newsics.com
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮಗೆ ನೀಡಿರುವ 14 ಸೈಟ್ಗಳನ್ನು ಹಿಂತಿರುಗಿಸುವ ಕುರಿತ ಪತ್ರವನ್ನು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮುಡಾ ಕಚೇರಿಗೆ ಬಂದು ಕೊಟ್ಟು ಹೋಗಿದ್ದಾರೆ. ಈ ಕುರಿತು ಒಂದೆರಡು ದಿನಗಳಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಘುನಂದನ್ ಮಾಹಿತಿ ನೀಡಿದ್ದಾರೆ.
ಮುಡಾ ಕಚೇರಿಯ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಘುನಂದನ್, ‘ಸಿದ್ದರಾಮಯ್ಯ ಪತ್ನಿ ತಮಗೆ ನೀಡಿರುವ ಬದಲಿ ನಿವೇಶನಗಳನ್ನು ವಾಪಸ್ ನೀಡುವ ಪತ್ರವನ್ನು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನಮ್ಮ ಕಚೇರಿಗೆ ಬಂದು ಕೊಟ್ಟು ಹೊಗಿದ್ದಾರೆ. ಸ್ವಇಚ್ಛೆಯಿಂದ ಸೈಟ್ ವಾಪಸ್ ಕೊಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಅದರೆ, ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಪ್ರಕಾರ ಒಮ್ಮೆ ಒಬ್ಬರಿಗೆ ಖಾತೆ ಮಾಡಿಕೊಟ್ಟರೆ ಅದರ ಸಂಪೂರ್ಣ ಮಾಲೀಕರು ಅವರೇ ಆಗುತ್ತಾರೆ. ಆದ್ದರಿಂದ ವಾಪಸ್ ಪಡೆಯಲು ಅವಕಾಶ ಇದೆಯಾ ಎಂಬುದನ್ನು ಕಾನೂನು ತಂಡದ ಜತೆ ಚರ್ಚಿಸುತ್ತೇವೆ. ಅದರಂತೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಪ್ರಕರಣದಲ್ಲಿ ಕಾನೂನು ಏನನ್ನು ಹೇಳುತ್ತದೋ, ಕಾನೂನಿನ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ನಾನು ಕಮಿಷನರ್ ಆಗಿರುವುದು ಇದೇ ಮೊದಲು. ಈ ರೀತಿಯ ಪ್ರಕರಣ ಮೊದಲ ಬಾರಿ ನಾನು ನೋಡುತ್ತಿದ್ದೇನೆ. ಕಾನೂನು ಪ್ರಕಾರ ಮುಂದಿನ ಕ್ರಮ ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಭೂ ಮಾಲೀಕರು ಅವರೇ ಆಗಿರುವುದರಿಂದ ಸ್ವ ಇಚ್ಛೆಯಿಂದ ಹಿಂತಿರುಗಿಸುತ್ತಿದ್ದಾರೆ. ಅದನ್ನು ಪರಿಶೀಲಿಸುತ್ತೇವೆ ಎಂದರು.
ಈ ಪ್ರಕರಣದಲ್ಲಿ ಲೋಕಾಯುಕ್ತ ಪೋಲೀಸರು ಕೆಲವು ದಾಖಲೆಗಳನ್ನ ಕೇಳಿ ಪತ್ರ ಬರೆದಿದ್ದು, ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ. ಜಾರಿ ನಿರ್ದೇಶನಾಲಯ ಈವರೆಗೆ ಯಾವುದೇ ದಾಖಲೆ ಕೇಳಿಲ್ಲ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಜತೆಗೆ ಮುಡಾದ ಕೆಲ ಸಿಬ್ಬಂದಿಯನ್ನು ಕೂಡ ಲೋಕಾಯುಕ್ತರ ಸಹಾಯಕ್ಕೆ ಕಳುಹಿಸಲಾಗಿದೆ ಎಂದು ಮುಡಾ ಆಯುಕ್ತ ರಘುನಂದನ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಮುಡಾ ಪ್ರಕರಣ ತೀವ್ರ ಸಂಚಲನ ಮೂಡಿಸಿದ ಬೆನ್ನಲ್ಲೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮೌನ ಮುರಿದು, ಸೋಮವಾರ ಪತ್ರ ಬರೆದಿದ್ದರು. ಜತೆಗೆ ವಿವಾದಕ್ಕೆ ಕಾರಣವಾಗಿರುವ 14 ಬದಲಿ ನಿವೇಶನಗಳನ್ನು ಮುಡಾಗೆ ಮರಳಿಸುವ ನಿರ್ಧಾರ ಪ್ರಕಟಿಸಿದ್ದರು.
ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ – ಕಾಮುಕ ಶಿಕ್ಷಕ ಅರೆಸ್ಟ್