newsics.com
ಹೈದರಾಬಾದ್: ಕನ್ನಡದ ಸಿನಿಮಾ ಹಾಗೂ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಹೈದರಾಬಾದ್ನ ಓಸ್ಮಾನಿಯಾ ಆಸ್ಪತ್ರೆಯ ವೈದ್ಯರು ಪೋಸ್ಟ್ಮಾರ್ಟಮ್ ಮಾಡಿದ್ದಾರೆ.
ಈಗಾಗಲೇ ಶೋಭಿತಾ ಶಿವಣ್ಣ ಅವರ ಮೃತದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರ ಮಾಡಲಾಗಿದೆ. ಮೃತದೇಹವನ್ನು ಹಾಸನಕ್ಕೆ ತರುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಹುಟ್ಟೂರಿನಲ್ಲಿಯೇ ಆಕೆಯ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶೋಭಿತಾ ಸಾವು ಆತ್ಮಹತ್ಯೆ ಎಂದೇ ವೈದ್ಯರು ಖಚಿತಪಡಿಸಿದ್ದಾರೆ. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಭಾನುವಾರ ಶೋಭಿತಾ ಶಿವಣ್ಣ ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯ ಕೋಣೆಯಲ್ಲಿನ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಹಲವು ಸೀರಿಯಲ್ಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ, ಬ್ರಹ್ಮಗಂಟು ಸೀರಿಯಲ್ ಮೂಲಕ ಮನೆಮಾತಾಗಿದ್ದರು. ಒಂದೂವರೆ ವರ್ಷದ ಹಿಂದೆ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸುಧೀರ್ ರೆಡ್ಡಿಯನ್ನು ವಿವಾಹವಾದ ಬಳಿಕ ಹೈದರಾಬಾದ್ಗೆ ಶಿಫ್ಟ್ ಆಗಿದ್ದರು.
ಮ್ಯಾಟ್ರಿಮೋನಿಯಲ್ಲಿ ಶೋಭಿತಾ ಅವರ ಪ್ರೊಫೈಲ್ ನೋಡಿದ್ದ ಸುಧೀರ್ ರೆಡ್ಡಿ, ಕುಟುಂಬದವರನ್ನು ಒಪ್ಪಿಸಿ ಶೋಭಿತಾರನ್ನು ಮದುವೆಯಾಗಿದ್ದರು. ಆದರೆ ಈ ಮದುವೆ ಶೋಭಿತಾಗೆ ಇಷ್ಟ ಇರಲಿಲ್ಲ ಎನ್ನಲಾಗಿದೆ.
ಹೈದರಾಬಾದ್ನ ಶ್ರೀರಾಮನಗರದ ಕಾಲೋನಿಯಲ್ಲಿ ಶೋಭಿತಾ ವಾಸವಾಗಿದ್ದರು. ಮದುವೆಯಾದ ಬಳಿಕ ಸೀರಿಯಲ್ ಹಾಗೂ ಸಿನಿಮಾಗಳಿಂದ ಅವರು ದೂರವೇ ಉಳಿದಿದ್ದರು. ಹೆಚ್ಚಾಗಿ ಯಾರಲಲ ಜತೆಯೂ ಮಾತನಾಡುತ್ತಿರಲಿಲ್ಲ. ಇದು ಆಕೆಯ ಖಿನ್ನತೆಗೆ ಕಾರಣವಾಗಿತ್ತು. ಇದರಿಂದಾಗಿ ಆಕೆ ಆತ್ಮಹತ್ಯೆಯ ನಿರ್ಧಾರ ಮಾಡಿಕಿಂಡಿರಬಹುದು ಎಂದು ಶಂಕಿಸಲಾಗಿದೆ.
ಶೋಭಿತಾ ಶಿವಣ್ಣ ಅವರು ಬರೆದಿದ್ದಾರೆ ಎನ್ನಲಾದ ಸೂಸೈಡ್ ನೋಟ್ ಕೂಡ ಪತ್ತೆಯಾಗಿದೆ. ಇದನ್ನು ಗಚ್ಚಿಬೌಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಕೇವಲ ಒಂದೇ ಒಂದು ಲೈನ್ ಬರೆಯಲಾಗಿದೆ.
ಆಕೆಯ ಡೆತ್ ನೋಟ್ನಲ್ಲಿ ‘ಇಫ್ ಯು ವಾಂಟ್ ಟು ಕಮಿಟ್ ಸೂಸೈಡ್, ಯು ಕ್ಯಾನ್ ಡು ಇಟ್’ ಎಂದು ಇಂಗ್ಲೀಷ್ನಲ್ಲಿ ಬರೆಯಲಾಗಿದೆ. ಇದರರ್ಥ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು ಎನ್ನುವುದಾಗಿದೆ.
ಯಾರಿಗಾಗಿ ಅವರು ಈ ಪತ್ರ ಬರೆದಿದ್ದಾರೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಪೊಲೀಸರು ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಆಕೆಯ ಸಾವಿಗೆ ಖಿನ್ನತೆಯೇ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.