newsics.com | ನ್ಯೂಸಿಕ್ಸ್
ಬೆಂಗಳೂರು: ತಾಯಿ, ಅಜ್ಜಿ ಮತ್ತು ಮಾವನನ್ನು ಮಗನೆ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ, ಮನೆಯವರೊಂದಿಗೆ ಜಗಳವಾಡಿ ಈ ಕೃತ್ಯ ಎಸಗಿದ್ದಾನೆ.
ಮನೆ ಪಕ್ಕದವರು ಹೊರಗಿನಿಂದ ಬಾಗಿಲು ಲಾಕ್ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದಾಗ, ಸಿಕ್ಕಿಬೀಳುವ ಭಯದಿಂದ ಆತ ಒಳಗಡೆಯೇ ಪ್ರಾಣ ಕಳೆದುಕೊಂಡಿದ್ದಾನೆ.
ಮಾನಸಿಕ ಖಿನ್ನತೆಯೇ ಕೊಲೆಗೆ ಕಾರಣ?
ಈ ಭೀಕರ ಕೃತ್ಯವೆಸಗಿದ ಆರೋಪಿಯನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಈತ ಕಳೆದ ಐದು ವರ್ಷಗಳಿಂದ ತೀವ್ರ ಮಾನಸಿಕ ಖಿನ್ನತೆಯಿಂದ (Depression) ಬಳಲುತ್ತಿದ್ದ ಎನ್ನಲಾಗಿದೆ. ಘಟನೆಯ ದಿನ ಮನೆಯ ಕೋಣೆಯೊಂದರಲ್ಲಿ ಆರೋಪಿ ಪ್ರಶಾಂತ್ ಹಾಗೂ ಆತನ ಮಾವನ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ಕೋಪದ ಭರದಲ್ಲಿ ಪ್ರಶಾಂತ್ ತನ್ನ ಮಾವನನ್ನು ಕೊಲೆ ಮಾಡಿದ್ದಾನೆ.
ಹೆತ್ತ ತಾಯಿ, ಅಜ್ಜಿಯನ್ನೂ ಬಿಡದ ಪಾಪಿ
ಕೋಣೆಯೊಳಗಡೆ ಗಲಾಟೆ ನಡೆಯುತ್ತಿರುವ ಶಬ್ದ ಹಾಗೂ ಚೀರಾಟ ಕೇಳಿ, ಗಾಬರಿಗೊಂಡ ಆತನ ತಾಯಿ ಹಾಗೂ ಅಜ್ಜಿ ಓಡಿ ಬಂದು ಬಾಗಿಲು ತೆಗೆದಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಾವನನ್ನು ಕಂಡು ಅವರು ಬೆಚ್ಚಿಬಿದ್ದಿದ್ದಾರೆ. ತಾನು ಮಾಡಿದ ಕೊಲೆ ಎಲ್ಲಿ ಬಯಲಾಗುತ್ತದೆಯೋ, ತಾನು ಸಿಕ್ಕಿಬೀಳುತ್ತೇನೋ ಎಂಬ ಭಯದಲ್ಲಿ ರಾಕ್ಷಸನಂತೆ ವರ್ತಿಸಿದ ಪ್ರಶಾಂತ್, ಹೆತ್ತ ತಾಯಿ ಹಾಗೂ ವಯಸ್ಸಾದ ಅಜ್ಜಿಯನ್ನೂ ಸಹ ಬಾಗಿಲಿನ ಬಳಿಯೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಹೊರಗಿನಿಂದ ಬಾಗಿಲು ಲಾಕ್ ಮಾಡಿದ ಸ್ಥಳೀಯರು
ಮೂವರನ್ನು ಮುಗಿಸಿದ ಬಳಿಕ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಆರೋಪಿ, ಮನೆಯಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈತನ ವರ್ತನೆ ಹಾಗೂ ಮನೆಯೊಳಗಿನ ರಂಪಾಟವನ್ನು ಗಮನಿಸಿದ ನೆರೆಹೊರೆಯವರು ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ಆತ ಹೊರಬರದಂತೆ ಮನೆಯ ಬಾಗಿಲನ್ನು ಹೊರಗಿನಿಂದ ಭದ್ರವಾಗಿ ಲಾಕ್ ಮಾಡಿದ್ದಾರೆ. ಬಳಿಕ ತುರ್ತು ಸಹಾಯವಾಣಿ ‘112’ ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಸಿಕ್ಕಿಬೀಳುವ ಭಯದಲ್ಲಿ ಆತ್ಮಹತ್ಯೆ
ಸ್ಥಳೀಯರು ಹೊರಗಿನಿಂದ ಬೀಗ ಹಾಕಿದ್ದರಿಂದ ತಪ್ಪಿಸಿಕೊಳ್ಳಲು ದಾರಿಯಿಲ್ಲದೆ ಆರೋಪಿ ಕಂಗಾಲಾಗಿದ್ದಾನೆ. ಅಷ್ಟರಲ್ಲಿ ಪೊಲೀಸರು ಬರುತ್ತಾರೆಂಬ ಆತಂಕದಲ್ಲಿ ನೇರವಾಗಿ ಮನೆಯೊಳಗೆ ಹೋಗಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಕಾಮಾಕ್ಷಿಪಾಳ್ಯ ಪೊಲೀಸರು, ಮನೆಯ ಬಾಗಿಲು ಒಡೆದು ಒಳನುಗ್ಗಿದಾಗ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Plane Crash ಭೀಕರ ವಿಮಾನ ದುರಂತ: ಸ್ವಾತಂತ್ರ್ಯ ದಿನದಂದೇ 10 ಮಂದಿ ದುರ್ಮರಣ