ರಾಮಾಯಣ ಸಿನಿಮಾ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ಬಿಡುಗಡೆ ಆಗಲು ಸಜ್ಜಾಗುತ್ತಿದೆ. ಇವುಗಳ ಜೊತೆಗೆ ಯಶ್ ಅವರ ಅಭಿಮಾನಿಗಳಿಗೆ, ‘ಕೆಜಿಎಫ್ 3’ನದ್ದು ಚಿಂತೆಯಾಗಿದೆ. ಇದೀಗ ಸ್ವತಃ ಯಶ್ ಅವರು ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
‘ಕೆಜಿಎಫ್ 3’ ಸಿನಿಮಾ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಹಲವರಿಗೆ ಇದೆ. ಇದೀಗ ನಟ ಯಶ್ ಅವರು ‘ಕೆಜಿಎಫ್: ಚಾಪ್ಟರ್ 3’ ಸಿನಿಮಾ ಖಂಡಿತವಾಗಿಯೂ ನಡೆಯುತ್ತದೆ ಎಂದು ಭರವಸೆ ನೀಡಿದ್ದಾರೆ. ಆದರೆ ಅದು ಸನಿಹ ಭವಿಷತ್ನಲ್ಲಿ ಸಾಧ್ಯವಿಲ್ಲ ಎಂದು ಸಹ ಖಚಿತಪಡಿಸಿದ್ದಾರೆ. ಯಶ್ ಪ್ರಸ್ತುತ ತಮ್ಮ ಮುಂಬರುವ ಚಿತ್ರಗಳಾದ ‘ಟಾಕ್ಸಿಕ್’ ಮತ್ತು ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರಗಳ ಮೇಲೆ ಗಮನ ಹರಿಸುತ್ತಿದ್ದು, ‘ಕೆಜಿಎಫ್ 3’ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.
‘ಸದ್ಯಕ್ಕೆ ನಾನು ‘ಟಾಕ್ಸಿಕ್’, ‘ರಾಮಾಯಣ’ ಮತ್ತು ‘ರಾಮಾಯಣ 2’ ಸಿನಿಮಾಗಳ ಮೇಲೆ ಮಾತ್ರವೇ ಗಮನ ಹರಿಸಿದ್ದೇನೆ. ಅವುಗಳ ಹೊರತಾಗಿ ಇನ್ಯಾವುದೇ ಸಿನಿಮಾಗಳ ಬಗ್ಗೆ ನಾನು ಯೋಚಿಸುತ್ತಿಲ್ಲ. ಆದರೆ ನಾನು ಮತ್ತು ಪ್ರಶಾಂತ್ ನೀಲ್ ಹೊಸ ಸಿನಿಮಾ ಐಡಿಯಾಗಳ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇವೆ. ಯಾವುದಾದರೂ ಐಡಿಯಾ ಚೆನ್ನಾಗಿ ಅನಿಸಿದರೆ ನಾವು ‘ಕೆಜಿಫ್ 3′ ಮಾಡುತ್ತೇವೆ. ಕೇವಲ ಹಣ ಮಾಡುವ ಉದ್ದೇಶದಿಂದ ನಾವು ಈ ಸಿನಿಮಾ ಮಾಡುವುದಿಲ್ಲ. ಪ್ರೇಕ್ಷಕರು ನಮಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ, ಅವರಿಗೆ ಹೆಮ್ಮೆ ಎನಿಸುವಂತಹ ಅದ್ಭುತವಾದ ಕಥೆ ಸಿದ್ಧವಾದಾಗ ಮಾತ್ರ ನಾವು ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದಿದ್ದಾರೆ.
‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳು ಯಶ್ ಅವರನ್ನು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಮಾಡಿದ ಸಿನಿಮಾ. ಅದು ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದೊಡ್ಡ ದಾರಿಯನ್ನು ಹಾಕಿಕೊಟ್ಟ ಹಾಗೂ ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಗುರುತು ಮೂಡಿಸಿದ ಸಿನಿಮಾ ಆಗಿದೆ. ‘ಕೆಜಿಎಫ್ 2’ ಸಿನಿಮಾದ ಅಂತ್ಯದಲ್ಲಿ ಕತೆ ಮುಂದುವರೆಯುವ ಸುಳಿವನ್ನು ನೀಡಲಾಗಿತ್ತು. ಅದೇ ಕಾರಣಕ್ಕೆ ಕಳೆದ ಕೆಲ ವರ್ಷಗಳಿಂದಲೂ ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ.