newsics.com
ಶಿರಸಿ(ಉತ್ತರ ಕನ್ನಡ): ವಿಷಪೂರಿತ ಹಾವು ಕಚ್ಚಿ ಆರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮೃತಪಟ್ಟು, ಆತನ ಸಹೋದರಿ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಸಹಸ್ರಳ್ಳಿಯ ನಿವಾಸಿ ಪುಟ್ಟಪ್ಪ ನಾಯ್ಕ ಎಂಬುವರ ಪುತ್ರ ಮಿಥುನ್ (12) ಹಾವು ಕಡಿತಕ್ಕೆ ಜೀವ ಕಳೆದುಕೊಂಡ ಬಾಲಕ. ಈತನ ತಂಗಿ ದೀಕ್ಷಾ ಪುಟ್ಟಪ್ಪ ನಾಯ್ಕ (9) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಂಗಳವಾರ ತಡರಾತ್ರಿ ಮಿಥುನ್ ಹಾಗೂ ದೀಕ್ಷಾ ತಂದೆಯೊಂದಿಗೆ ಮಲಗಿದ್ದರು. ಬೆಳಗಿನ ಜಾವ ಇಬ್ಬರೂ ಮಕ್ಕಳು ದಿಢೀರ್ ಎದ್ದು ವಾಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಇದರಿಂದ ಗಾಬರಿಯಾದ ಪಾಲಕರು ಗಮನಿಸಿದಾಗ ಮಕ್ಕಳು ಅಸ್ವಸ್ಥರಾಗಿರುವುದು ಕಂಡುಬಂದಿದೆ. ತಕ್ಷಣವೇ ಪಾಲಕರು ಅಕ್ಕಪಕ್ಕದವರನ್ನು ಕರೆದಿದ್ದಾರೆ. ಈ ಸಂದರ್ಭದಲ್ಲಿ ಹಾವೊಂದು ಮನೆಯೊಳಗಿಂದ ಕತ್ತಲಲ್ಲಿ ಹೊರಬರುತ್ತಿದ್ದುದನ್ನು ಗಮನಿಸಿದ್ದಾರೆ.
ತಕ್ಷಣವೇ ಇಬ್ಬರನ್ನೂ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ದೀಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.
ವಿಷಪೂರಿತ ಹಾವು ಮಿಥುನ್ನ ಕಿವಿ ಹಾಗೂ ದೀಕ್ಷಾಳ ಕೈ ಬೆರಳಿಗೆ ಕಚ್ಚಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬನವಾಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.