Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹುಬ್ಬಳ್ಳಿ: ಖ್ಯಾತ ಹಿಂದೂಸ್ತಾನಿ ಗಾಯಕ, ಸಂಗೀತ ವಿದ್ವಾಂಸ ಡಾ.ಅಶೋಕ ಹುಗ್ಗಣ್ಣವರ (64) ಹುಬ್ಬಳ್ಳಿಯಲ್ಲಿ ಕೊನೆಯುಸಿರೆಳೆದರು.
ಕೆಲ ಕಾಲದಿಂದ ವಯೋಸಹಜ ಅನಾರೋಗ್ಯಕ್ಕೊಳಗಾಗಿದ್ದ ಡಾ.ಅಶೋಕ ಹುಗ್ಗಣವರ ಬುಧವಾರ ರಾತ್ರಿ ವಿಧಿವಶರಾದರು. ಅವರಿಗೆ ಪತ್ನಿ ವೀಣಾ (ಶಿಕ್ಷಕಿ) ಹಾಗೂ ಪುತ್ರ ವಿನಾಯಕ (ವಿಜ್ಞಾನಿ ಮತ್ತು ಗಾಯಕ) ಇದ್ದಾರೆ. ಶುಕ್ರವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೂಲತಃ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಹುಗ್ಗಣ್ಣವರ, ಹೊನ್ನಾವರದ ಎಂಪಿಇ ಸೊಸೈಟಿಯ ಎಸ್.ಡಿ.ಎಂ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ, 2021ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿ ಬಳಿಕ ಹುಬ್ಬಳ್ಳಿಯ ಉಣಕಲ್ನಲ್ಲಿ ವಾಸವಾಗಿದ್ದರು.
ಹುಗ್ಗಣ್ಣವರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ, ಸಂಗೀತ ರತ್ನ ಡಿಪ್ಲೊಮಾ ಮತ್ತು ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದರು.
ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿದ ಶ್ರೇಷ್ಠ ಗುರುವಾಗಿದ್ದರು. ಕೇವಲ ಸಂಗೀತವಷ್ಟೇ ಅಲ್ಲದೆ ವಿಜ್ಞಾನ ಮತ್ತು ಸಂಗೀತ ಎರಡರಲ್ಲೂ ಡಾಕ್ಟರೇಟ್ ಪದವಿ ಪಡೆದಿದ್ದ ಅಪರೂಪದ ಪ್ರತಿಭೆ ಅವರದು. ಕಲೆಯೂ ವಿಜ್ಞಾನವೂ ಒಂದೇ ನಾಣ್ಯದ ಎರಡು ಮುಖಗಳೆಂಬುದನ್ನು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದವರು ಅವರು.
ಹಿಂದೂಸ್ತಾನಿ ಸಂಗೀತದ ವಿವಿಧ ರಾಗಗಳು, ಬಂಧಿಶ್ಗಳು ಹಾಗೂ ಶಾಸ್ತ್ರೀಯ ಗಾಯನ ಶೈಲಿಯಲ್ಲಿ ಅವರು ಅಪ್ರತಿಮ ಪಾಂಡಿತ್ಯ ಹೊಂದಿದ್ದರು.
ಪಂ.ಲಿಂಗರಾಜ ಬುವಾ ಯರಗುಪ್ಪಿ ಅವರ ಬಳಿ 12 ವರ್ಷ ಗ್ವಾಲಿಯರ್ ಪದ್ಧತಿಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರಿಗೆ, ಕರ್ನಾಟಕ ಕಲಾಶ್ರೀ, ಅನನ್ಯ ಮನ್ಸೂರ್ ಪ್ರಶಸ್ತಿ, ರಾಗಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.