newsics.com
ಕಾರವಾರ: ಜಿಲ್ಲೆಗೆ ಹಾಗೂ ಜೊಯ್ಡಾ ತಾಲೂಕಿಗೆ ಒಂದು ಆಸ್ಪತ್ರೆ ಕೊಡಿ ಸರ್ ಎಂದು ಪತ್ರಕರ್ತೆ ಮನವಿ ಮಾಡಿದಾಗ, ನಿನ್ನ ಹೆರಿಗೆ ಬೇರೆ ಕಡೆ ಮಾಡಿಸುವೆ. ಆಗಲಿ ನೋಡೋಣ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಉಡಾಫೆ ಉತ್ತರ ಕೊಟ್ಟಿದ್ದಾರೆ.
ಉತ್ತರ ಕನ್ನಡದ ಜೋಯಿಡಾ ತಾಲೂಕಿನಲ್ಲಿ ಇಲ್ಲಿಯವರೆಗೆ ಒಂದು ಉತ್ತಮ ಆಸ್ಪತ್ರೆ ವ್ಯವಸ್ಥೆಯಿಲ್ಲದಿರುವುದರಿಂದ ಸಾರ್ವಜನಿಕರು ಇದರಿಂದ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ. ಶಾಸಕರು ಜೋಯಿಡಾಗೆ ಬಂದಿದ್ದಾಗ ಅಲ್ಲಿದ್ದ ಸ್ಥಳೀಯ ಪತ್ರಕರ್ತರು ಸಂದರ್ಶಿಸಿದ್ದರು.
ನಿಮ್ಮ ಕಾಲಾವಧಿಯಲ್ಲಿಯೇ ಒಂದು ಉತ್ತಮ ಆಸ್ಪತ್ರೆ ನಿರ್ಮಿಸಿ ಕೊಡಿ ಎಂದು ಪತ್ರಕರ್ತೆಯೊಬ್ಬರು ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ, ಚಿಂತಿಸಬೇಡ. ನಿನ್ನ ಹೆರಿಗೆಯನ್ನು ನಾವು ಬೇರೆ ಕಡೆ ಮಾಡಿಸುತ್ತೇವೆ ಎಂದು ತೀವ್ರ ಅಶ್ಲೀಲ ರೀತಿಯಲ್ಲಿ ಪತ್ರಕರ್ತೆಯ ಕಡೆ ನೋಡಿ ಕಣ್ಣು ಮಿಟುಕಿಸುತ್ತಾ ಉತ್ತರಿಸಿದ್ದಾರೆ.
ಈ ಉತ್ತರದಿಂದ ದಿಙ್ಮೂಢಳಾದ ಪತ್ರಕರ್ತೆ ತಮ್ಮೂರಿನ ಸಮಸ್ಯೆಯನ್ನು ವಿವರಿಸಲು ಮುಂದಾದರೂ ಉಡಾಫೆಯಿಂದ ಹುಬ್ಬು ಹಾರಿಸುತ್ತಾ ಆರ್. ವಿ ದೇಶಪಾಂಡೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.