Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹದಿನಾರು ಸೆಟಿಲೈಟ್ಗಳನ್ನು ಹೊತ್ತ ಪಿಎಸ್ಎಲ್ವಿ ರಾಕೆಟ್ ಉಡಾವಣೆ ವಿಫಲವಾಗಿದೆ. ಇಸ್ರೋದಿಂದ ಉಡಾವಣೆಗೊಂಡ ಪಿಎಸ್ಎಲ್ವಿ-ಸಿ62 ರಾಕೆಟ್ ತಾಂತ್ರಿಕ ವೈಫಲ್ಯ ಕಂಡು, ಗುರಿ ತಪ್ಪಿದೆ. ಇದರೊಂದಿಗೆ, ರಾಕೆಟ್ ಜೊತೆಗೆ ಅದರಲ್ಲಿದ್ದ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್-ಎನ್1 ಸೇರಿದಂತೆ 16 ಸೆಟಿಲೈಟ್ಗಳೂ ನಾಶವಾಗಲಿವೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ನಲ್ಲಿ ಬೆಳಗ್ಗೆ 10:18ಕ್ಕೆ ಈ ರಾಕೆಟ್ ಉಡಾವಣೆ ಆಗಿತ್ತು. ಇಒಎಸ್-ಎನ್1 ಸೇರಿದಂತೆ 15 ಸೆಟಿಲೈಟ್ಗಳನ್ನು ಸೂರ್ಯ ಸಂಬದ್ಧ ಕಕ್ಷೆಗೆ
ತಲುಪಿಸುವ ಮಿಷನ್ ಇತ್ತು. ಕೆಐಡಿ ಎನ್ನುವ ಮತ್ತೊಂದು ಕ್ಯಾಪ್ಸೂಲ್ ಅನ್ನು ಭೂಮಿಗೆ ವಾಪಸ್ ತರುವ ಯೋಜನೆ ಇತ್ತು.
ಕೆಐಡಿ ಅಥವಾ ಕೆಸ್ಟ್ರೆಲ್ ಇನಿಶಿಯಲ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ಅನ್ನು ಸ್ಪೇನ್ ದೇಶದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಇದು 25 ಕಿಲೋ ಕ್ಯಾಪ್ಸೂಲ್ ಆಗಿದ್ದು, ಭೂಮಿಗೆ ಮರಳಿ ಬರುವುದಕ್ಕೆಂದೇ ರೂಪಿಸಿದಂತಾಗಿತ್ತು. ಇನ್ನು, ಈ ಮಿಷನ್ನ ಪ್ರಮುಖ ಉಪಗ್ರಹವಾದ ಇಒಎಸ್-ಎನ್1 ಅನ್ನು ಬ್ರಿಟನ್ ಮತ್ತು ಥಾಯ್ಲೆಂಡ್ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದವು. ಇವುಗಳೂ ಸೇರಿ ಒಟ್ಟು 16 ಸೆಟಿಲೈಟ್ಗಳು ಕಳೆದುಹೋದಂತಾಗಿದೆ.
ಸೆಟಿಲೈಟ್ ಉಡಾವಣೆ ವೇಳೆ ರಾಕೆಟ್ ವೈಫಲ್ಯವಾಗಿ, ಅದರಲ್ಲಿದ್ದ ಸೆಟಿಲೈಟ್ಗಳು ನಾಶಗೊಂಡರೆ ಅದಕ್ಕೆ ಹೊಣೆ ಯಾರೆಂದು ಇರುವುದಿಲ್ಲ. ಬಸ್ ಅಪಘಾತವಾಗಿ ಪ್ರಯಾಣಿಕರು ಸಾವನ್ನಪ್ಪಿದರೆ ಬಸ್ ಮಾಲೀಕರು ಪರಿಹಾರ ಕೊಡಬೇಕೆಂದಿಲ್ಲ. ಹಾಗೆಯೇ, ರಾಕೆಟ್ ವಿಫಲವಾಗಿ ಸೆಟಿಲೈಟ್ ನಾಶವಾದರೆ, ಅದಕ್ಕೆ ರಾಕೆಟ್ ಉಡಾಯಿಸಿದ ಅಥವಾ ಅದನ್ನು ನಿರ್ಮಿಸಿದ ಇಸ್ರೋ ಹೊಣೆಯಾಗುವುದಿಲ್ಲ.
ಸೆಟಿಲೈಟ್ ತಯಾರಿಸಿದವರು ಅದಕ್ಕೆ ಇನ್ಷೂರೆನ್ಸ್ ಮಾಡಿಸುವ ಅವಕಾಶ ಇರುತ್ತದೆ. ಹಾಗೆ ಇನ್ಷೂರೆನ್ಸ್ ಮಾಡಿಸಿದ್ದರೆ ಒಂದಷ್ಟು ಪರಿಹಾರ ಪಡೆಯಬಹುದು. ಬ್ರೆಜಿಲ್, ನೇಪಾಳ ಮೊದಲಾದ ಇತರ ಕೆಲ ದೇಶಗಳ ಸೆಟಿಲೈಟ್ಗಳೂ ಈ ಮಿಷನ್ನಲ್ಲಿ ಇದ್ದವು. ಆಯಾ ಕಂಪನಿಗಳು ವಿಮೆ ಮಾಡಿಸಿರುವ ಸಾಧ್ಯತೆ ಇರುತ್ತದೆ. ಇಸ್ರೋದಿಂದಾಗಲೀ, ಅಥವಾ ಸರ್ಕಾರದಿಂದಲಾಗಲೀ ಆ ಸೆಟಿಲೈಟ್ ತಯಾರಕರಿಗೆ ಪರಿಹಾರ ಕೊಡಲಾಗುವುದಿಲ್ಲ.
ಇಸ್ರೋ ಇಲ್ಲಿಯವರೆಗೆ 64 ಬಾರಿ ಪಿಎಸ್ಎಲ್ವಿ ರಾಕೆಟ್ ಅನ್ನು ಆಗಸಕ್ಕೆ ಕಳುಹಿಸಿದೆ. ಇವತ್ತಿನದೂ ಸೇರಿ ಐದು ಬಾರಿ ವೈಫಲ್ಯವಾಗಿದೆ. 2025ರಲ್ಲೂ ಪಿಎಸ್ಎಲ್ವಿ ಮಿಷನ್ ಫೇಲ್ಯೂರ್ ಆಗಿತ್ತು. ಕಳೆದ ಒಂದು ವರ್ಷದಲ್ಲಿ ಸತತ ಎರಡು ಬಾರಿ ಪಿಎಸ್ಎಲ್ವಿ ವೈಫಲ್ಯ ಕಂಡಿದೆ. ಆದರೆ, 64 ಮಿಷನ್ನಲ್ಲಿ 5 ವೈಫಲ್ಯ ಎಂಬುದು ಕಳಪೆ ಸಾಧನೆಯಲ್ಲ. ಇಲಾನ್ ಮಸ್ಕ್ ಅವರ ರಾಕೆಟ್ ಮಿಷನ್ಗಳೂ ಕೂಡ ಬಾರಿ ಬಾರಿ ವಿಫಲವಾಗಿರುವುದುಂಟು.
ರಾಕೆಟ್ ಉಡಾವಣೆ ವಿಫಲವಾದಾಗ ಅದರಲ್ಲಿದ್ದ ಸೆಟಿಲೈಟ್ಗಳು ಹೆಚ್ಚಿನವು ಭೂಮಿ ವಾತಾವರಣಕ್ಕೆ ವೇಗವಾಗಿ ಬರುವಾಗ ಸುಟ್ಟು ಹೋಗಬಹುದು. ಕೆಲವು ಆಗಸದಲ್ಲಿ ಕೆಲ ಕಾಲ ಸ್ಪೇಸ್ ತ್ಯಾಜ್ಯಗಳಾಗಿ ಉಳಿಯಬಹುದು. ಇನ್ನು ರಾಕೆಟ್ ಅನ್ನು ಸಮುದ್ರದ ಮೇಲೆ ಉಡಾವಣೆ ಮಾಡುವುದರಿಂದ ಅದು ಸಮುದ್ರಕ್ಕೆ ಉದುರಿ ಬೀಳುತ್ತದೆ.
90 ವರ್ಷದ ವೃದ್ಧೆ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ; ಬೀದಿಗಿಳಿದ ರೈತರು