newsics.com
ಬೆಂಗಳೂರು: ಪೋಷಕರ ಗಮನಕ್ಕೆ ತರದೆ ಖಾಸಗಿ ಶಾಲೆಯ ಆಡಳಿತ ಮಂಡಳಿ ಮಕ್ಕಳನ್ನು ಅನಾಥ ಮಕ್ಕಳು ಎಂದು ಸುಳ್ಳು ಹೇಳಿ ಸರ್ಕಾರಿ ಶಾಲೆಗೆ ಸೇರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ವಸಂತ ನಗರದ ಪ್ರತಿಷ್ಠಿತ ಸೇಂಟ್ ಮೇರಿಸ್ ಗರ್ಲ್ಸ್ ಹೈಸ್ಕೂಲ್ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅತ್ಯುತ್ತಮ ಅಂದರೆ ನೂರರಷ್ಟು ಫಲಿತಾಂಶಕ್ಕಾಗಿ ಸಾಧಾರಣವಾಗಿ ಓದುವ ವಿದ್ಯಾರ್ಥಿಗಳನ್ನು ಅವರ ಪೋಷಕರ ಗಮನಕ್ಕೂ ಬಾರದೆ ಅನಾಥ ಮಕ್ಕಳು ಎಂದು ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಮಾಡಿಸಿರುವ ಆರೋಪ ಶಾಲೆ ವಿರುದ್ಧ ಕೇಳಿಬಂದಿದೆ.
ಶಾಲಾ ಮಂಡಳಿ ವಿರುದ್ಧ ಮಕ್ಕಳು ಹಾಗೂ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಮಕ್ಕಳಿಗೆ ಈ ರೀತಿ ಮಾಡಲ್ಲ. ಹಿಂದೂ ಮಕ್ಕಳಿಗೆ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇವರಿಂದಾಗಿ ಮಕ್ಕಳ ಭವಿಷ್ಯ ಹಾಳಾಯ್ತು ಎಂದು ಅಳಲು ತೊಡಿಕೊಂಡಿದ್ದಾರೆ.
ಶಾಲೆಯ ಸುಮಾರು 10 ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಮಾಡಲಾಗಿದೆ. ಮಕ್ಕಳಿಗೆ ಸರ್ಕಾರಿ ಶಾಲೆ ಸಮವಸ್ತ್ರ ಹಾಕಿ ಫೋಟೋ ಸಹ ತೆಗೆದುಕೊಂಡಿದ್ದಾರೆ. ನಂತರ ಪರೀಕ್ಷೆ ಸಮಯದಲ್ಲಿ ಹಾಲ್ ಟಿಕೆಟ್ ನೀಡಿ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಸಲಾಗಿದೆ. ಪರೀಕ್ಷೆ ಬರೆದ ಮಕ್ಕಳಿಗೆ ಇಂಟರ್ನಲ್ಸ್ ಅಂಕ ಸಿಗದೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.
ಶುಲ್ಕ ಕಟ್ಟಿರುವ ಪೋಷಕರು ತಮ್ಮ ಮಕ್ಕಳನ್ನು ಸೇಂಟ್ ಮೇರಿಸ್ ಶಾಲೆಗೆ ಕಳಿಸಿದ್ದಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಇದೆ. ಈ ವಿಚಾರ ಪೋಷಕರ ಗಮನಕ್ಕೂ ಬಂದಿಲ್ಲ. ಇತ್ತ ಶಾಲೆಗೆ ಬಂದಿಲ್ಲ ಎಂದು ಸರ್ಕಾರಿ ಶಾಲೆಯಲ್ಲಿ ಇಂಟರ್ನಲ್ಸ್ ಅಂಕ ನೀಡಿರಲಿಲ್ಲ ಎಂಬುದು ಪತ್ತೆಯಾಗಿದೆ.