newsics.com
ಬೆಂಗಳೂರು: ಹನಿಟ್ರ್ಯಾಪ್ ಬಗ್ಗೆ ಸಚಿವ ಕೆಎನ್ ರಾಜಣ್ಣ ಸದನದಲ್ಲಿ ಮಾತನಾಡಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಎಲ್ಲರಿಗೂ ಗೊತ್ತಾಗಲಿ, ಇದರ ಹಿಂದೆ ಯಾರಿದ್ದಾರೆ, ಪ್ರೊಡ್ಯೂಸರ್ ಯಾರು, ಡೈರೆಕ್ಟರ್ ಯಾರು ಅಂತ ಗೊತ್ತಾಗಲಿ ಅಂತ ರಾಜಣ್ಣ ಗುಡುಗಿದ್ದಾರೆ.
ಯತ್ನಾಳ್ ಅವರು ನನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಕರ್ನಾಟಕ ರಾಜ್ಯ ಎಂದರೆ ಸಿ.ಡಿ ಮತ್ತು ಪೆನ್ ಡ್ರೈವ್ ಉತ್ಪಾದನೆಗೆ ಹೆಸರಾಗಿದೆ ಎಂದು ಹಲವರು ಹೇಳುತ್ತಾರೆ. ತುಮಕೂರಿನ ಇಬ್ಬರು ಸಚಿವರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಕೇಳಿ ಬರುತ್ತಿದೆ. ತುಮಕೂರಿನಲ್ಲಿ ಇರುವ ಸಚಿವರು ಎಂದರೆ ಪರಮೇಶ್ವರ್ ಹಾಗೂ ನಾನು ಮಾತ್ರ. ಇದು ರಾಜ್ಯಕ್ಕೆ ಸೀಮಿತ ಆಗಿಲ್ಲ, ರಾಷ್ಟ್ರಮಟ್ಟದಲ್ಲಿ ಎಲ್ಲಾ ಪಕ್ಷದ ಮುಖಂಡರ ಪೆನ್ ಡ್ರೈವ್ ಇದ್ದಾವೆ. ನಾನು ಒಂದು ಲಿಖಿತ ದೂರು ಕೊಡುತ್ತೇನೆ. ಇದರಲ್ಲಿ ನಿರ್ಮಾಪಕರು ಯಾರಿದ್ದಾರೆ? ಯಾರು ಮಾಡುತ್ತಿದ್ದಾರೆ? ತನಿಖೆ ಮಾಡಲಿ ಅಂತ ಆಗ್ರಹಿಸಿದ್ರು.
48 ಜನರ ಪೆನ್ ಡ್ರೈವ್ ಇದೆ ಎಂದ ರಾಜಣ್ಣ
ಇನ್ನು, 48 ಜನರ ಪೆನ್ ಡ್ರೈವ್ ಗಳು ಇದ್ದಾವೆ, ಈ ಕಡೆ ಇರುವ, ಆ ಕಡೆ ಇರುವ ನಾಯಕರ ಪೆನ್ ಡ್ರೈವ್ ಗಳು ಇದೆ. ಆದ್ದರಿಂದ ನನ್ನ ಮೇಲೆ ಹನಿ ಟ್ರ್ಯಾಪ್ ಮಾಡಿರುವ ಬಗ್ಗೆ ಕೆಲವು ಸಾಕ್ಷಿಗಳನ್ನು ಹೊಂದಿದ್ದು, ಸದನದಲ್ಲಿ ಕುಳಿತಿರುವವರ ಬಗ್ಗೆ ಜನರಿಗೆ ಗೌರವ ಬರಬೇಕು. ಆದ್ದರಿಂದ ನಾನು ಈ ಬಗ್ಗೆ ಗೃಹ ಸಚಿವರಿಗೆ ದೂರು ಕೊಡ್ತೀನಿ. ಪಾಪ ರೇವಣ್ಣ ಅವರದ್ದು, ಕುಟುಂಬದ್ದು ಬರುತ್ತೆ. ಈಗ ನನ್ನ ಮೇಲೆ ಕೂಡ ಪ್ರಯತ್ನ ಮಾಡಿದ್ದಾರೆ ಅನ್ನೋದಕ್ಕೆ ಸಾಕ್ಷಿಗಳಿದ್ದು, ಈ ಬಗ್ಗೆ ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ಹೇಳಿದರು.
ತನಿಖೆಗೆ ಆದೇಶಿಸಿದ ಡಾ. ಜಿ. ಪರಮೇಶ್ವರ: ಇದಕ್ಕೆ ಉತ್ತರಿಸಿದ ಸಚಿವ ಪರಮೇಶ್ವರ್ ಅವರು, ಇದು ಈ ಸದನದ ಸದಸ್ಯನ ಪ್ರಶ್ನೆ. ಇದಕ್ಕೆಲ್ಲಾ ಒಂದು ಕಡಿವಾಣ ಹಾಕಬೇಕು. ಕರ್ನಾಟಕ ವಿಧಾನಸಭೆ ಅತ್ಯಂತ ಗೌರವ ಹೊಂದಿದೆ. ದೊಡ್ಡ ದೊಡ್ಡ ಸದಸ್ಯರ ಆದರ್ಶಗಳನ್ಮ ಬಿಟ್ಟು ಹೋಗಿದ್ದಾರೆ. ಸದನದ ಸದಸ್ಯರ ಮರ್ಯಾದೆ ಕಾಪಾಡಬೇಕಾದರೆ ಇದಕ್ಕೆ ಇತಿಶ್ರೀ ಹಾಕಬೇಕು. ರಾಜಣ್ಣ ಅವರು ಏನು ಪ್ರಸ್ತಾಪ ಮಾಡಿದ್ದಾರೆ. ಅವರು ಮನವಿ ಕೊಡ್ತೇನೆ ಎಂದು ಹೇಳಿದ್ದಾರೆ. ಅವರ ಮನವಿ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆ ಮಾಡಿಸ್ತೇನೆ ಎಂದ ಸಚಿವ ಪರಮೇಶ್ವರ್ ಹೇಳಿದರು.