newsics.com
ಕೋಲ್ಕತ್ತಾ : ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ.
ಕಾಳಿ ಪೂಜೆ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 9, 14 ಮತ್ತು 2.5 ವರ್ಷದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಬೆಂಕಿ ಅವಘಡ ಸಂಭವಿಸಿದ ಬಗ್ಗೆ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿದವು. ಅಷ್ಟರಲ್ಲಾಗಲೇ ಬೆಂಕಿ ಕೆನ್ನಾಲಿಗೆಗೆ ಮೂವರು ಮಕ್ಕಳು ಜೀವ ತೆತ್ತಿದ್ದರು. ಬೆಂಕಿ ನಂದಿಸಿದ ಬಳಿಕ ಸಿಬ್ಬಂದಿ ಹೌರಾದ ವಿಭಾಗೀಯ ಅಗ್ನಿಶಾಮಕ ಅಧಿಕಾರಿ ರಂಜನ್ ಕುಮಾರ್ ಘೋಷ್ ಅವರು ಮೂರು ಮಕ್ಕಳ ಸುಟ್ಟ ದೇಹಗಳನ್ನು ಹೊರಕ್ಕೆ ತಂದರು. ಸದ್ಯ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ ಹೊರತಾಗಿಯೂ ಆ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಬಗ್ಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದವರು ತಮ್ಮ ಕೆಲಸವನ್ನ ಪರಿಣಾಮಕಾರಿಯಾಗಿ ಮಾಡದೇ ಇದ್ದಿದ್ದರೆ ಘಟನೆಯಲ್ಲಿ ಹೆಚ್ಚಿನ ಮನೆಗಳು ಸುಟ್ಟುಹೋಗುವ ಸಾಧ್ಯತೆಯಿತ್ತು ಎಂದು ಹೇಳಲಾಗಿದೆ.