Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಶ್ರೀ ರಾಘವೇಂದ್ರ ಸ್ವಾಮಿ (ರಾಯರು) ಕನ್ನಡಿಗರ ಆರಾಧ್ಯ ದೈವ. ಹೀಗಾಗಿ ಮಂತ್ರಾಲಯಕ್ಕೆ ತೆರಳುವ ಕನ್ನಡಿಗರ ಸಂಖ್ಯೆ ಗಣನೀಯವಾಗಿಯೇ ಇದೆ.
ಆದರೆ ಇದೀಗ ಮಂತ್ರಾಲಯದ ವಿಚಾರವಾಗಿ ಆಂಧ್ರಪ್ರದೇಶದ ತೆಲುಗು ಭಾಷಿಕರು ಅನಾವಶ್ಯಕವಾಗಿ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಯರನ್ನು ಕನ್ನಡಿಗರು ಸ್ಮರಿಸುವ ಹಾಗೂ ಭಕ್ತಿಯಿಂದ ಹೇಳುವ ಪ್ರಮುಖ ಸಾಲುಗಳಾದ ‘ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ಎನ್ನುವ ವಿಶೇಷ ಸಾಲುಗಳ ಬಗ್ಗೆ ಆಂಧ್ರಪ್ರದೇಶದ ತೆಲುಗು ಭಾಷಿಕರು ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ.
ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಮಂತ್ರಾಲಯ ದೇವಾಲಯ ವಿಚಾರದಲ್ಲಿ ಇದೀಗ ಭಾಷಾ ವಿವಾದ ಸೃಷ್ಟಿಯಾಗಿದೆ. ಇದನ್ನು ತೆಲುಗು ಭಾಷಿಕರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಸೃಷ್ಟಿ ಮಾಡಿದ್ದು, ಇದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
Andhra & Amaravati Updates ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಮಂತ್ರಾಲಯ, ಆಂಧ್ರಪ್ರದೇಶ .. ಮಾನ್ಯ ಮುಖ್ಯಮಂತ್ರಿಗಳೇ, ಮಾನ್ಯ ಉಪಮುಖ್ಯಮಂತ್ರಿಗಳೇ, ತೆಲುಗು ಮಂಡಳಿ ಎಲ್ಲಿದೆ ಸರ್? ಮಂತ್ರಾಲಯ ಆಂಧ್ರಪ್ರದೇಶದ ಒಂದು ಭಾಗ. ಅಲ್ಲಿ ತೆಲುಗು ಭಾಷೆಯನ್ನು ಸಂಪೂರ್ಣವಾಗಿ ಹೇಗೆ ತ್ಯಜಿಸಬಹುದು? ಮೊದಲು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕನ್ನಡದಲ್ಲಿ ಬರೆದಿರುವ ‘ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ಎನ್ನುವ ಬರಹವಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಹಲವು ತೆಲುಗು ಭಾಷಿಕರು ಸಹಮತ ವ್ಯಕ್ತಪಡಿಸಿ ಟ್ಯಾಗ್ ಮಾಡುತ್ತಿದ್ದು. ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಂತ್ರಾಲಯದ ಪ್ರವೇಶ ದ್ವಾರದಲ್ಲಿ ‘ತೆಲುಗು ಭಾಷೆಯ’ ಬರಹ ದೊಡ್ಡದಾಗಿ, ಸ್ಪಷ್ಟವಾದ ರೀತಿಯಲ್ಲಿ ಪ್ರದರ್ಶಿಸಬೇಕು. ಇತರ ಭಾಷೆಗಳನ್ನು ಸಹ ತೋರಿಸಬಹುದು, ಯಾವುದೇ ಆಕ್ಷೇಪಣೆ ಇಲ್ಲ, ಆದರೆ ದಯವಿಟ್ಟು ತೆಲುಗು ಭಾಷೆಯನ್ನು ಪ್ರಮುಖವಾಗಿ ಹೈಲೈಟ್ ಮಾಡಿ, ಏಕೆಂದರೆ ಅದು ನಮ್ಮ ಗುರುತು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಮತ್ತೊಬ್ಬ ತೆಲುಗು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ಅಲ್ಲದೇ, ಗೂಗಲ್ ಮ್ಯಾಪ್ನಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠ ಎನ್ನುವ ಬದಲು ಶ್ರೀ ರಾಘವೇಂದ್ರ ಸ್ವಾಮಿವಾರಿ ಮಠಂ ಎಂದು ಬದಲಾಯಿಸಿ ಎನ್ನುವ ಅಭಿಯಾನವೂ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ.
ಆಂಧ್ರಪ್ರದೇಶದ ರಾಯಲಸೀಮಾ ಜಿಲ್ಲೆಯ ಇತರ ರಾಜ್ಯಗಳೊಂದಿಗೆ ಗಡಿ ಹಂಚಿಕೊಳ್ಳುವ ಪ್ರದೇಶಗಳಿಗೆ ನಮ್ಮ ಭಾಷೆಯಲ್ಲಿ ಹೆಸರುಗಳು ಇರಬೇಕು. ಈಗ ಮಂತ್ರಾಲಯವನ್ನು ನಮ್ಮ ತೆಲುಗು ಭಾಷೆಗೆ ಬದಲಾಯಿಸಲಾಗಿದೆ, ಅದೇ ರೀತಿ, ಬೇರೆ ಯಾವುದೇ ಪ್ರದೇಶವು ನಮ್ಮ ಅಧಿಕೃತ ಭಾಷೆಯಲ್ಲಿಲ್ಲದಿದ್ದರೂ ತೆಲುಗು ಹೊರತುಪಡಿಸಿ ಬೇರೆ ಭಾಷೆಯಲ್ಲಿದ್ದರೆ, ಅವು ತೆಲುಗಿನಲ್ಲಿವೆಯಾ ಎಂಬುದನ್ನು ಖಚಿತಪಡಿಸಿಕೊಳ್ಳೋಣ ಎಂದು ಟ್ವೀಟ್ ಮಾಡಲಾಗಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗ ಹಾಗೂ ರಾಯಚೂರಿನಿಂದ ಕೂಗಳತೆಯ ದೂರದಲ್ಲಿರುವ ರಾಯರ ಸನ್ನಿಧಾನದ ಬಗ್ಗೆ ಇದೀಗ ಅನಾವಶ್ಯಕವಾದ ವಿವಾದ ಸೃಷ್ಟಿಯಾಗಿದೆ. ದಶಕಗಳಿಂದ ಕನ್ನಡದಲ್ಲಿರುವ ಬೋರ್ಡ್ನ ಬಗ್ಗೆ ಈಗ ವಿವಾದವೇಕೆ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.
https://x.com/i/status/1998252476118827280