Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
2015 ರಿಂದ 2023 ರ ನಡುವೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿಗಳು 60 ಕೋಟಿ ರೂಪಾಯಿ ವಂಚನೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ದೀಪಕ್ ಕೊಠಾರಿ ಅವರು ಪ್ರಕರಣ ದಾಖಲಿಸಿದ್ದಾರೆ.
ರಾಜ್ ಕುಂದ್ರಾ ಅಂತೂ ನೀಲಿ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣದಲ್ಲಿ ಜೈಲು ಪಾಲು ಸಹ ಆಗಿದ್ದಾರೆ. ಇದೀಗ ಮತ್ತೆ ಈ ಇಬ್ಬರ ಮೇಲೆ 60 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಪತಿಯ ವಿರುದ್ಧವೇ ಸಾಕ್ಷಿ ಹೇಳುವಂತೆ ಸ್ವತಃ ಹೈಕೋರ್ಟ್ ಪರೋಕ್ಷ ಒತ್ತಡ ಹೇರಿದೆ.
ಶಿಲ್ಪಾ ಶೆಟ್ಟಿ, ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವ್ಯವಹಾರದ ಮಾತುಕತೆಗಾಗಿ ತಾನು ಹಾಗೂ ತನ್ನ ಪುತ್ರ ವಿದೇಶಕ್ಕೆ ತೆರಳಬೇಕಾಗಿದ್ದು, ನಮ್ಮ ವಿರುದ್ಧ ಇರುವ ಲುಕೌಟ್ ನೊಟೀಸ್ ಅನ್ನು ರದ್ದು ಮಾಡಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬೇಕು ಎಂದು ಶಿಲ್ಪಾ ಹೇಳಿದ್ದರು. ಅಲ್ಲದೆ, ಪ್ರವಾಸದ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು. ಅಲ್ಲದೆ ರಾಜ್ ಕುಂದ್ರಾ ತಮ್ಮ ಪುತ್ರಿ ಮತ್ತು ತಾಯಿಯೊಡನೆ ಮುಂಬೈನಲ್ಲಿಯೇ ಇರುವುದಾಗಿಯೂ ನ್ಯಾಯಾಲಯಕ್ಕೆ ತಿಳಿಸಿದ್ದರು.
ಅಲ್ಲದೆ, 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲವೆಂದು, ತಮಗೆ ಆ ಪ್ರಕರಣದೊಂದಿಗೆ ಸಂಬಂಧ ಸಹ ಇಲ್ಲವೆಂದು ಶಿಲ್ಪಾ ಶೆಟ್ಟಿ ಹೇಳಿದ್ದರು. ಹಾಗೂ 60 ಕೋಟಿ ಪ್ರಕರಣದಲ್ಲಿ ಆರೋಪ ಇರುವುದು ರಾಜ್ ಕುಂದ್ರಾ ಮೇಲೆ, ಶಿಲ್ಪಾ ನೇರ ಆರೋಪಿ ಅಲ್ಲ. ಅವರ ವಿರುದ್ಧ ಬೇರೆ ಯಾವುದೂ ಪ್ರಕರಣ ಇಲ್ಲವೆಂದು ಶಿಲ್ಪಾ ಪರ ವಕೀಲರು ವಾದಿಸಿದರು. ಶಿಲ್ಪಾ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಹಾಗಿದ್ದರೆ ಪತಿಯ ವಿರುದ್ಧ ನೀವೇಕೆ (ಶಿಲ್ಪಾ ಶೆಟ್ಟಿ) ಸಾಕ್ಷಿ ಹೇಳಬಾರದು ಎಂದು ಪ್ರಶ್ನೆ ಮಾಡಿದರು. ಶಿಲ್ಪಾ ಪರ ವಕೀಲರು, ನ್ಯಾಯಮೂರ್ತಿಗಳ ಈ ಹೇಳಿಕೆಯನ್ನು ಖಂಡಿಸಿದರು.