newsics.com
ಮಧ್ಯಪ್ರದೇಶದಲ್ಲಿರುವ ಮಹಾಲಕ್ಷ್ಮೀ ದೇವಾಲಯದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ.
ಮಧ್ಯಪ್ರದೇಶದಲ್ಲಿರುವ ರತ್ನಗಿರಿ; ರತ್ಲಂನಲ್ಲಿರುವ ಈ ಮಹಾಲಕ್ಷ್ಮೀ ದೇವಾಲಯವು ಅತ್ಯಂತ ಸಂಪದ್ಭರಿತವಾಗಿದ್ದು, ವರ್ಷಪೂರ್ತಿ ಇಲ್ಲಿಗೆ ಚಿನ್ನ ಹಾಗೂ ಬೆಳ್ಳಿಯ ನಗ-ನಾಣ್ಯಗಳು ದೇಣಿಗೆಯ ರೂಪದಲ್ಲಿ ಬಂದು ಸೇರುತ್ತವೆ. ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ನೀಡುವ ದೇಶದ ಏಕೈಕ ದೇವಾಲಯವೆಂದರೆ ರತ್ಲಂನ ಈ ಮಹಾಲಕ್ಷ್ಮೀ ದೇವಾಲಯವಾಗಿದೆ.
ಮಹಾಲಕ್ಷ್ಮೀ ಎಂದರೆ ಸಂಪತ್ತಿನ ದೇವತೆ. ಇದಕ್ಕೆ ಅನ್ವರ್ಥವೆಂಬಂತೆ ಇಲ್ಲಿ ಮಹಾಲಕ್ಷ್ಮೀಯನ್ನು ಸಾವಿರಾರು ಕೋಟಿಯ ನಗದು ಹಾಗೂ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಈ ಅಲಂಕಾರವೇ ಚಿನ್ನ ಹಾಗೂ ಬೆಳ್ಳಿಯ ಬೆಟ್ಟದಂತೆ ಗೋಚರಿಸುತ್ತದೆ. ದೇಣಿಗೆಯ ರೂಪದಲ್ಲಿ ಬರುವ ಚಿನ್ನ ಹಾಗೂ ಬೆಳ್ಳಿಯನ್ನು ಇಲ್ಲಿಗೆ ಬರುವ ಭಕ್ತರಿಗೆ ದೀಪಾವಳಿಯ ಮೂರು ದಿನ ನೀಡಲಾಗುತ್ತದೆ. ಇಲ್ಲಿ ಸಿಗುವಂತಹ ಬೆಳ್ಳಿ ಬಂಗಾರವನ್ನು ಮನೆಯಲ್ಲಿ ತಂದಿಟ್ಟುಕೊಂಡು ಪೂಜಿಸಿದರೆ ಲಕ್ಷ್ಮೀ ನೆಲೆಸುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗೇನೇ ಇಲ್ಲಿ ಪ್ರಸಾದ ರೂಪವಾಗಿ ನೀಡುವ ಚಿನ್ನ ಬೆಳ್ಳಿಯನ್ನು ಇತರ ಉಪಯೋಗಕ್ಕಾಗಿ ಬಳಸಬಾರದು.
ಹೂವಿನ ಬದಲು ಚಿನ್ನಾಭರಣ:
ಈ ಮಹಾಲಕ್ಷ್ಮೀ ದೇವಾಲಯದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಧನ ತ್ರಯೋದಶಿಯಿಂದ ಆರಂಭವಾಗುವ ಈ ಉತ್ಸವವು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ವಿಶೇಷವೆಂದರೆ ಈ ಐದೂ ದಿನಗಳು ದೇವಸ್ಥಾನವನ್ನು ಹೂವಿನಿಂದ ಅಲಂಕರಿಸುವುದಿಲ್ಲ, ಬದಲಾಗಿ ನಗದು ಹಾಗೂ ಆಭರಣಗಳಿಂದ ಸಿಂಗರಿಸಲಾಗುತ್ತದೆ.
ದೀಪೋತ್ಸವದಂದು ಈ ದೇವಸ್ಥಾನವು ಕುಬೇರನ ದೇವಸ್ಥಾನವಾಗಿ ಕಂಗೊಳಿಸುತ್ತದೆ. ಇಲ್ಲಿಗೆ ಬರುವ ಭಕ್ತರು ಆಭರಣ ಹಾಗೂ ನಗದನ್ನು ದೇವಿಗೆ ಅರ್ಪಣೆಯಾಗಿ ನೀಡುತ್ತಾರೆ. ಅದರಲ್ಲೂ ಮಹಿಳೆಯರು ಇಲ್ಲಿಗೆ ಚಿನ್ನವನ್ನು ನೀಡುವುದೇ ಹೆಚ್ಚು. ಇಲ್ಲಿಗೆ ಬರುವ ಭಕ್ತರು ಬರಿಗೈಯಲ್ಲಿ ಎಂದಿಗೂ ಮರಳುವುದಿಲ್ಲ, ಪ್ರಸಾದ ರೂಪದ ಯಾವುದೇ ವಸ್ತುವನ್ನು ಪಡೆದುಕೊಂಡೇ ತೆರಳುತ್ತಾರೆ.
ಮುಖ್ಯವಾಗಿ ದೀಪಾವಳಿಯಂದು ಭೇಟಿ ನೀಡುವ ವಿವಾಹಿತ ಮಹಿಳೆಯರಿಗೆ ಮಾತ್ರ ಚಿನ್ನ ಮತ್ತು ಬೆಳ್ಳಿಯ ಪ್ರಸಾದವನ್ನು ನೀಡಲಾಗುತ್ತದೆ.
ವರ್ಷದಲ್ಲಿ ಐದು ದಿನಗಳ ಕಾಲ ನಡಯುವ ಉತ್ಸವದಲ್ಲಿ ಹೊಸದಾಗಿ ಆಭರಣಗಳನ್ನು ಕೊಂಡವರೂ ಈ ದೇವಸ್ಥಾನಕ್ಕೆ ಬಂದು ಹೊಸ ಆಭರಣವನ್ನು ಧನತ್ರಯೋದಶಿಯಂದು ಪೂಜಾರಿಗೆ ನೀಡಿ, ಗರ್ಭಗುಡಿಯಲ್ಲೇ ಇಟ್ಟು ಮೂರು ದಿನ ಕಳೆದ ನಂತರ ಮತ್ತೆ ಪಡೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದೆಂದು ಹೇಳಲಾಗುತ್ತದೆ. ಈ ಸಂಪ್ರದಾಯವು ದಶಕಗಳ ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿದೆ.
ಹಿಂದೆ ಈ ಪ್ರದೇಶವನ್ನು ಆಳುತ್ತಿದ್ದ ರಾಜರುಗಳು ರಾಜ್ಯದ ಸಂಪತ್ತು ಅಭಿವೃದ್ಧಿಯಾಗಲೆಂದು ಈ ದೇವಾಲಯಕ್ಕೆ ಹಣವನ್ನು ನೀಡುತ್ತಿದ್ದರಂತೆ, ಈ ಪದ್ಧತಿ ಮುಂದುವರಿದು ಇದೀಗ ಭಕ್ತರು ಇಲ್ಲಿಗೆ ದೇಣಿಗೆಯ ರೂಪದಲ್ಲಿ ನಗದು ಹಾಗೂ ಆಭರಣವನ್ನು ಇಲ್ಲಿಗೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಲಕ್ಷ್ಮೀಯು ಸದಾ ಕಾಲ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ಸಂಪತ್ತು, ಐಶ್ವರ್ಯ ಇನ್ನಷ್ಟು ವೃದ್ಧಿಯಾಗುವುದು ಎನ್ನುವುದು ಜನರ ನಂಬಿಕೆ.
ಈ ದೇವಾಲಯದ ಇನ್ನೊಂದು ಮುಖ್ಯ ಉದ್ದೇಶವೆಂದರೆ, ಬಡವರಿಗೆ ಸಹಾಯ ಮಾಡುವುದು. ಹಾಗಾಗಿ ಬಡವರಿಗೆ ಇಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ನೀಡಲಾಗುತ್ತದೆ. ಆದರೂ ಈ ಚಿನ್ನವನ್ನು ಮಾರಾಟ ಮಾಡದೇ ಪೂಜಿಸಿಕೊಂಡು ಬರುವ ಭಕ್ತರು ಅನೇಕರಿದ್ದಾರೆ.
ಗಂಡ ಹೆಂಡತಿ ಜಗಳಕ್ಕೆ ಪರಿಹಾರ ಬೇಕಾ?: ಕೌಟುಂಬಿಕ ಕಲಹ ನಿವಾರಣೆಗೆ ಈ ದೇವಸ್ಥಾನಗಳಿಗೆ ಭೇಟಿ ನೀಡಿ