newsics.com
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.
ಈ ನಡುವೆ ಇಂದು ಪ್ರಜ್ವಲ್ ಹುಟ್ಟುಹಬ್ಬವಾಗಿದ್ದು, ಅಪರಾಧಿ ಅಂತ ಘೋಷಣೆಯಾದ ಬಳಿಕ ಇದೇ ಮೊದಲ ಬರ್ತ್ ಡೇ ಆಗಿದೆ. ಆದರೆ ಈ ಹಿಂದೆಲ್ಲಾ ಸಂಭ್ರಮ, ಸಂತಸದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪ್ರಜ್ವಲ್ ರೇವಣ್ಣ, ಇದೀಗ ಜೈಲು ಹಕ್ಕಿಯಾಗಿದ್ದಾನೆ. ಹೀಗಾಗಿ ಪ್ರಜ್ವಲ್ ರೇವಣ್ಣ ನಿವಾಸ ಬಣಗುಡುತ್ತಿದೆ.
ಇತ್ತ ಹಾಸನದಲ್ಲಿರುವ ಪ್ರಜ್ವಲ್ ಅಧಿಕೃತ ನಿವಾಸ ಪಾಳುಬಿದ್ದ ಬಂಗಲೆಯಂತಾಗಿದೆ. ಪ್ರತೀ ವರ್ಷ ಪ್ರಜ್ವಲ್ ಜನ್ಮದಿನದ ಸಂದರ್ಭದಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಪ್ರಜ್ವಲ್ ಅಭಿಮಾನಿಗಳು ಅದೇ ಮನೆಯ ಬಳಿಯೇ ಬಂದು ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದ್ರೆ, ತನ್ನ 35ನೇ ಜನ್ಮದಿನದ ಸಂದರ್ಭದಲ್ಲಿ ಪ್ರಜ್ವಲ್ಗೆ ದೋಷಿ ಎಂದು ಕೋರ್ಟ್ ತೀರ್ಪು ನೀಡಿರುವುದರಿಂದ ಈ ಜನ್ಮದಿನ ಪ್ರಜ್ವಲ್ಗೆ ತನ್ನ ಜೀವನದ ಕೆಟ್ಟ ಜನ್ಮದಿನಾಚರಣೆ ಎನಿಸಿಕೊಳ್ಳಲಿದೆ.
ಅಂದಹಾಗೆ, ಪ್ರಜ್ವಲ್ ವಾಸಿಸುತ್ತಿದ್ದ ಬಂಗಲೆಯನ್ನು ಮಾಜಿ ಪ್ರಧಾನಿಗಳ ವಿಶ್ರಾಂತಿ ಗೃಹ ಎಂದು ಪಿಡಬ್ಲ್ಯೂಡಿ ಇಲಾಖೆ ನಿರ್ಮಿಸಿಕೊಟ್ಟಿತ್ತು. ದೇವೇಗೌಡರ ಬಳಿಕ ಪ್ರಜ್ವಲ್ ಈ ನಿವಾಸದಲ್ಲಿ ವಾಸಿಸುತ್ತಿದ್ದರು. ಆದ್ರೆ, ಪ್ರಜ್ವಲ್ ಸಂಸದರಾಗಿದ್ದ ಸಂದರ್ಭದಲ್ಲಿ ಹಾಗೂ ಅದಾದ ಬಳಿಕ ಆತ ನಡೆಸಿದ ಬಹುತೇಕ ಅತ್ಯಾಚಾರ ಪ್ರಕರಣಗಳಿಗೂ ಅದೇ ಬಂಗಲೆ ಸಾಕ್ಷಿಯಾಗಿತ್ತು. ಮಾತ್ರವಲ್ಲ, ಅದೇ ಮನೆಯಲ್ಲಿ ಜೆಡಿಎಸ್ನ ರಾಜಕೀಯ ಚಟುವಟಿಕೆಗಳಿಗೂ ಸಾಕ್ಷಿಯಾಗಿತ್ತು. ಈಗ ಅದೇ ಬಂಗಲೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಪಾಳುಬಿದ್ದ ಬಂಗಲೆಯಂತಾಗಿದೆ.