newsics.com
ನವದೆಹಲಿ: ಭಾರತ, ಪಾಕಿಸ್ತಾನ ನಡುವೆ ಸಶಸ್ತ್ರ ಸಂಘರ್ಷ ಮುಂದುವರಿದಿದ್ದು, ಶುಕ್ರವಾರ ಸಂಜೆ ಪಾಕಿಸ್ತಾನದಿಂದ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಡ್ರೋನ್ ದಾಳಿ ನಡೆದಿದೆ.
ಇತ್ತ ಪಾಕ್ಗೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಭಾರತೀಯ ಸೇನೆ ನೂರಕ್ಕೂ ಹೆಚ್ಚು ಪಾಕ್ ಡ್ರೋನ್ಗಳನ್ನು ಹೊಡೆದುರುಳಿಸಿದೆ.
ಜಮ್ಮು, ಶ್ರೀನಗರ, ಅವಂತಿಪೋರಾ, ಸಾಂಬಾ ಮತ್ತು ಪಠಾಣ್ಕೋಟ್ಗಳಲ್ಲಿ ಪಾಕ್ ಶುಕ್ರವಾರ ಸಂಜೆ ಡ್ರೋನ್ ದಾಳಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪಠಾಣ್ಕೋಟ್ನಲ್ಲಿ ಬ್ಲಾಕೌಟ್ ಸಮಯದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಚಂಡೀಗಢ, ರೂಪನಗರ, ಪಠಾಣ್ಕೋಟ್ ಮತ್ತು ಬ್ಲಾಕೌಟ್ ಜಾರಿಗೊಳಿಸಲಾದ ಇತರ ಜಿಲ್ಲೆಗಳಲ್ಲಿ ಸೈರನ್ಗಳು ಕೇಳಿಬರುತ್ತಿವೆ ಎಂದು ತಿಳಿದುಬಂದಿದೆ.
ಪೂಂಚ್ ಸೆಕ್ಟರ್ನ ದಿಗ್ವಾರ್ ಪ್ರದೇಶದಲ್ಲಿ ಮತ್ತು ಕುಪ್ವಾರಾ ಜಿಲ್ಲೆಯ ತಂಗ್ಧರ್ ಸೆಕ್ಟರ್ನ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಶೆಲ್ ಮತ್ತು ಗುಂಡಿನ ದಾಳಿ ಪ್ರಾರಂಭವಾಗಿದೆ. ಶೆಲ್ ದಾಳಿ ಪ್ರಾರಂಭವಾದ ತಕ್ಷಣ, ಇಲ್ಲಿನ ಜನರು ಬಂಕರ್ಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಭಾರತೀಯ ಸೇನೆಯು ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಹೆಚ್ಚಿನ ಜನರನ್ನು ಈಗಾಗಲೇ ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ. ಆದರೆ ಹಿಂದೆ ಉಳಿದವರು ಬಂಕರ್ಗಳಲ್ಲಿ ರಕ್ಷಣೆ ಪಡೆದಿದ್ದಾರೆ.
ಗಡಿಯಲ್ಲಿ ಸ್ಫೋಟದ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಜಮ್ಮುನಲ್ಲಿ ಬ್ಲಾಕೌಟ್ ಜಾರಿ ಮಾಡಲಾಗಿದೆ. ರಜೌರಿಯಲ್ಲೂ ಶೆಲ್ ಸದ್ದು ಕೇಳಿಬಂದಿದ್ದರಿಂದ ಅಲ್ಲೂ ಬ್ಲಾಕೌಟ್ ಮಾಡಲಾಗಿದೆ.
ಇಲ್ಲಿ ಸ್ಫೋಟ ಮತ್ತು ಶೆಲ್ಗಳ ಭಾರೀ ಶಬ್ಧ ಕೇಳಿಬರುತ್ತಿದೆ ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗುಜರಾತ್ನ ಕಛ್, ಪಠಾಣ್ ಜಿಲ್ಲೆಗಳಲ್ಲೂ ಬ್ಲಾಕೌಟ್ ಜಾರಿಗೊಳಿಸಲಾಗಿದೆ. ಜೊತೆಗೆ ಮನೆಯಿಂದ ಹೊರಬರದಂತೆ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.