Subscribe NewsicsKannada/ YouTube
newsics.com
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಪಾಸುಗಳು ಕಾಳಸಂತೆಯಲ್ಲಿ ಮಾರಾಟವಾದವು. ಜಗನ್ಮೋಹನ ಅರಮನೆ ಎದುರಿನ ಬ್ರಹ್ಮಪುರಿ ಗೇಟ್ ಬಳಿ ಕೆಲ ವ್ಯಕ್ತಿಗಳು, ಸಿನಿಮಾದ ಬ್ಲಾಕ್ ಟಿಕೆಟ್ ಮಾರಾಟ ಮಾಡುವಂತೆ ದಸರಾ ಪಾಸ್ಗಳನ್ನು 2 ಸಾವಿರ ರೂ.ನಿಂದ ಐದು ಸಾವಿರ ರೂ.ವರೆಗೆ ಮಾರಾಟ ಮಾಡಿ, ತಮ್ಮ ಜೇಬನ್ನು ಹಣದಿಂದ ತುಂಬಿಸಿಕೊಂಡರು. ಕೆಲವರು ಚೌಕಾಸಿ ಮಾಡಿ ಪಾಸ್ಗಳನ್ನು ಖರೀದಿಸಿ, ಜಂಬೂಸವಾರಿ ನೋಡಲು ಹೋದರು.
ಗೇಟ್ಗಳ ಬಳಿ ಜನರ ನೂಕುನುಗ್ಗಲು
ಅರಮನೆಯ ಸುತ್ತಲೂ ಇರುವ ಕೆಲ ಗೇಟ್ಗಳನ್ನು ಇತಿಂತಹವರಿಗೆ ಪ್ರವೇಶವೆಂದು ನಿಗದಿಪಡಿಸಲಾಗಿದೆ. ಹಾಗಾಗಿ ಪಾಸ್ ಇದ್ದವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿತ್ತು. ಉಳಿದವರನ್ನು ಅಲ್ಲಿಂದ ವಾಪಸ್ ಕಳುಹಿಸಲಾಗುತ್ತಿತ್ತು. ಆದರೂ ಎಲ್ಲಾ ಗೇಟ್ಗಳ ಮುಂದೆ ಪಾಸ್ ಹಿಡಿದ ಜನರು ಪ್ರವಾಹದಂತೆ ನುಗ್ಗಿ ಬಂದಿದ್ದರಿಂದ, ಅವರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ನಡೆಸಿದರು.
ಪಾಸ್ ಇದ್ದರೂ ಒಳಗೆ ಕಳುಹಿಸಲು ಪರದಾಡಿದರು. ಪಾಸ್ ಇದ್ದ ಜನರು ಪೊಲೀಸರ ಜತೆ ವಾಗ್ವಾದ, ಮಾತಿನ ಚಕಮಕಿ ನಡೆಸಿದರು.
ಬ್ರಹ್ಮಪುರಿ ಗೇಟ್ ಮುಂದಿರುವ ಪೊಲೀಸರು ತಾಳ್ಮೆ ಕಳೆದುಕೊಂಡು ಅನಾಗರಿಕರಂತೆ ಜನರ ವರ್ತಿಸಿದರು. ಮೂರ್ನಾಲ್ಕು ಪತ್ರಕರ್ತರು ಒಳಗೆ ಬಿಡಲು ಗೋಗರೆದರೂ ಬಿಡಲಿಲ್ಲ. ಈ ವೇಳೆ ನೂಕು ನುಗ್ಗಲಿನಲ್ಲಿ ಹಲವು ಜನರು ಸುಸ್ತಾದರು. ಯುವತಿಯೊಬ್ಬಳು ಅಸ್ವಸ್ಥಳಾದಳು. ಕೂಡಲೇ ಆಕೆಗೆ ಚಿಕಿತ್ಸೆ ನೀಡಲಾಯಿತು.
ನಕಲಿ ಪಾಸ್ನಿಂದ ಒಳಗೆ ಬಂದ ವ್ಯಕ್ತಿ ಪೊಲೀಸ್ ವಶಕ್ಕೆ
ದಸರಾ ಜಂಬೂಸವಾರಿ, ಟಾರ್ಚ್ಲೈಟ್ ಪರೇಡ್ನ ಪಾಸ್ಗಳನ್ನು ನಕಲು ಮಾಡಿ ಮಾರಾಟ ಮಾಡಿರುವುದು ಕೂಡ ಕಂಡು ಬಂದಿದೆ. ಅಲ್ಲದೆ ಕಲರ್ ಜೆರಾಕ್ಸ್ ಮೂಲಕ ದಸರಾ ಪಾಸ್ಗಳನ್ನು ನಕಲು ಮಾಡಿಕೊಂಡು ಅರಮನೆಯೊಳಗೆ ಹಲವು ಮಂದಿ ಪ್ರವೇಶಿಸಿದ್ದಾರೆ. ಇವರಲ್ಲಿ ವ್ಯಕ್ತಿಯೊಬ್ಬ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆತನ ತಪಾಸಣೆ ನಡೆಸಿದ ಪೊಲೀಸರು, ವಶಕ್ಕೆ ತೆಗೆದುಕೊಂಡರು.