newsics.com | ನ್ಯೂಸಿಕ್ಸ್
ಕೃಷಿ ತಾಪಂಡ ಮನೆಯಲ್ಲಿ ಇತ್ತೀಚೆಗೆ ಗೆಳೆಯ ವೈಶಾಖ್ ಆತ್ಮಹತ್ಯೆಗೆ ಶರಣಾದರು. ವೈಶಾಖ್ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ವೈಶಾಖ್ ಆತ್ಮಹತ್ಯೆ ಪ್ರಕರಣದ ಕುರಿತಾಗಿ ತಂದೆ ಹಾಗೂ ಪತ್ನಿ ದೂರು ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ. ಹೀಗಿರುವಾಗಲೇ ಕೃಷಿ ತಾಪಂಡ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ಇಂತಹದ್ದೊಂದು ಬರಹವನ್ನು ನಾನು ಬರೆಯಬೇಕಾಗುತ್ತದೆ ಅಂತ ಎಂದಿಗೂ ಊಹಿಸಿರಲಿಲ್ಲ. ಇದನ್ನು ಬರೆಯಲು ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳಲು ನನ್ನಲ್ಲಿ ಈಗ ಶಕ್ತಿ ಇಲ್ಲ, ಮಾನಸಿಕ ಸ್ಥೈರ್ಯವೂ ಇಲ್ಲ. ಇಂತಹ ಕಠಿಣ ಸಮಯದಲ್ಲಿ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವುದು ನನ್ನ ಕೊನೆಯ ಆಯ್ಕೆಯಾಗಿತ್ತು”
”ಆದರೆ, ನನ್ನ ಮೇಲೆ, ನನ್ನ ಸ್ನೇಹಿತರ ಮೇಲೆ ಮತ್ತು ನಮ್ಮ ಕುಟುಂಬಗಳ ಮೇಲೆ ನಿರಂತರವಾಗಿ ಬರುತ್ತಿರುವ ಒತ್ತಡ, ಊಹಾಪೋಹಗಳು ಮತ್ತು ಪದೇ ಪದೇ ಕೇಳಲಾಗುತ್ತಿರುವ ಪ್ರಶ್ನೆಗಳ ಕಾರಣದಿಂದ ನಾನು ಈ ಹೇಳಿಕೆಯನ್ನು ನೀಡಬೇಕಾದ ಪರಿಸ್ಥಿತಿಗೆ ಬಂದಿದ್ದೇನೆ. ನಾವು ಊಹಿಸಲೂ ಸಾಧ್ಯವಾಗದಷ್ಟು ದೊಡ್ಡ ನೋವನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಅದಕ್ಕೆ ಉತ್ತರಗಳನ್ನು ನೀಡುವಂತೆ ನಮ್ಮಿಂದ ನಿರೀಕ್ಷಿಸಲಾಗುತ್ತಿದೆ. ಕಳೆದ ಕೆಲವು ದಿನಗಳು ನನ್ನ ಜೀವನವನ್ನೇ ಸಂಪೂರ್ಣವಾಗಿ ಬದಲಿಸಿಬಿಟ್ಟಿವೆ” ಎಂದು ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ ಕೃಷಿ ತಾಪಂಡ.
ಮರೆತು ಬದುಕಲು ಸಾಧ್ಯವಿಲ್ಲ
”ಈ ಎಲ್ಲದರ ನಡುವೆ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದ ಒಬ್ಬರನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ಜೊತೆ ಸದಾ ನಿಂತು, ನನ್ನನ್ನು ಕಾಪಾಡಿ, ನಿಸ್ವಾರ್ಥವಾಗಿ ಕಾಳಜಿ ವಹಿಸಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವ ನೋವನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರಿಲ್ಲದ ಖಾಲಿತನವನ್ನು ನಾನು ಎಂದಾದರೂ ಮರೆತು ಬದುಕಲು ಸಾಧ್ಯವಾಗುತ್ತದೆಯೇ ಎಂಬುದೇ ಗೊತ್ತಿಲ್ಲ”
”ನಾನು ಈ ಮಾತುಗಳನ್ನು ಒಬ್ಬ ವ್ಯಕ್ತಿಗೆ ಅಥವಾ ಒಂದು ಮಾಧ್ಯಮಕ್ಕೆ ಮಾತ್ರ ಹೇಳುತ್ತಿಲ್ಲ. ಸತ್ಯವನ್ನು ತಿಳಿಯದೇ, ತಮ್ಮ ನಡೆ-ನುಡಿಗಳ ಹಿಂದೆ ಉಳಿದವರ ಬದುಕಿನ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಎಂಬುದನ್ನು ಅರಿಯದೇ ಉತ್ತರಗಳಿಗಾಗಿ ಹುಡುಕುತ್ತಿರುವ ಪ್ರತಿಯೊಬ್ಬರಿಗೂ ಹೇಳುತ್ತಿದ್ದೇನೆ. ದುಃಖದಲ್ಲಿರುವ ಯಾರೂ ತಮ್ಮ ನೋವನ್ನು ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಬರಬಾರದು”
”ನನಗಾಗಿ ಪ್ರಾರ್ಥಿಸಿದ, ನನ್ನ ಯೋಗಕ್ಷೇಮ ವಿಚಾರಿಸಿದ, ನನ್ನ ಸ್ನೇಹಿತರ ಮೂಲಕ ಸಂಪರ್ಕಿಸಿದ ಮತ್ತು ಪ್ರೀತಿಯಿಂದ ಸಂದೇಶ ಕಳುಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಈಗ ಪ್ರತಿಕ್ರಿಯಿಸುವಷ್ಟು ಶಕ್ತಿ ನನ್ನಲ್ಲಿಲ್ಲದಿರಬಹುದು. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿಯನ್ನು ನಾನು ಅನುಭವಿಸುತ್ತಿದ್ದೇನೆ. ಅದಕ್ಕಾಗಿ ನಾನು ಸದಾ ಋಣಿಯಾಗಿದ್ದೇನೆ. ನನ್ನ ಸ್ನೇಹಿತರು ನನ್ನ ಜತೆಯಲ್ಲಿದ್ದಾರೆ. ಉಳಿದಿರುವ ಅಲ್ಪ ಶಕ್ತಿಯಿಂದ ನಡೆದಿರುವ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ” ಎಂದಿದ್ದಾರೆ ಕೃಷಿ ತಾಪಂಡ.
ನನ್ನ ಒಂದು ಭಾಗವೇ ಕಳೆದುಕೊಂಡಂತಾಗಿದೆ
”ನಾನು ಬಹಳ ದಿನಗಳಿಂದ ನೋವನ್ನು ಹೊತ್ತು ಬದುಕುತ್ತಿದ್ದೇನೆ. ಈಗ ಮತ್ತೊಂದು ಊಹಿಸಲಾಗದ ನಷ್ಟವನ್ನು ಎದುರಿಸುತ್ತಿದ್ದೇನೆ. ನನ್ನ ಒಂದು ಭಾಗವನ್ನೇ ಕಳೆದುಕೊಂಡಂತಾಗಿದೆ. ಈ ನೋವನ್ನು ಇನ್ನಷ್ಟು ತೀವ್ರಗೊಳಿಸಿರುವುದು ಏನೆಂದರೆ, ನನಗೆ ಸರಿಯಾಗಿ ದುಃಖಿಸಿಕೊಳ್ಳಲು ಕೂಡ ಸಮಯ ಮತ್ತು ಅವಕಾಶ ಸಿಕ್ಕಿಲ್ಲ.’
”ಅವರ ಕುಟುಂಬ, ಸ್ನೇಹಿತರು ಮತ್ತು ಆತ್ಮೀಯರು ಈ ಅಗಾಧ ನಷ್ಟವನ್ನು ಸಹಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ, ಅವರ ಸಾವಿನ ಬಗ್ಗೆ ನಿರಂತರ ಊಹಾಪೋಹಗಳು, ಆರೋಪಗಳು ಮತ್ತು ಅದನ್ನು ಒಂದು ಸುದ್ದಿಯನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ” ಎಂದು ತಮ್ಮ ಬೇಸರವನ್ನ ಹೊರಹಾಕಿದ್ದಾರೆ ಕೃಷಿ ತಾಪಂಡ.
ಮಾಧ್ಯಮಗಳಿಗೆ ಮನವಿ
”ಕೆಲವು ಮಾಧ್ಯಮಗಳು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಗೌರವ ತೋರಿವೆ. ಆದರೆ ಇನ್ನೂ ಕೆಲವು ಮಾಧ್ಯಮಗಳು ಪ್ರತಿಕ್ರಿಯೆ ಪಡೆಯಲು ಮಾತ್ರ ಪ್ರಯತ್ನಿಸುತ್ತಿವೆ. ಅವರು ಮೊದಲು ಕೇಳಿದ ಪ್ರಶ್ನೆ, “ನಿಮ್ಮ ಪ್ರತಿಕ್ರಿಯೆ ಏನು?” ಎಂಬುದಾಗಿತ್ತು. “ನೀವು ಹೇಗಿದ್ದೀರಿ?”, “ಈ ನೋವನ್ನು ಹೇಗೆ ಎದುರಿಸುತ್ತಿದ್ದೀರಿ?” ಎಂದು ಕೇಳುವವರ ಸಂಖ್ಯೆ ಬಹಳ ಕಡಿಮೆ”
”ಎಲ್ಲಾ ಮಾಧ್ಯಮಗಳಿಗೆ (ಎಲ್ಲರಿಗೂ ಅಲ್ಲ) ಮತ್ತು ಇನ್ನೂ ಊಹಾಪೋಹಗಳನ್ನು ಹರಡುತ್ತಿರುವ ಎಲ್ಲರಿಗೂ ನಾನು ಕೈಮುಗಿದು ಮನವಿ ಮಾಡುತ್ತೇನೆ – ದಯವಿಟ್ಟು ಇದನ್ನು ನಿಲ್ಲಿಸಿ. ದಯವಿಟ್ಟು ಅವರ ಕುಟುಂಬವನ್ನು, ನನ್ನ ಕುಟುಂಬವನ್ನು ಅಥವಾ ನಮ್ಮ ಸ್ನೇಹಿತರನ್ನು ತೊಂದರೆಪಡಿಸಬೇಡಿ. ಒಬ್ಬರ ಸಾವನ್ನು ಸುದ್ದಿಯಾಗಿಸಬೇಡಿ. ಮನರಂಜನೆಯ ವಿಷಯವಾಗಿಸಬೇಡಿ. ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದಾರೆ. ನಾವು ಪ್ರತಿಕ್ಷಣವೂ ಈ ದುಃಖದೊಂದಿಗೆ ಬದುಕಲು ಹೋರಾಡುತ್ತಿದ್ದೇವೆ. ದಯವಿಟ್ಟು ನಮಗೆ ಗೌರವದಿಂದ, ಶಾಂತಿಯಿಂದ ದುಃಖಿಸಿಕೊಳ್ಳುವ ಅವಕಾಶ ನೀಡಿ. ಮಾನಸಿಕ ಆರೋಗ್ಯ ತುಂಬಾ ಸೂಕ್ಷ್ಮವಾದದ್ದು. ದುಃಖವೂ ಅಷ್ಟೇ ಸೂಕ್ಷ್ಮವಾದದ್ದು”
”ಅನಗತ್ಯ ಪ್ರಶ್ನೆಗಳು, ಆಧಾರವಿಲ್ಲದ ಊಹಾಪೋಹಗಳು, ವದಂತಿಗಳು ಮತ್ತು ಸಂಚಲನಕಾರಿ ಸುದ್ದಿಗಳು ಇನ್ನೂ ಬದುಕಿರುವವರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ನಾನು ಯಾವಾಗಲೂ ನಂಬಿರುವ ಒಂದು ಮಾತು ಇದೆ – ‘ನಿಮ್ಮಿಂದ ಯಾರ ಮುಖದಲ್ಲಿ ನಗು ಮೂಡಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ ಅವರ ಕಣ್ಣೀರಿಗೆ ನೀವು ಕಾರಣರಾಗಬೇಡಿ”
“ಯಾರಿಗಾದರೂ ಬದುಕಲು ಒಂದು ಕಾರಣ ನೀಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ ಅವರ ಬದುಕಿನ ಆಶೆಯನ್ನು ಕಸಿದುಕೊಳ್ಳುವ ಕಾರಣ ಮಾತ್ರ ಆಗಬೇಡಿ. ಕೈಮುಗಿದು ಮತ್ತೊಮ್ಮೆ ಎಲ್ಲರಿಗೂ ಮನವಿ ಮಾಡುತ್ತೇನೆ… ಅವರು ಶಾಂತಿಯಿಂದ ಚಿರನಿದ್ರೆ ಮಾಡುವಂತೆ ಬಿಡಿ. ಅವರ ಕುಟುಂಬ, ಸ್ನೇಹಿತರು ಮತ್ತು ನಮ್ಮೆಲ್ಲರಿಗೂ ಈ ನೋವನ್ನು ಶಾಂತಿಯಿಂದ ಅನುಭವಿಸಲು ಅವಕಾಶ ನೀಡಿ. ದಯವಿಟ್ಟು ಮಾನವೀಯತೆ ಮತ್ತು ಕರುಣೆಯನ್ನು ಆಯ್ಕೆ ಮಾಡಿ. ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ… ದಯವಿಟ್ಟು ಇದನ್ನು ಇಲ್ಲಿಗೇ ನಿಲ್ಲಿಸಿ” ಎಂದು ಕೃಷಿ ತಾಪಂಡ ಮನವಿ ಮಾಡಿದ್ದಾರೆ.
Donation scam ಅಯೋಧ್ಯೆ ದೇಣಿಗೆ ದುರ್ಬಳಕೆ ಪ್ರಕರಣ: ಎಸ್ಐಟಿ ತನಿಖೆ ಚುರುಕು, ಕರ್ನಾಟಕದಲ್ಲೂ ಇಬ್ಬರ ವಿರುದ್ಧ ದೂರು
Kavya Maran- Aniruddh ಕೊಲವೆರಿ ಡಿ ನಿರ್ದೇಶಕ ಅನಿರುದ್ಧ ಮದುವೆಯಾಗ್ತಾರಂತೆ ಕಾವ್ಯಾ ಮಾರನ್
Black magic village ದೇಶದ ಈ ಊರು ಮಾಟ- ಮಂತ್ರಗಳ ರಾಜಧಾನಿ! ಪ್ರತಿ ಮನೆಯಲ್ಲೂ ಇದ್ದಾರೆ ಮಾಟಗಾರರು!