Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕೊಲ್ಲೂರು: ಭಾರತದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ‘ಸ್ಕ್ಯಾನ್ಜೆಟ್’ ಹೆಸರಿನ ಹೊಸದೊಂದು ವಿಮಾನ ಶೀಘ್ರವೇ ಬರಲಿದ್ದು, ವಿಮಾನಯಾನಿಗಳಿಗೆ ಹೊಸ ವರುಷಕ್ಕೆ ಸಿಹಿಸುದ್ದಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಕಂದಾವರದ, ಮೈಸೂರಿನಲ್ಲಿ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳ ತಯಾರಿಕೆ ಮತ್ತು ಸರಬರಾಜು ಮಾಡುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಯಾದ ಸ್ಕ್ಯಾನ್ರೇ ಸಂಸ್ಥಾಪಕ ಕಂದಾವರದ ತಲೇಕಳ ಕಿಂಞಣ್ಣ ಆಳ್ವರ ಪುತ್ರ ವಿಶ್ವಪ್ರಸಾದ್ ಆಳ್ವ ಅವರ ಬಹುಕಾಲದ ಕನಸು ಸಾಕಾರಗೊಳ್ಳುವ ಶುಭಯೋಗ ಸಮೀಪಿಸುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆ ಪಡುವ ಸಂಗತಿಯಾಗಿದೆ.
ಏಪ್ರಿಲ್ನಲ್ಲಿ 6 ವಿಮಾನಗಳು ಟೇಕಾಫ್
‘ಸ್ಕ್ಯಾನ್ಜೆಟ್’ ವಿಮಾನಗಳು ಮೈಸೂರು ಕೇಂದ್ರೀಕೃತವಾಗಿ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಯೋಜನೆ ರೂಪಿಸಿರುವ ‘ಸ್ಕ್ಯಾನ್ಜೆಟ್’ ಆರಂಭದಲ್ಲಿ ಡೊಮೆಸ್ಟಿಕ್ ವಿಮಾನಗಳ ಹಾರಾಟಕ್ಕಷ್ಟೇ ಒತ್ತು ನೀಡಲಿದೆ. ಆರಂಭದಲ್ಲಿ ಆರು ವಿಮಾನಗಳನ್ನು ಸಿದ್ಧಗೊಳಿಸಿ ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ನೆರೆ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೂಪುರೇಷೆ ಸಿದ್ಧಪಡಿಸಲಾಗಿದೆ.
ಯೋಜನೆಯ ರೂಪುರೇಷೆ ಪ್ರಕಾರ 2026ರ ಏಪ್ರಿಲ್ನಲ್ಲಿ’ಸ್ಕ್ಯಾನ್ಜೆಟ್’ನ ಮೂರು ವಿಮಾನಗಳು ಆಗಸದಲ್ಲಿ ಹಾರಾಡಲಿದ್ದು, ವಿಶ್ವಪ್ರಸಾದ ಆಳ್ವರಿಗೆ ತನ್ನ ನಿಲುವು ಯಶಸ್ವಿಯಾಗುವುದೆಂಬ ಆತ್ಮವಿಶ್ವಾಸವಿದೆ. ಎರಡನೇ ಹಂತದಲ್ಲಿ ಇನ್ನೂ ಮೂರು ವಿಮಾನಗಳನ್ನು ಪ್ರಾದೇಶಿಕ ಯಾನಕ್ಕೆ ಬಳಸಿಕೊಳ್ಳಲು ‘ಸ್ಕ್ಯಾನ್ಜೆಟ್’ ಕಾರ್ಯಪತ್ರ ರೂಪಿಸಿದೆ.
150 ರಿಂದ 200 ಕೋಟಿ ರೂ. ಹೂಡಿಕೆ
‘ಸ್ಕ್ಯಾನ್ಜೆಟ್’ ವಿಮಾನ ಯೋಜನೆ ಅನುಷ್ಠಾನಕ್ಕೆ 150ರಿಂದ 200 ಕೋಟಿ ರೂ. ಬಂಡವಾಳ ಹೂಡಿಕೆಗೆ ತಲೇಕಳ ವಿಶ್ವಪ್ರಸಾದ್ ಆಳ್ವರು ನಿಗದಿಪಡಿಸಿದ್ದು ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡುವ ಸದುದ್ದೇಶ ‘ಸ್ಕ್ಯಾನ್ಜೆಟ್’ ಸಂಸ್ಥೆಯದ್ದು.
ಇಲಾಖೆಯಿಂದ ಗ್ರೀನ್ಸಿಗ್ನಲ್
ನಾಗರಿಕ ವಿಮಾನಯಾನ ಸೇವಾರಂಭಕ್ಕೆ ಪೂರ್ವಭಾವಿಯಾಗಿ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪರವಾನಗಿ ಮಂಜೂರಾತಿ ಆದೇಶ ಸಿಕ್ಕಿದ ತಕ್ಷಣ ಮುಂದಿನ ಹಂತದ ರೂಪುರೇಷೆ ಬಗ್ಗೆ ಪ್ರತ್ಯೇಕ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು. ಆರಂಭದಲ್ಲಿ ಮೈಸೂರಿನಿಂದ ಆರಂಭಿಸಿ ಮಂಗಳೂರು, ಹೈದರಾಬಾದ್, ಗೋವಾ, ಕೊಚ್ಚಿ, ಚೆನ್ನೈ, ತಿರುಪತಿ ಮತ್ತು ಮುಂಬಯಿ ಮಹಾನಗರಗಳನ್ನು ಸಂಪರ್ಕಿಸಲು ಉದ್ದೇಶಿಸಲಾಗಿದೆ.
ಸ್ಕ್ಯಾನ್ ರೇ ಯಶೋಗಾಥೆ
ಮಂಗಳೂರು ಹೊರವಲಯದ ಗುರುಪುರ-ಕೈಕಂಬ ಸಮೀಪದ ಕಂದಾವರದ ವಿಶ್ವಪ್ರಸಾದ್ ಆಳ್ವ ಸಂಸ್ಥಾಪಕತ್ವದ ‘ಸ್ಕ್ಯಾನ್ ರೇ’ ಸಂಸ್ಥೆ 80ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುತ್ತಿರುವ ಬಹುರಾಷ್ಟ್ರೀಯ ಸಂಸ್ಥೆ. ಭಾರತ ಹಾಗೂ ಯುರೋಪ್ನಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದ್ದು, ಆರೋಗ್ಯ ಕ್ಷೇತ್ರಕ್ಕೆ ನಿಖರ ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ಪ್ರಮುಖ ಸಂಸ್ಥೆಯಾಗಿದೆ. 7 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸ್ಕ್ಯಾನ್ರೇ’ ಸಂಸ್ಥೆ 800ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಸರೆಯಾಗಿ 80ಕ್ಕೂ ಹೆಚ್ಚು ದೇಶಗಳಿಗೆ 50ಕ್ಕೂ ಹೆಚ್ಚು ವೈದ್ಯಕೀಯ ಸಾಧನ-ಉಪಕರಣಗಳನ್ನು ಪೂರೈಕೆ ಮಾಡುತ್ತಿರುವ ವಿಶ್ವದ ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಸ್ಥಾನಮಾನ ಹೊಂದಿರುವ ಆರೋಗ್ಯ ಸಾಧನ ತಯಾರಿಕಾ ಸಂಸ್ಥೆ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿರುವುದು ಮಹತ್ವದ ನಿರ್ಧಾರವಾಗಿದೆ.
ಸ್ಕ್ಯಾನ್ಜೆಟ್’ ವಿಮಾನಯಾನಕ್ಕೆ ಮೈಸೂರನ್ನು ಕೇಂದ್ರವಾಗಿ ನಿಗದಿಗೊಳಿಸಿ ಯೋಜನೆ ರೂಪಿಸಲಾಗಿದ್ದು, ಮಧ್ಯಮ ವರ್ಗದವರನ್ನು ಗಮನದಲ್ಲಿರಿಸಿ ಸಮಯದ ಉಳಿತಾಯ, ವಾಣಿಜ್ಯ ವ್ಯವಹಾರ, ಪ್ರವಾಸಿ ಕೇಂದ್ರ ಹಾಗೂ ಪ್ರಾದೇಶಿಕ ಅಭಿವೃದ್ಧಿ ಪ್ರಮುಖ ಧ್ಯೇಯವಾಗಿದೆ. ಕೇಂದ್ರ ಸರಕಾರದ ನಾಗರಿಕ ವಿಮಾನಯಾನ ಇಲಾಖೆಯಿಂದ ನಿರಾಕ್ಷೇಪಣಾ ಪರವಾನಗಿ ಸಿಕ್ಕಿದ ತಕ್ಷಣ ಯೋಜನೆ ಅನುಷ್ಠಾನಗೊಳ್ಳಲಿವೆ.
ಕಳೆದ ಐದು ವರ್ಷಗಳಿಂದ ವಿಮಾನ ತಯಾರಿಕಾ ಸಂಸ್ಥೆಗಳು, ತಾಂತ್ರಿಕ ತಂತ್ರಜ್ಞರು, ನಿರ್ವಹಣಾ ಪರಿಣಿತರು ಹಾಗೂ ಬಂಡವಾಳ ಹೂಡಿಕೆದಾರರ ಜತೆ ನಿರಂತರ ಸಂವಹನದ ಬಳಿಕ ‘ಸ್ಕ್ಯಾನ್ ಜೆಟ್’ನ ರೂಪುರೇಷೆ ಸಿದ್ಧಪಡಿಸಿ ಪರವಾನಗಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ ವಿಶ್ವಪ್ರಸಾದ್ ಆಳ್ವ, ಸ್ಕ್ಯಾನ್ರೇ/ಸ್ಕ್ಯಾನ್ಜೆಟ್ ಸಂಸ್ಥೆಗಳ ಸಂಸ್ಥಾಪಕರು.