newsics.com
ಇಂದು ರಾಜ್ಯಕ್ಕೆ ಆಂಧ್ರಪ್ರದೇಶ ಡಿಸಿಎಂ ಹಾಗೂ ತೆಲುಗು ಚಿತ್ರನಟ ಪವನ್ ಕಲ್ಯಾಣ್ ಭೇಟಿ ನೀಡಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ ಪವನ್ ಕಲ್ಯಾಣ್ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಿನುದ್ದಕ್ಕೂ ಕನ್ನಡ ನಾಡಿನ ಗುಣಗಾನ ಮಾಡಿದರು.
ಕುವೆಂಪು ಅವರ ಕವನದಿಂದಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್ ನನಗೆ ಕುವೆಂಪು ಅವರ ಪುಸ್ತಕಗಳ ಬಗ್ಗೆ ತುಂಬಾ ಗೌರವವಿದೆ ಎಂದು ಹೇಳಿದರು. ಅರಣ್ಯಕ್ಕೆ ಹಾಡು ಹಾಡುವ ಮುನ್ನ ನನ್ನ ಮನದು ಮುಂದೆ ನಾನು ನಿಲ್ಲುತ್ತೇನೆ ಎಂಬ ಕುವೆಂಪು ವಿರಚಿತ ಕವನವನ್ನು ಪವನ್ ಕಲ್ಯಾಣ್ ಹಾಡಿದರು.
ಕನ್ನಡದ ಪರಂಪರೆ ಸಂಸ್ಕೃತಿಯನ್ನು ಹಾಡಿ ಹೊಗಳಿದೆ ಪವನ್ ಕಲ್ಯಾಣ್, ನನಗೆ ಕನ್ನಡ ಭಾಷೆಯ ಬಗ್ಗೆ ತುಂಬಾ ಗೌರವವಿದೆ. ಈ ಒಂದು ಭೇಟಿ ನನಗೆ ಕನ್ನಡ ಕಲಿಯಲು ಪ್ರೇರಣೆ ನೀಡಿದೆ. ಮುಂದಿನ ದಿನಗಳಲ್ಲಿ ನಾನು ಕನ್ನಡ ಕಲಿಯುತ್ತೇನೆ ಎಂದು ಹೇಳಿದ್ದಾರಲ್ಲದೇ, ನಾನು ಡಿಸಿಎಂ ಎನ್ನುವುದಕ್ಕಿಂತ ಹೆಚ್ಚು ಪರಿಸರ ಸಂರಕ್ಷಣೆ ಬಗ್ಗೆ ಗಮನ ಹರಿಸುತ್ತೇನೆ. ವಸುದೈವ ಕುಟುಂಬಕಂ ಎಂಬ ಹಾಗೆ ನಾವು ನಮ್ಮ ಭೂಮಿ ತಾಯಿಯನ್ನು ರಕ್ಷಣೆ ಮಾಡಬೇಕಿದೆ. ರಕ್ತ ಚಂದನ ಸಂರಕ್ಷಣೆಗೆ ಸಂಬಂಧಿಸಿದ ಸುದ್ದಿಯನ್ನು ನಾನು ನೋಡಿದ್ದೇನೆ. 140 ಕೋಟಿ ಮೌಲ್ಯದ ರಕ್ತ ಚಂದನ ಕರ್ನಾಟಕದಲ್ಲಿ ಸಂರಕ್ಷಣೆ ಮಾಡಲಾಗಿದೆ. ಶ್ರೀಶೈಲಂ ಹಾಗೂ ತಿರುಮಲದಲ್ಲಿ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ವಿಚಾರವನ್ನು ನಾನು ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.