newsics.com
ಆಂಧ್ರಪ್ರದೇಶ: ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಪಿ.ಗನ್ನವರಂ ಬೋಡಪತಿವಾರಿಪಲೆಂನ ಮುಖ್ಯ ರಸ್ತೆಯ ಬಳಿ ಇರುವ ಕೊಂಡಲಮ್ಮ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳ ಹಿಂಭಾಗದಲ್ಲಿ ಒಂದು ತೆಂಗಿನ ಮರವಿದ್ದು ಆ ಮರದ ಬೇರುಗಳ ನಡುವೆ ಶಿವಲಿಂಗ ಪತ್ತೆಯಾಗಿದೆ.
ಕಾರ್ತಿಕ ಮಾಸದ ಸೋಮವಾರದಂದು ಈ ಶಿವಲಿಂಗ ಭಕ್ತರಿಗೆ ಗೋಚರಿಸಿದೆ ಎನ್ನಲಾಗಿದೆ. ಶಿವನ ಪವಿತ್ರ ದಿನದಂದು ಪಂಚಲೋಹದ ಶಿವಲಿಂಗ ಉದ್ಭವವಾಗಿದ್ದು ಸ್ಥಳೀಯರು ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ.
ಶಿವಲಿಂಗ ಗೋಚರಿಸಿದ್ದು ಹೇಗೆ?
ಸ್ವಪ್ನಾ ಎಂಬ ಭಕ್ತೆ, ವೆಂಕಟೇಶ್ವರ ದೇವಸ್ಥಾನದಿಂದ ದೇವರ ಪ್ರಸಾದ ತೆಗೆದುಕೊಂಡು ಹೊರಬರುತ್ತಿದ್ದಾಗ ಅಚಾನಕ್ಕಾಗಿ ಒಂದು ಹಾವನ್ನು ನೋಡುತ್ತಾಳೆ. ಅದು ಎಲ್ಲಿಗೆ ಹೋಗುತ್ತಿದೆ ಎಂದು ನೋಡಿದಾಗ ಹಾವು ತೆಂಗಿನ ಮರದ ಬಳಿಗೆ ಹೋಗಿ ಕಣ್ಮರೆಯಾದದ್ದನ್ನು ಕಂಡು ಹೆದರಿ ಸುತ್ತಮುತ್ತಲಿನವರಿಗೆ ಈ ಅಚ್ಚರಿಯ ವಿಷಯವನ್ನು ತಿಳಿಸುತ್ತಾಳೆ. ಇದು ಒಬ್ಬರ ಬಾಯಿಯಿಂದ ಇನ್ನೊಬ್ಬರಿಗೆ ತಲುಪಿ ಪಟ್ಟಣದಾದ್ಯಂತ ಈ ವಿಷಯ ಸುದ್ದಿಯಾಗುತ್ತದೆ.
ಅಲ್ಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ನೋಡಿದಾಗ ಆ ಸ್ಥಳದಲ್ಲಿ ಪಂಚಲೋಹಗಳಿಂದ ಕೂಡಿದ ಶಿವಲಿಂಗ ಕಂಡು, ಕಾರ್ತಿಕ ಮಾಸದ ಸೋಮವಾರ ಶಿವನೇ ಪ್ರತ್ಯಕ್ಷನಾಗಿದ್ದಾನೆ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಸ್ಥಳೀಯರು ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ನಡೆಸುತ್ತಿದ್ದಾರೆ.