newsics.com
ಬೆಂಗಳೂರು: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಪ್ರಿಯಕರನೊಬ್ಬ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು 30 ತುಂಡು ಮಾಡಿ, ಫ್ರಿಡ್ಜ್ನಲ್ಲಿ ಶೇಖರಣೆ ಮಾಡಿಟ್ಟ ಆಘಾತಕಾರಿ ಘಟನೆ ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ನಡೆದಿದೆ.
ವೀರಣ್ಣ ಆಶ್ರಮದಲ್ಲಿ ಮೂರನೇ ಅಂತಸ್ತಿನಲ್ಲಿ ಯುವತಿಯನ್ನು ಕೊಲೆ ಮಾಡಿ, ನಂತರ ಆಕೆಯ ದೇಹವನ್ನು 30 ತುಂಡುಗಳನ್ನು ಮಾಡಿ ಫ್ರಿಡ್ಜ್ನಲ್ಲಿ ಶೇಖರಣೆ ಮಾಡಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
15ರಿಂದ 20 ದಿನಗಳ ಹಿಂದೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ. ಪ್ರೀತಿ ವಿಚಾರಕ್ಕೆ ಯುವತಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಸಂಬಂಧಿಕರು ಬಂದು ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ನೇಪಾಳ ಮೂಲದ ಮಹಾಲಕ್ಷ್ಮಿ ಕೊಲೆಯಾದ ಮಹಿಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಲ್ಲೇಶ್ವರದ ವೈಯಾಲಿಕಾವಲ್ನಲ್ಲಿ ದೆಹಲಿಯ ಶ್ರದ್ಧಾ ವಾಕರ್ ರೀತಿಯ ಕೊಲೆ ನಡೆದಿದ್ದು, ನೇಪಾಳ ಮೂಲದ 29 ವರ್ಷದ ಯುವತಿ ಮಹಾಲಕ್ಮೀಯನ್ನು ಕೊಂದಿರುವುದು ಮಾತ್ರವಲ್ಲದೆ, ಆಕೆಯ ದೇಹವನ್ನು 30 ಪೀಸ್ ಮಾಡಿ ಫ್ರಿಜ್ನಲ್ಲಿ ಇರಿಸಿ ಹಂತಕ ತೆರಳಿದ್ದಾನೆ.
ಈ ವೇಳೆ ದೇಹದ ತುಂಡುಗಳಿಂದ ರಕ್ತ ತೊಟ್ಟಿಕ್ಕಿದೆ. ಹಂತ ಹಂತವಾಗಿ ರಕ್ತ ಫ್ರಿಜ್ನಿಂದ ತೊಟ್ಟಿಕ್ಕಲು ಆರಂಭಿಸಿದೆ. ರಕ್ತ ತೊಟ್ಟಿಕ್ಕಿ ನೆಲದ ಮೇಲೆ ಹರಿದಿದ್ದು, ಅದರಲ್ಲಿ ಗೊಬ್ಬರ ಮಾದರಿಯ ಹುಳಗಳು ಜನ್ಮತಾಳಿವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಪತಿ ಹುಕುಮ್ ಸಿಂಗ್ ರಾಣ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದರೊಂದಿಗೆ ಮಹಾಲಕ್ಷ್ಮಿ ಕುಟುಂಬಸ್ಥರನ್ನು ಕರೆಸಿ ಕೂಡ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಖುದ್ದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರಿಂದ ವಿಚಾರಣೆ ನಡೆಯುತ್ತಿದೆ.
ಹುಕುಮ್ ಸಿಂಗ್ ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಪತಿಯಿಂದ ಈಗಾಗಲೇ ಡಿವೋರ್ಸ್ ಪಡೆದುಕೊಂಡಿದ್ದಳು. ನಾಲ್ಕು ವರ್ಷದ ಮಗು ತಂದೆಯೊಂದಿಗೆ ಇದ್ದು, ಆಗಾಗ ಪತ್ನಿಗೆ ಮಗುವನ್ನು ಭೇಟಿ ಮಾಡಿಸುತ್ತಿದ್ದ. ಹಲವು ದಿನದಿಂದ ಕರೆ ಮಾಡಿದ್ದರೂ ಪತ್ನಿ ಕರೆ ಸ್ವೀಕರಿಸುತ್ತಿರಲಿಲ್ಲ. ಶನಿವಾರ ಪತಿ ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲು ತೆರೆದಾಗ ಫ್ರಿಜ್ನಿಂದ ಹುಳಗಳು ಹೊರಬರುತ್ತಿದ್ದವು. ಸುಮಾರು 10-15ದಿನದ ಹಿಂದೆಯೆ ಕೊಲೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪೊಲೀಸರಿಗೆ ಕೊಲೆ ತನಿಖೆಯೇ ದೊಡ್ಡ ಚಾಲೆಂಜ್ ಆಗಿದೆ. ಎಷ್ಟು ದಿನದ ಹಿಂದೆ ಕೊಲೆಯಾಗಿದೆ ಎನ್ನುವ ಬಗ್ಗೆ ಖಚಿತವಾಗಿ ಗೊತ್ತಿಲ್ಲ. ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ದಿನದ ಹಿಂದಿನಿಂದ ಈಕೆ ಹೊರ ಬಂದಿಲ್ಲ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಈಕೆ ಕೆಲಸ ಮಾಡುತ್ತಿದ್ದ ಜಾಗದಲ್ಲೂ ವಿಚಾರಣೆ ನಡೆಸಲಾಗಿದೆ. ಎಷ್ಟು ದಿನದಿಂದ ಈಕೆ ಕೆಲಸಕ್ಕೆ ಬಂದಿಲ್ಲ. ರಜೆ ಹಾಕುವ ಬಗ್ಗೆ ಮುಂಚಿತವಾಗಿ ಮಾಹಿತಿ ಕೊಟ್ಟಿದ್ದರೇ? ಕೆಲಸಗಾರರ ಬಳಿ ಏನಾದರೂ ಹೇಳಿಕೊಂಡಿದ್ದರೇ ಎನ್ನುವ ಆಯಾಮದಲ್ಲೂ ತನಿಖೆ ಆಗುತ್ತಿದೆ. ಆಕೆಯ ಲಾಸ್ಟ್ ಕಾಲ್ ಬಗ್ಗೆ ಕೂಡ ಪರಿಶೀಲನೆ ಮಾಡಲಾಗಿದೆ.
ಕೊಲೆ ಮಾಡಿ ಎಸ್ಕೇಪ್ ಆಗಲು ಹಂತಕ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಫ್ರಿಜ್ ನಲ್ಲಿ ಮೃತ ದೇಹದ ತುಂಡು ಕತ್ತರಿಸಿ ಇಟ್ಟರೆ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ತಪ್ಪಿಸಿಕೊಳ್ಳಲು ಸಹ ಸಮಯ ಸಿಗುತ್ತದೆ ಎಂದು ಪ್ಲ್ಯಾನ್ ಮಾಡಿದ್ದಾನೆ. ಕೊಲೆ ನಡೆದು ಅಂದಾಜು 15 ದಿನಗಳ ಬಳಿಕ ವಾಸನೆ ಬರಲು ಶುರುವಾಗಿದೆ. ತಕ್ಷಣಕ್ಕೆ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಫ್ರಿಜ್ಅನ್ನು ಹಂತಕ ಆನ್ ಮಾಡಿ ಹೋಗಿದ್ದ. 15 ದಿನದ ಹಿಂದೆ ಘಟನೆ ನಡೆದಿದ್ದರೂ ಆರೋಪಿಗೆ ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿದೆ. ಇದರಿಂದಾಗಿ ಆರೋಪಿಯ ಜಾಡು ಪತ್ತೆ ಮಾಡುವುದೇ ಪೊಲೀಸರಿಗೆ ಸವಾಲೆನಿಸಿದೆ.