newsics.com / ನ್ಯೂಸಿಕ್ಸ್
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಅವರ ಮತದಾನದ ವೇಳೆ ಹೈಡ್ರಾಮಾ ನಡೆಯಿತು.
ಚುನಾವಣೆಗೆ ಮುನ್ನವೇ ಯತ್ನಾಲ್ ಅವರು ಬಿಜೆಪಿ ಅಭ್ಯರ್ಥಿ ಲಿಂಗರಾಜ್ ಪಾಟೀಲ್ ಅವರಿಗೆ ಬೆಂಬಲ ಸೂಚಿಸಿ, ಅವರ ಪರ ಮತ ಚಲಾಯಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಹಿರಂಗ ಪತ್ರ ಬರೆದಿದ್ದರು. ಅಲ್ಲದೆ, ಆ ಪತ್ರವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು.
ಪತ್ರದಲ್ಲಿ, “ನಾನು ಬಿಜೆಪಿ ನಾಯಕತ್ವವನ್ನು ವಿರೋಧಿಸುತ್ತಿಲ್ಲ. ಆದರೆ ಕರ್ನಾಟಕ ಬಿಜೆಪಿ ಘಟಕದಲ್ಲಿ ಕುಟುಂಬ ರಾಜಕಾರಣ ಹೆಚ್ಚುತ್ತಿರುವುದನ್ನು ವಿರೋಧಿಸುತ್ತಿದ್ದೇನೆ” ಎಂದು ಯತ್ನಾಲ್ ಉಲ್ಲೇಖಿಸಿದ್ದರು.
ಈ ಬೆಳವಣಿಗೆಯನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ನಾಯಕ ಹಾಗೂ ಚುನಾವಣಾ ಏಜೆಂಟ್ ಎನ್.ಎಸ್. ಉಗ್ರಪ್ಪ ಅವರು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದರು. ಯತ್ನಾಲ್ ಅವರು ಸಾರ್ವಜನಿಕವಾಗಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕುವುದಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅವರ ಮತವನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಗ್ರಪ್ಪ, “ಮತದಾನದ ಗೌಪ್ಯತೆಯ ತತ್ವಕ್ಕೆ ವಿರುದ್ಧವಾಗಿ ಯತ್ನಾಲ್ ಅವರು ತಮ್ಮ ಮತದ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಆದ್ದರಿಂದ ಅವರ ಮತವನ್ನು ಪರಿಗಣಿಸದಂತೆ ನಾವು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ” ಎಂದು ತಿಳಿಸಿದರು.
ಯತ್ನಾಲ್ ಅವರ ಮತದ ಕುರಿತು ಚುನಾವಣಾಧಿಕಾರಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್ಬಾಕ್ಸ್ಗೆ FSSAI ಸಲಹೆಗಳು