newsics.com/ ನ್ಯೂಸಿಕ್ಸ್
ನಿಯಾಮೆ: ನೈಜರ್ ದೇಶದ ಸಹಾರಾ ಮರುಭೂಮಿಯಲ್ಲಿ ಟ್ರಕ್ ಒಂದು ಕೆಟ್ಟುನಿಂತ ಕಾರಣ ಅದರಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 50 ಜನರು ಬಾಯಾರಿಕೆಯಿಂದ ಬಳಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಹಬ್ಬಕ್ಕಾಗಿ ಮಾಲಿ ದೇಶದಿಂದ ಹಿಂದಿರುಗುತ್ತಿದ್ದ ಜನರನ್ನು ಸಾಗಿಸುತ್ತಿದ್ದ ಟ್ರಕ್ ಮರುಭೂಮಿಯ ನಡುವೆ ಕೆಟ್ಟುನಿಂತಿದ್ದು ಟ್ರಕ್ ಅನ್ನು ದುರಸ್ತಿ ಮಾಡುವ ಯತ್ನ ವಿಫಲವಾಗಿದೆ.
ಅಧಿಕ ತಾಪಮಾನದಿಂದ ಮತ್ತು ನೀರಿನ ಅಲಭ್ಯತೆಯಿಂದಾಗಿ ಟ್ರಕ್ನಲ್ಲಿದ್ದವರು ಬಳಲಿದ್ದಾರೆ. ಪ್ರಯಾಣಿಕರಲ್ಲಿ ಇಬ್ಬರು ಕಾಲ್ನಡಿಗೆಯಲ್ಲಿ ಸುಮಾರು 50 ಕಿ.ಮೀ ಸಾಗಿ ಅಸ್ಸಾಮಕ ಎಂಬ ನಗರವನ್ನು ತಲುಪಿದ್ದು ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದರೂ ಟ್ರಕ್ನಲ್ಲಿದ್ದ 50 ಮಂದಿ ಅಧಿಕ ತಾಪಮಾನದ ಹೊಡೆತ ಮತ್ತು ಬಾಯಾರಿಕೆಯಿಂದ ಬಳಲಿ ಮೃತಪಟ್ಟಿದ್ದರು ಎಂದು ಬಿಬಿಸಿ ವರದಿ ಮಾಡಿದೆ.
ರಕ್ಷಣಾ ತಂಡ ಹಿಂದಿರುಗುತ್ತಿದ್ದಾಗ ಸ್ವಲ್ಪ ದೂರದಲ್ಲಿ ಮತ್ತೊಂದು ಲಾರಿ ಕೆಟ್ಟು ನಿಂತಿರುವುದನ್ನು ಗಮನಿಸಿ, ಲಾರಿಯಲ್ಲಿದ್ದ 60ಕ್ಕೂ ಹೆಚ್ಚು ಜನರಿಗೆ ನೀರು ಒದಗಿಸಿದೆ. ಬಳಿಕ ಲಾರಿಯನ್ನು ದುರಸ್ತಿಗೊಳಿಸಿ ಪ್ರಯಾಣ ಮುಂದುವರಿಸಲು ಅನುವು ಮಾಡಿಕೊಟ್ಟಿದೆ ಎಂದು ವರದಿ ಹೇಳಿದೆ. ನೈಜರ್ ನ ಮರುಭೂಮಿ ಪ್ರದೇಶವು ಆಫ್ರಿಕನ್ ರಾಷ್ಟ್ರಗಳಿಂದ ಯುರೋಪ್ಗೆ ತೆರಳಲು ಪ್ರಯತ್ನಿಸುವ ವಲಸಿಗರಿಗೆ ಹತ್ತಿರದ ದಾರಿಯಾಗಿದೆ.
Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್