ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಪಟ್ಟದ ಫೈಟ್ ಜೋರಾಗಿದೆ. ಸಿದ್ದರಾಮಯ್ಯ ಸಿಎಂ ಆಗಿ ಮೂರು ವರ್ಷ ಪೂರ್ಣಗೊಳಿಸುತ್ತಿರುವ ವೇಳೆಯಲ್ಲೆ ಸಿಎಂ ಸ್ಥಾನ ಹಂಚಿಕೆಗೆ ಡಿಕೆಶಿ ಬಣ ಬೇಡಿಕೆ ಇಡ್ತಿದ್ರೆ ಟಗರು ಟೀಂ ಸಿಎಂ ಬದಲಾವಣೆ ಯೇ ಇಲ್ಲ ಅನ್ನೋ ಪಟ್ಟಿಗೆ ನಿಂತಿದೆ.
ರಾಜಕಾರಣದಲ್ಲಿ ಈಗ ದಲಿತ ಮುಖ್ಯಮಂತ್ರಿ ಅಸ್ತ್ರದ ಬಿರುಗಾಳಿ ಎದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎನ್ನಲಾದ ಹೊಸ ಷರತ್ತು ಭಾರೀ ಸಂಚಲನ ಮೂಡಿಸಿದೆ. ಒಂದು ವೇಳೆ ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾದ ಸಂದರ್ಭ ಬಂದರೆ, ಮುಂದಿನ ಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಅವರನ್ನು ನೇಮಿಸಬೇಕು ಎಂಬ ಬೇಡಿಕೆಯನ್ನು ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೈಕಮಾಂಡ್ನ ದಲಿತ ಪರ ನಿಲುವನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಸಿದ್ದರಾಮಯ್ಯ, ದಲಿತ ನಾಯಕನಿಗೆ ಪಟ್ಟ ಕಟ್ಟುವ ವಾದದ ಮೂಲಕ ವಿರೋಧಿ ಬಣಕ್ಕೆ ಚೆಕ್ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ಗುಪ್ತವಾಗಿ ‘ಸೀಕ್ರೆಟ್ ಡೀಲ್’ ಒಂದು ಕುದುರಿದೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ರಾಹುಲ್ ಗಾಂಧಿ ಸೂಚಿಸಿದರೆ ತಾವು ಕುರ್ಚಿಯಿಂದ ಇಳಿಯಲು ಸಿದ್ಧ ಎಂಬ ಸಂದೇಶ ರವಾನಿಸಿರುವ ಮುಖ್ಯಮಂತ್ರಿಗಳು, ಆದರೆ ತಮ್ಮ ನಂತರ ಪರಮೇಶ್ವರ್ ಅವರನ್ನೇ ಕೂರಿಸಬೇಕು ಎಂಬ ಪಟ್ಟು ಹಿಡಿದಿರುವುದು ಕುತೂಹಲ ಮೂಡಿಸಿದೆ. ದಲಿತ ಸಿಎಂ ಆದರೆ ಮಾತ್ರ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ಹೊಸ ವಾದವನ್ನು ಹೈಕಮಾಂಡ್ ಮುಂದೆ ಮಂಡಿಸುವ ಮೂಲಕ ಸಿದ್ದರಾಮಯ್ಯ ಅವರು ಹೊಸ ರಾಜಕೀಯ ವರಸೆ ಶುರು ಮಾಡಿದ್ದಾರೆ.
ಕುರ್ಚಿ ಬಿಟ್ಟರೂ ಕಿಂಗ್ ಮೇಕರ್ ಆಗಿ ಉಳಿಯುವ ಮತ್ತು ತಮಗೆ ಬೇಕಾದವರನ್ನು ಅಧಿಕಾರದಲ್ಲಿ ಕೂರಿಸುವ ಸಿದ್ದರಾಮಯ್ಯ ಅವರ ಈ ಕಸರತ್ತು ರಾಜ್ಯ ಕಾಂಗ್ರೆಸ್ನ ಇತರ ಆಕಾಂಕ್ಷಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೈಕಮಾಂಡ್ ಕೂಡ ದಲಿತ ನಾಯಕನಿಗೆ ಅವಕಾಶ ನೀಡುವ ವಿಚಾರದಲ್ಲಿ ಮೃದು ಧೋರಣೆ ಹೊಂದಿರುವುದರಿಂದ, ಈ ದಲಿತಾಸ್ತ್ರವು ಸಿದ್ದರಾಮಯ್ಯ ಅವರ ಪಾಲಿಗೆ ದೊಡ್ಡ ಬಲವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ನ ನಾಯಕತ್ವ ಬದಲಾವಣೆಯ ಚರ್ಚೆಗಳು ಈಗ ಕೇವಲ ವೈಯಕ್ತಿಕ ಹೋರಾಟವಾಗಿ ಉಳಿಯದೆ, ಜಾತಿ ಸಮೀಕರಣದ ಹೊಸ ಆಯಾಮವನ್ನು ಪಡೆದುಕೊಂಡಿವೆ.
Today’s Horoscope ರಾಶಿ ಭವಿಷ್ಯ 27-04-2026, ಸೋಮವಾರ, ನಿಮ್ಮ ಇಂದಿನ ಗ್ರಹಗತಿ ಹೇಗಿದೆ?