಾಜ್ಯ ರಾಜಕಾರಣಕ್ಕೆ ಹೆಜ್ಜೆ ಇಟ್ಟರೆ ಹೊಸ ಅಲೆ ಏಳುವ ಸಾಧ್ಯತೆ ಹೆಚ್ಚಾಗಿದೆ. ಶಿರಸಿ ವಿಧಾನಸಭಾ ಕ್ಷೇತ್ರಕ್ಕೂ ಬಿಜೆಪಿಗೆ ಪ್ರಬಲ ಅಭ್ಯರ್ಥಿ ದೊರೆಯಲಿದೆ.
https://www.newsics.com/2026/02/13/rare-planetary-parade-in-the-sky-on-february-28th/