Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ರಾಜಕಾರಣ ರಂಗೇರಿದೆ. ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕಳೆದ ಕೆಲ ದಿನಗಳಿಂದ ಜಟಾಪಟಿಗಳು ನಡೆಯುತ್ತಿವೆ.
ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ನಾಯಕರು ಭೇಟಿಯಾಗಿ ಇದೇ ವಿಚಾರ ಚರ್ಚಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಬಳಿ ಸ್ಪಷ್ಟತೆ ಬಯಸಿದ್ದ ಡಿಕೆ ಶಿವಕುಮಾರ್ ಸೋಮವಾರ ತಡ ರಾತ್ರಿ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿಯಾಗಲು ಮುಂದಾಗಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಿರುವ ವೇಣುಗೋಪಾಲ್ ಭೇಟಿಯಾಗಿ ಕ್ಲಾರಿಟಿ ಪಡೆಯಲು ಹಾಗೂ ತಮ್ಮ ಸ್ಪಷ್ಟ ನಿಲುವನ್ನು ಹೈಕಮಾಂಡ್ಗೆ ತಿಳಿಸಲು ಮುಂದಾಗಿದ್ದಾರೆ.
ವಿಮಾನ ನಿಲ್ದಾಣದಲ್ಲೇ ವೇಣುಗೋಪಾಲ್ ಭೇಟಿ?
ದೆಹಲಿಯಿಂದ ಬೆಂಗಳೂರಿಗೆ ರಾತ್ರಿ 11ರ ಸುಮಾರಿಗೆ ಕೆಂಪೇಗೌಡ ಏರ್ಪೋರ್ಟ್ಗೆ ಆಗಮಿಸಿದ ಕೆಸಿ ವೇಣುಗೋಪಾಲ್ ಅವರನ್ನು ಏರ್ಪೋರ್ಟ್ನಲ್ಲೇ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ವೇಣುಗೋಪಾಲ್ ಏರ್ಪೋರ್ಟ್ನಿಂದ ತಾಜ್ ಹೊಟೇಲ್ಗೆ ಆಗಮಿಸಿದ್ದು, ಮಂಗಳವಾರ ಬೆಳಗ್ಗೆ 7 ಗಂಟೆಗೆ ಕೊಚ್ಚಿಗೆ ಪ್ರಯಾಣ ಬೆಳೆಸಲಿದ್ದಾರೆ.
ಪ್ರತ್ಯೇಕವಾಗಿ ಮಾತನಾಡಲು ಕೆಸಿ ವೇಣುಗೋಪಾಲ್ಗೆ ಸಮಯವಿಲ್ಲ. ಇದೇ ಕಾರಣದಿಂದ ವಿಮಾನ ನಿಲ್ದಾಣಕ್ಕೆ ತೆರಳಿ ಕೆಸಿ ವೇಣುಗೋಪಾಲ್ ಬರಮಾಡಿಕೊಂಡು ಮಾತುಕತೆ ನಡೆಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.
ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಪಷ್ಟವಾಗಿ ತಮ್ಮ ನಿರ್ಧಾರವನ್ನು ಡಿಕೆ ಸಹೋದರರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಕೆ.ಸಿ.ವೇಣುಗೋಪಾಲ್ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಈ ಮಧ್ಯೆ, ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಲು ದೆಹಲಿಗೆ ತೆರಳಿರುವ ಶಾಸಕರಾದ ಬಾಲಕೃಷ್ಣ, ಬಸವರಾಜ್ ಶಿವಗಂಗಾ, ಮಹೇಂದ್ರ ತಮ್ಮಣ್ಣನವರ್, ಬಾಬಾ ಸಾಹೇಬ್ ಪಾಟೀಲ್, ಉದಯ್ ಕದಲೂರು, ಇಕ್ಬಾಲ್ ಹುಸೇನ್, ಶಾಸಕಿ ನಯನ ಮೋಟಮ್ಮ ವರಿಷ್ಠರನ್ನು ಭೇಟಿಯಾಗಲು ಸಜ್ಜಾಗಿದ್ದಾರೆ.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಸದಾವಶಿವನಗರದ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸುಮಾರು 1 ಗಂಟೆ ಕಾಲ ಮಾತುಕತೆ ನಡೆದಿದೆ.
ಈ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿರುವ ಮಾಹಿತಿಯೂ ಬಯಲಾಗಿತ್ತು. ಪಕ್ಷದ ಚೌಕಟ್ಟಿನೊಳಗೆ ಮಾತನಾಡುವುದು ಬಿಟ್ಟು, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನಗಳು ಉತ್ತಮವಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.
Richest MLA DK ಅತಿ ಶ್ರೀಮಂತ ಶಾಸಕ ಖ್ಯಾತಿಯ ಡಿಸಿಎಂ ಡಿಕೆ ಖಜಾನೆ ತೂಕ ಎಷ್ಟು?