Subscribe ನ್ಯೂಸಿಕ್ಸ್ ಕನ್ನಡ
newsics.com
ಬಳ್ಳಾರಿ: ಬಳ್ಳಾರಿ ವಲಯ ಪೊಲೀಸ್ ಉಪ ಮಹಾನಿರೀಕ್ಷಕಿಯಾಗಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್, ಬಳ್ಳಾರಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡ ಬಳಿಕವೂ ಕೆಳಹಂತದ ಅಧಿಕಾರಿಗಳಿಗೆ ಕರೆ ಮಾಡಿ ಕಡತಗಳ ವಿಚಾರದಲ್ಲಿ ಮೌಖಿಕ ಸೂಚನೆ ನೀಡಿರುವುದು ಬಹಿರಂಗವಾಗಿದೆ. ಇದೀಗ ವಿಡಿಯೊ, ದಾಖಲೆಗಳು ಶನಿವಾರ ಬಿಡುಗಡೆಯಾಗಿವೆ.
ಬಳ್ಳಾರಿ ವಲಯದ ಸಹಾಯಕ ಆಡಳಿತಾಧಿಕಾರಿ ಬಸವರಾಜ್ ಅವರಿಗೆ ಫೆ.4ರಂದು ವಾಟ್ಸ್ಆ್ಯಪ್ ಕರೆ ಮಾಡಿರುವ ವರ್ತಿಕಾ, ‘ನನ್ನ ವರ್ಗಾವಣೆ ವಿಚಾರ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿದೆ (ಸಿಎಟಿ). ಪ್ರಮುಖ ಕಡತಗಳನ್ನು ಈಗಿನ ಅಧಿಕಾರಿಗೆ ನೀಡಬಾರದು. ಹಾಗೇನಾದರೂ ಮಾಡಿದರೆ, ಸಿಎಟಿಯಲ್ಲಿ ತಮ್ಮನ್ನೂ ಪ್ರತಿವಾದಿಯನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿರುವುದು ವಿಡಿಯೊದಲ್ಲಿದೆ.
ಪೂರಕವಾಗಿ ಬಸವರಾಜ್ ಅವರು ವರ್ತಿಕಾ ಕಟಿಯಾರ್ ಅವರಿಗೆ ಪತ್ರ ಬರೆದಿದ್ದು, ‘ನಿಮ್ಮ ನಿರ್ದೇಶನಗಳು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶ ಹೊಂದಿವೆ. ಮುಂದೆ ಯಾವುದೇ ರೀತಿಯ ಕರೆಗಳು, ಪತ್ರಗಳು, ಯಾರಿಂದಲಾದರೂ ಮೌಖಿಕವಾಗಿ ಸೂಚಿಸುವ ರೀತಿಯಲ್ಲಿ ತಿಳಿ ಹೇಳುವುದು ಬೇಡ’ ಎಂದು ಕೋರಿದ್ದಾರೆ.
ಜನವರಿ 1ರ ಗಲಭೆ ಪ್ರಕರಣದ ಬಳಿಕ ಬಳ್ಳಾರಿಯ ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದ್ದ ರಾಜ್ಯ ಸರ್ಕಾರ ವಲಯ ಡಿಐಜಿಪಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಜ. 7ರಂದು ವರ್ಗಾವಣೆ ಮಾಡಿತ್ತು. ವರ್ಗಾವಣೆ ಪ್ರಶ್ನಿಸಿ ಸಿಎಟಿಗೆ ಅವರು ಮೇಲ್ಮನವಿ ಹೋಗಿದ್ದಾರೆ.