https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ಕೆಲಸಕ್ಕೆ ರಜೆ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಸೈಬರ್ ಸೆಂಟರ್ ಮಾಲೀಕನೋರ್ವ ಯುವತಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆಯ ವಿವರ
ಕಳೆದ ಐದು ವರ್ಷಗಳಿಂದ ಲಕ್ಷ್ಮಿ ಎಂಬ ಯುವತಿ ಕೆಂಗೇರಿಯಲ್ಲಿರುವ ಸೈಯದ್ ಎಂಬುವವರಿಗೆ ಸೇರಿದ ‘ಮುಸ್ಕಾನ್ ಟೈಮ್ಸ್’ ಸೈಬರ್ ಸೆಂಟರ್ನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಲಕ್ಷ್ಮಿ ಅವರು ಕಳೆದ ಕೆಲವು ದಿನಗಳಿಂದ ಕೆಲಸಕ್ಕೆ ಗೈರಾಗಿದ್ದರು. ಇದರಿಂದ ತೀವ್ರವಾಗಿ ಕೆರಳಿದ್ದ ಮಾಲೀಕ ಸೈಯದ್, ಯುವತಿಯ ವಿರುದ್ಧ ದ್ವೇಷ ಸಾಧಿಸಲು ಶುರು ಮಾಡಿದ್ದ ಎನ್ನಲಾಗಿದೆ.
ನಡುರಸ್ತೆಯಲ್ಲಿ ಉದ್ದಟತನ
ಜನವರಿ 22 ರಂದು ರಾತ್ರಿ ಸುಮಾರು 7:30 ರ ಹೊತ್ತಿಗೆ ಲಕ್ಷ್ಮಿ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಅವರನ್ನು ಅಡ್ಡಗಟ್ಟಿದ ಸೈಯದ್ ಸಾರ್ವಜನಿಕವಾಗಿ ನಿಂದಿಸಲು ಶುರು ಮಾಡಿದ್ದಾನೆ. ‘ನಿನಗೆ ಬಟ್ಟೆ ಬಿಚ್ಚಿ ಹೊಡೆಯುತ್ತೇನೆ, ರಸ್ತೆಯಲ್ಲಿಯೇ ಕತ್ತರಿಸಿ ಹಾಕುತ್ತೇನೆ’ ಎಂಬ ಅತಿ ವಿಕೃತ ಮಾತುಗಳನ್ನಾಡಿ ಯುವತಿಯನ್ನು ಬೆದರಿಸಿದ್ದಾನೆ. ‘”ನಿನ್ನಿಂದ ನನ್ನ ದುಡ್ಡೆಲ್ಲಾ ಹೋಯಿತು, ನನ್ನ ತಲೆ ಕೆಡಿಸಬೇಡ’ ಎಂದು ಕೂಗಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ಕೆಂಗೇರಿ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಸೈಯದ್ ಅರಚಾಟ ಮತ್ತು ಬೆದರಿಕೆ ಮಾತುಗಳನ್ನು ಕೇಳಿ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಆತನ ವರ್ತನೆಯನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಬ್ಬ ಮಹಿಳೆಯ ಜೊತೆ ವರ್ತಿಸುವ ರೀತಿ ಇದಲ್ಲ ಎಂದು ಬುದ್ಧಿ ಹೇಳಿದ ಸ್ಥಳೀಯರು, ಸೈಯದ್ನನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಪೊಲೀಸರು ಆರೋಪಿ ಸೈಯದ್ನನ್ನು ವಶಕ್ಕೆ ಪಡೆದಿದ್ದಾರೆ.